ರಾಮನಗರ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈ ಅವಧಿಯಲ್ಲಿ ಮುಖ್ಯಮಂತ್ರಿ ಆಗೋದು ಕಷ್ಟ ಎಂದು ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಮಾಜಿ ಶಾಸಕ ಸಿ.ಎಂ. ಲಿಂಗಪ್ಪ ಹೇಳಿದ್ದಾರೆ.
‘ಅವರು ಮುಖ್ಯಮಂತ್ರಿ ಆಗಬೇಕು ಎಂದು ನಾನು ಸಹ ಬಯಸುತ್ತೇನೆ. ಆದರೆ, ಶಾಸಕರ ಬಲ ಕಡಿಮೆ ಇರುವುದರಿಂದ ಈ ಅವಧಿಯಲ್ಲಿ ಮುಖ್ಯಮಂತ್ರಿ ಆಗೋದು ಕಷ್ಟ’ ಎಂದರು.
ಗುರುವಾರ ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು, ಶಾಸಕರು ಮತ್ತು ಸಾರ್ವಜನಿಕರ ಜೊತೆ ಅವರಿಗಿರುವ ಸಂಪರ್ಕ ವ್ಯವಸ್ಥೆಯೇ ಸರಿ ಇಲ್ಲ. ಶಾಸಕರನ್ನು ಕಂಡರೂ ಕಾಣದಂತೆ ಹೋಗುತ್ತಾರೆ. ಇದೇ ಕಾರಣಕ್ಕೆ ಅವರ ಪರ ಇರುವವರಿಗಿಂತ ವಿರುದ್ಧ ಇರುವವರೇ ಹೆಚ್ಚು. ಇದರಿಂದಾಗಿಯೇ ಶಾಸಕರ ಬಲ ಕಡಿಮೆ ಇದೆ. ಅವರ ನಡವಳಿಕೆಯೇ ಅವರ ಮುಖ್ಯಮಂತ್ರಿ ಕನಸಿಗೆ ತೊಡಕಾಗಿದೆ’ ಎಂದು ಅಭಿಪ್ರಾಯಪಟ್ಟರು.
‘ಡಿ.ಕೆ. ಶಿವಕುಮಾರ್ ನನ್ನ ಆಪ್ತ ಸ್ನೇಹಿತರು. ಅದೇ ಸಲುಗೆಯಿಂದ ನಾನು ಹಲವು ಸಲ ಅವರಿಗೆ ಕಿವಿಮಾತು ಹೇಳಿದ್ದೇನೆ. ಮುಂದೆ ಎತ್ತರಕ್ಕೆ ಬೆಳೆಯಬೇಕಿರುವ ವರ್ತನೆ ಸರಿಪಡಿಸಿಕೊಳ್ಳುವಂತೆ ಹೇಳಿದ್ದೇನೆ. ಅವರ ಹಿತೈಷಿಯಾಗಿ ಸತ್ಯ ಹೇಳುವುದು ನನ್ನ ಧರ್ಮ. ನನ್ನ ಈ ಮಾತಿನಿಂದ ಅವರಿಗೆ ಬೇಸರವಾಗಬಹುದು. ಆದರೆ, ಇದು ಕಟು ಸತ್ಯ’ ಎಂದು ಲಿಂಗಪ್ಪ ಹೇಳಿದರು.
‘ಸ್ನೇಹಿತ ಡಿ.ಕೆ. ಶಿವಕುಮಾರ್ ಸಾರ್ವಜನಿಕ ಸಂಪರ್ಕದಲ್ಲಿ ವಿಫಲರಾಗಿದ್ದಾರೆ. ಶಾಸಕರನ್ನು ಕಂಡರೂ ಕಾಣದಂತೆ ಹೋಗುತ್ತಾರೆ. ನಡವಳಿಕೆಯೇ ಅವರಿಗೆ ತೊಡಕಾಗಿರುವುದರಿಂದ ಶಾಸಕರ ಬಲವು ಕಮ್ಮಿ ಇದೆ. ಅವರು ಮುಖ್ಯಮಂತ್ರಿ ಆಗಬೇಕು ಎಂದು ನಾನು ಸಹ ಬಯಸುತ್ತೇನೆ. ಆದರೆ, ಈ ಅವಧಿಯಲ್ಲಿ ಆಗೋದು ಕಷ್ಟ’ ಎಂದು ಮಾಜಿ ಶಾಸಕ ಸಿ.ಎಂ. ಲಿಂಗಪ್ಪ ಅಭಿಪ್ರಾಯಪಟ್ಟರು.
ಮುಖ್ಯಮಂತ್ರಿ ಬದಲಾವಣೆ ಚರ್ಚೆ ಹಾಗೂ ಡಿಕೆಶಿ ಸಿಎಂ ಆಗಬೇಕೆಂಬ ಒತ್ತಾಯದ ಕುರಿತು ‘ಪ್ರಜಾವಾಣಿ’ಗೆ ಗುರುವಾರ ಪ್ರತಿಕ್ರಿಯಿಸಿದ ಅವರು, ‘ಶಾಸಕರು ಮತ್ತು ಸಾರ್ವಜನಿಕರ ಜೊತೆ ಅವರಿಗಿರುವ ಸಂಪರ್ಕ ವ್ಯವಸ್ಥೆ ಸರಿ ಇಲ್ಲ. ಇದೇ ಕಾರಣಕ್ಕೆ ಅವರ ಪರ ಇರುವವರಿಗಿಂತ ವಿರುದ್ಧ ಇರುವವರೇ ಹೆಚ್ಚು. ಮುಂದೆ ಎತ್ತರಕ್ಕೆ ಬೆಳೆಯಬೇಕಿರುವ ನೀವು ಇದನ್ನು ಸರಿಪಡಿಸಿಕೊಳ್ಳಿ ಎಂದು ಅವರಿಗೆ ಹಲವು ಸಲ ಕಿವಿಮಾತು ಹೇಳಿದ್ದೇನೆ’ ಎಂದರು.
‘ಶಾಸಕರು ಒಟ್ಟಾಗಿದ್ದಾಗ ಶಿವಕುಮಾರ್ ಅವರು ಒಂದಿಬ್ಬರನ್ನು ಮಾತ್ರ ಮಾತನಾಡಿಸಿ, ಉಳಿದವರು ಗೊತ್ತಿದ್ದರೂ ಮಾತನಾಡಿಸದೆ ಕಾರು ಹತ್ತಿ ಹೋಗುವುದು ಸರಿಯಲ್ಲ. ಯಾರಾದರೂ ನಮಸ್ಕಾರ ಎಂದರೆ ಹಾ... ಎನ್ನುತ್ತಾರೆ. ಪ್ರತಿಯಾಗಿ ಅವರು ಸಹ ನಮಸ್ಕಾರ ಎನ್ನಬೇಕು. ಎಲ್ಲರನ್ನು ಮಾತನಾಡಿಸಬೇಕು. ಜನರ ಕಷ್ಟ–ಸುಖ ಕೇಳಲು ನಿತ್ಯ ಒಂದು ತಾಸು ಮೀಸಲಿಡಬೇಕು ಎಂದು ಹೇಳಿದ್ದೇನೆ. ನನ್ನ ಈ ಮಾತಿನಿಂದ ಶಿವಕುಮಾರ್ ಅವರಿಗೆ ಬೇಸರವಾಗಬಹುದು. ಆದರೆ, ಇದು ಕಟು ಸತ್ಯ’ ಎಂದು ತಿಳಿಸಿದರು.
‘ಶಿವಕುಮಾರ್ ಸಿಎಂ ಆಗಬೇಕು ಎಂದು ಕೆಲ ಆಪ್ತ ಶಾಸಕರು ಹೇಳುತ್ತಾರೆ. ಮತ್ತೊಂದೆಡೆ, ಸಿದ್ದರಾಮಯ್ಯ ಅವರು ಐದು ವರ್ಷ ನಾನೇ ಮುಖ್ಯಮಂತ್ರಿ ಎನ್ನುತ್ತಿದ್ದಾರೆ. ಇದರ ನಡುವೆಯೇ ಶಿವಕುಮಾರ್ ಅವರು, ಸಿದ್ದರಾಮಯ್ಯ ಅವರಿಗೆ ಬೆಂಬಲವಾಗಿ ನಾನಿರುತ್ತೇನೆ ಎನ್ನುತ್ತಿದ್ದಾರೆ. ಈ ಬೆಳವಣಿಗೆ ನೋಡಿದರೆ, ಅವರು ಡಿಸಿಎಂ ಆಗಿಯೇ ಉಳಿಯುವಂತಿದೆ. ಪಕ್ಷದ ಹೈಕಮಾಂಡ್ ಮುಂದೆ ಅವರನ್ನು ಮತ್ತೆ ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿ, ಟಿಕೆಟ್ ಹಂಚಿಕೆ ಜವಾಬ್ದಾರಿ ಕೊಟ್ಟು ಪಕ್ಷವನ್ನು ಅಧಿಕಾರಕ್ಕೆ ತಂದು ಸಿಎಂ ಆಗಿ ಎಂದು ಹೇಳಬಹುದೇನೊ ಅನ್ನಿಸುತ್ತದೆ’ ಎಂದು ಹೇಳಿದರು.
– ಸಿ.ಎಂ. ಲಿಂಗಪ್ಪ, ಮಾಜಿ ಶಾಸಕ, ರಾಮನಗರ
ಶಿವಕುಮಾರ್ ಅವರಿಗೆ ನಾನೀಗ ಏನು ಸಲಹೆ ಕೊಡಲ್ಲ. ಅದರಿಂದ ಪ್ರಯೋಜನವೂ ಆಗಲ್ಲ. ನನಗೆ ಅವರ ಮೇಲೆ ಯಾವುದೇ ಅಸಮಾಧಾನ ಮತ್ತು ಅತೃಪ್ತಿ ಇಲ್ಲ. ಅವರನ್ನು ಭೇಟಿ ಮಾಡುವುದೇ ಕಷ್ಟ. ಸಿಕ್ಕರೂ ನಾಳೆ ಸಿಗು ಅಂತಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.