ರಾಮನಗರ: ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆಗೆ ಒಳಗಾಗಿದ್ದ ಮಾಹಿತಿ ಹಕ್ಕು ಕಾರ್ಯಕರ್ತ ವೆಂಕಟೇಶ್ (50) ಚಿಕಿತ್ಸೆಗೆ ಸ್ಪಂದಿಸದೇ ಭಾನುವಾರ ರಾತ್ರಿ ಸಾವನ್ನಪ್ಪಿದರು.
ಇದೇ ತಿಂಗಳ 15ರಂದು ವೆಂಕಟೇಶ್ ತಾವರೆಕರೆಯ ತಮ್ಮ ತೋಟದ ಮನೆಯಲ್ಲಿ ಇದ್ದಾಗ ದುಷ್ಕರ್ಮಿಗಳ ತಂಡ ಮನೆಗೆ ನುಗ್ಗಿ ಮಾರಾಕಾಸ್ತ್ರಗಳಿಂದ ಅವರ ಕೈ ಮತ್ತು ಕಾಲು ಕತ್ತರಿಸಿ ಪರಾರಿ ಆಗಿತ್ತು. ಚಿರಾಟ ಕೇಳಿ ಸ್ಥಳೀಯರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರು ಅವರ ಮುಂಗೈ ಮತ್ತು ಮೊಣಕಾಲನ್ನು ಶಸ್ತ್ರಚಿಕಿತ್ಸೆ ಮೂಲಕ ಮರು ಜೋಡಣೆ ಮಾಡಿದ್ದರು.
ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೆಂಕಟೇಶ್ ಭಾನುವಾರ ಮರಣ ಹೊಂದಿದರು ಎಂದು ಪೊಲೀಸರು ತಿಳಿಸಿದರು.
ಆರೋಪಿಗಳ ಪತ್ತೆಗೆ ರಾಮನಗರ ಎಸ್ಪಿ ಗಿರೀಶ್ ಮೂರು ತಂಡಗಳನ್ನು ರಚಿಸಿದ್ದಾರೆ. ಆರ್ಟಿಐ ವಿಚಾರದ ಜೊತೆಗೆ ಹಣಕಾಸು ಇಲ್ಲವೇ ವೈಯಕ್ತಿಕ ವಿಚಾರ, ಹೀಗೆ ಎಲ್ಲ ಆಯಾಮಗಳನ್ನು ಇಟ್ಟುಕೊಂಡು ತನಿಖೆ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.