ಮಾಗಡಿ: ತಾಲ್ಲೂಕಿನ ಸಾವನದುರ್ಗದ ಸಾವಂದಿ ವೀರಭದ್ರಸ್ವಾಮಿ ಹಾಗೂ ಭದ್ರಕಾಳಮ್ಮ ಜಾತ್ರೆ ಅಂಗವಾಗಿ ಫೆ. 25ರಂದು ಮಧ್ಯಾಹ್ನ 12ಗಂಟೆಗೆ ಬ್ರಹ್ಮ ರಥೋತ್ಸವ ನಡೆಯಲಿದ್ದು, ತಾಲ್ಲೂಕು ಆಡಳಿತ ಸಿದ್ಧತೆ ಪೂರ್ಣಗೊಳಿಸಿದೆ.
ಸಾವನದುರ್ಗ ನಾಡಿನ ಗಿರಿಧಾಮಗಳಲ್ಲಿ ಒಂದಾಗಿದೆ. ಚೋಳರ ದೊರೆ ರಾಜೇಂದ್ರ ಚೋಳ ಕ್ರಿ.ಶ 1032ರಲ್ಲಿ ಸಾವನದುರ್ಗದಲ್ಲಿ ಸಾವಂದಿ ವೀರಭದ್ರಸ್ವಾಮಿ, ಭದ್ರಕಾಳಮ್ಮ, ವೈದ್ಯನಾಥೇಶ್ವರ, ಕಾಶಿವಿಶ್ವೇಶ್ವರ ದೇಗುಲಗಳನ್ನು ನಿರ್ಮಿಸಿದ. ವೀರಭದ್ರಸ್ವಾಮಿ ದೇಗುಲವನ್ನು ಸರ್ಕಾರ ಮತ್ತು ಸಾವಂದಿ ವೀರಭದ್ರಸ್ವಾಮಿ ಕೈಂಕರ್ಯ ಸಮಿತಿ ಹಾಗೂ ಭಕ್ತರು ಜೀರ್ಣೋದ್ಧಾರ
ಮಾಡಿದ್ದಾರೆ.
ನಿತ್ಯ ಪೂಜೆ, ಉತ್ಸವಗಳು ನಡೆಯುತ್ತಿವೆ. ಸಾವನದುರ್ಗದಲ್ಲಿ ಪ್ರಾಗೈತಿಹಾಸಿಕ ನೆಲೆಯ ಕುರುಹುಗಳು, ಕಲ್ಗೋರಿಗಳು, ಮಡಿಕೆ, ಕುಡಿಕೆಗಳನ್ನು ಪತ್ತೆಹಚ್ಚಿರುವುದಾಗಿ ಕ್ರಿ.ಶ. 1881ರಲ್ಲಿ ಸಾವನದುರ್ಗದ ಇಟ್ಟಿಗೆ ಬಯಲಿನಲ್ಲಿ ಸಂಶೋಧನೆ ನಡೆಸಿರುವ ಸಂಶೋಧಕ ಕರ್ನಲ್ ಬ್ರಾನ್ಪಿಲ್
ಹೇಳಿದ್ದಾನೆ.
ದಟ್ಟ ಕಾನನದಲ್ಲಿ ನೂರಾರು ಪ್ರಭೇದಕ್ಕೆ ಸೇರಿದ ಪಕ್ಷಿಸಂಕುಲ, ಪ್ರಾಣಿಸಂಕುಲ ಹಾಗೂ ಸಸ್ಯಸಂಕುಲವಿದೆ. ಅರಣ್ಯ ಪ್ರದೇಶದಲ್ಲಿ ಅಮೂಲ್ಯವಾದ ದೇಶೀಯ ಗಿಡಮೂಲಿಕಾ ಸಸ್ಯಗಳಿವೆ. ಶಿಲಾಶಾಸನಗಳು, ವೀರಗಲ್ಲುಗಳು ಇವೆ ಎಂದು ದಾಖಲಿಸಿದ್ದಾನೆ.
ಸಾಹಿತಿ ಪೂರ್ಣಚಂದ್ರ ತೇಜಸ್ವಿ ಬರೆದಿರುವ ‘ಮಾಗಡಿ ಚಿರತೆ ಮತ್ತು ಮುನಿಸ್ವಾಮಿ’ ಕೃತಿಯಲ್ಲಿ ಸಾವನದುರ್ಗದ ಪರಿಸರವು ಚಿತ್ರಿತವಾಗಿದೆ. ಮಾಗಡಿ ಬೇರಿನ ಆಗರವಾಗಿದ್ದ ಬಗ್ಗೆ ಮಲೇಶಿಯಾ, ಚೀನಾದ ಪಾರಂಪರಿಕ ಗಿಡಮೂಲಿಕಾ ಪಂಡಿತರು ದಾಖಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.