ADVERTISEMENT

ರಾಮನಗರ | ಮಕ್ಕಳ ಸ್ವಾಗತಕ್ಕೆ ಶಾಲೆಗಳು ಸಜ್ಜು

ನಾಳೆಯಿಂದ ಶೈಕ್ಷಣಿಕ ಚಟುವಟಿಕೆ ಪುನರಾರಂಭ

​ಪ್ರಜಾವಾಣಿ ವಾರ್ತೆ
Published 15 ಮೇ 2022, 4:45 IST
Last Updated 15 ಮೇ 2022, 4:45 IST
ಶಾಲೆಯ ಆವರಣದಲ್ಲಿ ಬಿಸಿಯೂಟ ಸವಿಯುತ್ತಿರುವ ಮಕ್ಕಳು (ಸಂಗ್ರಹ ಚಿತ್ರ)
ಶಾಲೆಯ ಆವರಣದಲ್ಲಿ ಬಿಸಿಯೂಟ ಸವಿಯುತ್ತಿರುವ ಮಕ್ಕಳು (ಸಂಗ್ರಹ ಚಿತ್ರ)   

ರಾಮನಗರ: ಜಿಲ್ಲೆಯಾದ್ಯಂತ ಸೋಮವಾರದಿಂದ ಹೊಸ ಶೈಕ್ಷಣಿಕ ವರ್ಷ ಆರಂಭ ಆಗಲಿದ್ದು, ಮಕ್ಕಳನ್ನು ಸ್ವಾಗತಿಸಲು ಶಾಲೆಗಳು ಸಜ್ಜಾಗಿವೆ.

ಸಾಮಾನ್ಯವಾಗಿ ಜೂನ್‌ 1ರಿಂದ ರಾಜ್ಯದಲ್ಲಿ ಶಾಲೆಗಳು ಆರಂಭ ಆಗುತ್ತಿದ್ದವು. ಆದರೆ, ಕೋವಿಡ್ ಕಾರಣಕ್ಕೆ ಕಳೆದ ಎರಡು ವರ್ಷಗಳಲ್ಲಿ ಶಾಲೆಗಳು ಸರಿಯಾಗಿ ನಡೆದಿಲ್ಲ. ಇದರಿಂದ ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿದ್ದು, ಈ ಅಸಮತೋಲನ ತಪ್ಪಿಸಿ ಅವರನ್ನು ಕಲಿಕೆಗೆ ಸಜ್ಜುಗೊಳಿಸುವ ಸಲುವಾಗಿ ಈ ವರ್ಷ ಮೇ 16ರಿಂದಲೇ ಸರ್ಕಾರ ಶಾಲೆಗಳನ್ನು ಆರಂಭಿಸುತ್ತಿದೆ.

ಶಿಕ್ಷಕರಿಗೆ ಶಿಬಿರ: ಶಾಲೆ ಆರಂಭದ ಮೊದಲ ಎರಡು ವಾರ ಮಕ್ಕಳಿಗೆ ಕಲಿಕಾ ಚೇತರಿಕೆ ಕಾರ್ಯಕ್ರಮವು ನಡೆಯಲಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಅವರಿಗೆ ವಿಶೇಷ ಶಿಕ್ಷಣ ನೀಡಲು ಯೋಜಿಸಲಾಗಿದೆ. ಇದಕ್ಕಾಗಿ ಶಿಕ್ಷಕರಿಗೆ ಜಿಲ್ಲೆಯ ಡಯಟ್‌ ಕೇಂದ್ರದಲ್ಲಿ ಈಗಾಗಲೇ ತರಬೇತಿಯನ್ನೂ ನೀಡಲಾಗಿದೆ.

ADVERTISEMENT

ಸಿಹಿಯೂಟದ ಸ್ವಾಗತ: ಜಿಲ್ಲೆಯ ಕೆಲವು ಸರ್ಕಾರಿ ಶಾಲೆಗಳನ್ನು ಈಗಾಗಲೇ ಸ್ವಚ್ಛಗೊಳಿಸಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಿದ್ಧತೆಗಳು ಆಗಿಲ್ಲದ ಕಡೆಗಳಲ್ಲಿ ಶಿಕ್ಷಕರು ಭಾನುವಾರ ತೆರಳಿ ಪ್ರಾರಂಭೋತ್ಸವಕ್ಕೆ ಅಗತ್ಯವಾದ ಚಟುವಟಿಕೆಗಳನ್ನು ಕೈಗೊಳ್ಳಲಿದ್ದಾರೆ. ಮಕ್ಕಳಿಗೆ ಬೇಕಾದ ಕುಡಿಯುವ ನೀರು, ಶೌಚಾಲಯ ಮೊದಲಾದ ವ್ಯವಸ್ಥೆಗಳನ್ನು ಪರಿಶೀಲಿಸಲಿದ್ದಾರೆ.

ಸೋಮವಾರ ಶಾಲೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಿ ಮಕ್ಕಳನ್ನು ಬರಮಾಡಿಕೊಳ್ಳಲಾಗುತ್ತದೆ. ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಕ್ಕಳಿಂದ ಜಾಥಾ ನಡೆಯಲಿದೆ. ಮಧ್ಯಾಹ್ನ ವಿದ್ಯಾರ್ಥಿಗಳಿಗೆ ಸಿಹಿ ಊಟವನ್ನೂ ಉಣ ಬಡಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.