ADVERTISEMENT

ಬೇಟೆಗಾರರ ಗುಂಡೇಟಿಗೆ ಚಿರತೆ ಬಲಿ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2019, 12:36 IST
Last Updated 29 ಸೆಪ್ಟೆಂಬರ್ 2019, 12:36 IST
ಗುಂಡೇಟಿನಿಂದ ಮೃತಪಟ್ಟ ಚಿರತೆ
ಗುಂಡೇಟಿನಿಂದ ಮೃತಪಟ್ಟ ಚಿರತೆ   

ರಾಮನಗರ: ತಾಲ್ಲೂಕಿನ ಕೈಲಾಂಚ ಹೋಬಳಿ ವಿಭೂತಿಕೆರೆ ಗ್ರಾಮದ ಜಮೀನಿನಲ್ಲಿ ಭಾನುವಾರ ಚಿರತೆಯೊಂದರ ಕಳೇಬರ ಪತ್ತೆಯಾಗಿದ್ದು, ಗುಂಡೇಟಿನಿಂದ ಮೃತಪಟ್ಟಿದೆ.

ಒಂದೂವರೆ ವರ್ಷ ಪ್ರಾಯದ ಹೆಣ್ಣು ಚಿರತೆ ಇದಾಗಿದ್ದು, ಗುಂಡು ಅದರ ದೇಹದ ಒಂದು ಭಾಗದಿಂದ ಹೊಕ್ಕು ಇನ್ನೊಂದು ಭಾಗದಿಂದ ಹೊರಹೋಗಿದೆ. ಕಳ್ಳ ಬೇಟೆಗಾರರ ಗುಂಪು ಕಾಡುಹಂದಿಯನ್ನು ಬೇಟೆಯಾಡುವ ಸಂದರ್ಭ ಚಿರತೆಗೆ ಗುಂಡು ಹೊಡೆದಿದ್ದು, ಸತ್ತ ಚಿರತೆಯನ್ನು ವಿಭೂತಿಕೆರೆಯ ರಸ್ತೆ ಪಕ್ಕದ ಖಾಸಗಿ ಜಮೀನಿನಲ್ಲಿ ಎಸೆದು ಹೋಗಿದ್ದಾರೆ ಎಂದು ಶಂಕಿಸಲಾಗಿದೆ.

ಪಶು ವೈದ್ಯ ನಜೀರ್‌ ಅಹಮ್ಮದ್‌ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ದೇವರಾಜು ಹಾಗೂ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದರು. ‘ಮೇಲ್ನೋಟಕ್ಕೆ ಗುಂಡೇಟಿನಿಂದ ಚಿರತೆ ಮೃತಪಟ್ಟಿರುವುದು ಕಂಡುಬಂದಿದೆ. ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಲಾಗಿದೆ’ ಎಂದು ರಾಮನಗರ ವಲಯ ಅರಣ್ಯಾಧಿಕಾರಿ ದಾಳೇಶ್‌ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.