ADVERTISEMENT

ಜಡೇದೇವರ ಮಠದಲ್ಲಿ ಶರಣರ ಸಾಂಗತ್ಯ

ಇಮ್ಮಡಿ ಕೆಂಪೇಗೌಡರ ವಂಶಜರು 64 ಶರಣ ಮಠಗಳ ಸ್ಥಾಪನೆ ಬಗ್ಗೆ ಇತಿಹಾಸದಲ್ಲಿ ಉಲ್ಲೇಖ

ದೊಡ್ಡಬಾಣಗೆರೆ ಮಾರಣ್ಣ
Published 10 ಜುಲೈ 2020, 8:00 IST
Last Updated 10 ಜುಲೈ 2020, 8:00 IST
ಮಾಗಡಿಜಡೆದೇವರ ಮಠದ ಹೊರನೋಟ
ಮಾಗಡಿಜಡೆದೇವರ ಮಠದ ಹೊರನೋಟ   

ಮಾಗಡಿ: ಕಲ್ಯಾಣಕ್ರಾಂತಿ ನಂತರ ಶ್ರೀಶೈಲ, ಉಳವಿ, ಉಜ್ಜೈನಿ, ಕಾಶಿ ಮತ್ತು ದಕ್ಷಿಣ ಭಾರತದ ಕಡೆ ಶರಣರು ಚದುರಿದರು.

ದಕ್ಷಿಣ ಕಾಶಿಯೆಂದು ಹೆಸರಾಗಿದ್ದ ಶಿವಗಂಗೆ ಮೂಲಕ ಮಾಗಡಿ ಪ್ರಾಂತ್ಯ ತಲುಪಿದರು. ಕಕುದ್ಗಿರಿ ಗುರುನಂಜೇಶರಿಂದ ಶಿವಧೀಕ್ಷೆ ಪಡೆದಿದ್ದ ಅದರಂಗಿಯ ಗಗನಧಾರ್ಯರು ಇಮ್ಮಡಿ ಕೆಂಪೇಗೌಡರಿಗೆ ಲಿಂಗಧಾರಣೆ ಮಾಡಿಸಿ, ಶರಣ ಪರಂಪರೆಗೆ ಪ್ರೋತ್ಸಾಹ ನೀಡು
ವಂತೆ ಸೂಚಿಸಿದರು. ಗುರು ಅಣತಿಯಂತೆ ಇಮ್ಮಡಿ ಕೆಂಪೇಗೌಡರ ವಂಶಜರು ಮಾಗಡಿ ಸೀಮೆಯಲ್ಲಿ 64 ಶರಣ ಮಠಗಳನ್ನು ಸ್ಥಾಪನೆ ಮಾಡಿರುವ ಬಗ್ಗೆ ಇತಿಹಾಸದಲ್ಲಿ ಉಲ್ಲೇಖವಿದೆ.

ಮಾಗಡಿ ನೈಋತ್ಯ ದಿಕ್ಕಿನಲ್ಲಿ ಇರುವ ಜಡೇದೇವರ ಮಠ ಧರ್ಮ ಸಂಸ್ಕೃತಿ, ಜನಪದ, ಚರಿತ್ರೆ ಇತರ ಅಂಶಗಳ ಬೆಳವಣಿಗೆಗೆ ಇಂಬು ನೀಡುತ್ತಿರುವ ದಿವ್ಯ ಕ್ಷೇತ್ರ. ಕೆರೆಕಟ್ಟೆಗಳಿಂದ ಕಂಗೊಳಿಸುತ್ತಿರುವ ತಪೋವನ. ಮಹಾತಪಸ್ವಿ ಜಡೇಶ್ವರಸ್ವಾಮಿ ಮಠದ ಪ್ರಥಮ ಗುರು. ಜಂಗಮ ಜೋಳಿಗೆ ಹೆಗಲೇರಿಸಿಕೊಂಡು ಭಿಕ್ಷೆ ಬೇಡಿ ಮಠ ಕಟ್ಟಿದವರು. ಮಠದ ಭಕ್ತೆ ಶಿವಯೋಗಿನಿ ಚೆನ್ನಮ್ಮ ಎಂಬಾಕೆ ಮಕ್ಕಳಿಲ್ಲದ ಕಾರಣ ತಮಗೆ ಪಿತ್ರಾರ್ಜಿತವಾಗಿ ಬಂದಿದ್ದ 48ಎಕರೆ ಭೂಮಿ ದಾನವಾಗಿ ಮಠಕ್ಕೆ ನೀಡಿದರು.

ADVERTISEMENT

ಮಠದ ಇತಿಹಾಸ: ಜಡೆದೇವರ ಮಠಕ್ಕೆ 800 ವರ್ಷಗಳ ಇತಿಹಾಸವಿದೆ. ಮಾಗಡಿ ಸೀಮೆಗೆ ರೋಗರುಜಿನ ಬಂದಾಗ ಗುರು ಅಣತಿ
ಯಂತೆ ಇಮ್ಮಡಿ ಕೆಂಪೇಗೌಡರು ‘ಬೃಹತ್ ಕಲ್ಲಿನಿಂದ ರಾಗಿ ಬೀಸಿ ಗಂಜಿ ಮಾಡಿಸಿ ರೋಗಿಗಳಿಗೆ ಉಣಬಡಿಸಿ ಗುಣಪಡಿಸಿದ ಮಹಾನುಭಾವ. ಮಠದಲ್ಲಿ ಇಂದಿಗೂ ಬೃಹತ್‌ ರಾಗಿಕಲ್ಲು ಇಂದಿಗೂ’ ಇದೆ.

ಮಠಕ್ಕೆ ಬೆಂಬಲವಾಗಿ ನಿಂತವರು: ಮಠದ ಸಿದ್ದಲಿಂಗಸ್ವಾಮಿ, ಫಲಹಾರಸ್ವಾಮಿ, ಸದಾಶಿಸ್ವಾಮಿ, ಉಪಹಾರಸ್ವಾಮಿ, ಬಸವರಾಜಸ್ವಾಮಿ, ಸಿದ್ದಲಿಂಗಸ್ವಾಮಿ, ಶಂಕರಸ್ವಾಮಿ ಶೈವ ಪರಂಪರೆ ಉಳಿಸಿ ಬೆಳೆಸಿದ್ದಾರೆ. ಮಠದ ಯಶಸ್ಸಿಗೆ ಶ್ರಮಿಸಿದ್ದಾರೆ. ಗುಡೇಮಾರನಹಳ್ಳಿ ಜಗಣ್ಣಯ್ಯಮಠದ ಭೂಮಿ ವ್ಯಾಜ್ಯದಲ್ಲಿ ಸಿಲುಕಿದ್ದಾಗ ಜಡೇದೇವರ ಮಠದ ಬಸವರಾಜ ಸ್ವಾಮೀಜಿ ಅಲ್ಲಿನ ಗುರುಗಳಿಗೆ ಬೆಂಬಲವಾಗಿ ನಿಂತು ಹಳೆ ಮಠ ಉಳಿಸಲು ಶ್ರಮಿಸಿದ್ದಾರೆ.

ಸಿದ್ದಗಂಗಾ ಮಠದ ಡಾ.ಶಿವಕುಮಾರಸ್ವಾಮೀಜಿ ಮಾರ್ಗದರ್ಶನದಲ್ಲಿ ಶೈವಾಗಾಮ, ವೇದ, ಆಗಮ, ಜ್ಯೋತಿಷ್ಯ ಶಾಸ್ತ್ರ ಅಧ್ಯಯನ ಮಾಡಿರುವ ಇಂದಿನ ಗುರು ಇಮ್ಮಡಿ ಬಸವರಾಜುಸ್ವಾಮೀಜಿ ಶ್ರೀಮಠದ ಗುರುಪರಂಪರೆಯಲ್ಲಿ 9ನೇ ಪೀಠಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಮಠಕ್ಕೆ ಸೇರಿರುವ 48 ಎಕರೆ ಭೂಮಿಯಲ್ಲಿ ಸ್ವತಃ ಕೃಷಿ ಮಾಡುತ್ತಿದ್ದಾರೆ. 400 ತೆಂಗು ಮತ್ತು 250 ಅಡಿಕೆ, 210 ಮಾವಿನ ಸಸಿಗಳನ್ನು ನೆಟ್ಟು ಬೆಳೆಸುತ್ತಿದ್ದಾರೆ. ಶ್ರೀಮಠದ ಗುರುಪರಂಪರೆಯಂತೆ ಭಕ್ತರ ಭವರೋಗ ನಿವಾರಿಸುವ ಕಾಯಕ
ದಲ್ಲಿ ನಿರತರಾಗಿದ್ದಾರೆ.

ಮಠದ ಭೂಮಿ ಕೆಂಗೇರಿ ಬಂಡೇಮಠದ ಗುರುಸಚ್ಚಿದಾನಂದ ಸ್ವಾಮೀಜಿ ಸಹಕಾರದೊಂದಿಗೆ ಕೃಷಿ ಭೂಮಿ ಆಗಿ ಪರಿವರ್ತನೆಗೊಂಡಿದೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.