ADVERTISEMENT

‘ಸೋಲೂರು’ ಮಾಗಡಿಯಲ್ಲೇ ಉಳಿಯಲಿ: ಶಾಸಕ ಶ್ರೀನಿವಾಸ್ ವಿರುದ್ಧ ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 5:03 IST
Last Updated 27 ಸೆಪ್ಟೆಂಬರ್ 2025, 5:03 IST
ಮಾಗಡಿ ಪಟ್ಟಣದ ಕಲ್ಯಾಗೇಟ್ ವೃತ್ತದಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳಿಂದ ಸೋಲೂರು ಉಳಿವಿಗಾಗಿ ಪ್ರತಿಭಟನೆ ನಡೆಯಿತು 
ಮಾಗಡಿ ಪಟ್ಟಣದ ಕಲ್ಯಾಗೇಟ್ ವೃತ್ತದಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳಿಂದ ಸೋಲೂರು ಉಳಿವಿಗಾಗಿ ಪ್ರತಿಭಟನೆ ನಡೆಯಿತು    

ಮಾಗಡಿ: ಸೋಲೂರು ಹೋಬಳಿಯು ನೆಲಮಂಗಲ ತಾಲ್ಲೂಕಿಗೆ ಸೇರಬೇಕು ಎಂಬ ಹೇಳಿಕೆ ಮೂಲಕ ನೆಲಮಂಗಲ ಶಾಸಕ ಎನ್. ಶ್ರೀನಿವಾಸ್ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಗತಿಪರ ರೈತ ಹೋರಾಟಗಾರ ಕನ್ನಡ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. 

ಕಲ್ಯಾಗೇಟ್‌ನಲ್ಲಿ ಶುಕ್ರವಾರ ವಿವಿಧ ಕನ್ನಡಪರ ಸಂಘಟನೆ, ತಾಲ್ಲೂಕು ವಕೀಲರ ಸಂಘದಿಂದ ಶುಕ್ರವಾರ ನಡೆದ ಸೋಲೂರು ಹೋಬಳಿ ತಾಲ್ಲೂಕಿನಲ್ಲೇ ಉಳಿಯಬೇಕು ಎಂಬ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 

‘ನೆಲಮಂಗಲ ಶಾಸಕ ಎನ್. ಶ್ರೀನಿವಾಸ್ ಅವರು ಸೋಲೂರು ಹೋಬಳಿ ನೆಲಮಂಗಲಕ್ಕೆ ಸೇರಿದೆ ಎಂಬ ಗೊಂದಲದ ಹೇಳಿಕೆ ನೀಡಿದ್ದಾರೆ. ನಾವು ಕೂಡ ನಮ್ಮ ಹೋಬಳಿಯನ್ನು ಉಳಿಸಿಕೊಳ್ಳಲು ದೊಡ್ಡಮಟ್ಟದಲ್ಲಿ ಹೋರಾಡುತ್ತೇವೆ. ಸೋಲೂರನ್ನು ಮಾಗಡಿಯಿಂದ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಮೊದಲ ಬಾರಿಗೆ ಶಾಸಕರಾಗಿರುವ ಶ್ರೀನಿವಾಸ್, ಮಾಗಡಿಯನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಮಂಚನಬೆಲೆ ಗ್ರಾಮದ ಅವರು ಈ ರೀತಿ ಮಾಡುತ್ತಿರುವುದು ಸರಿಯಲ್ಲ’ ಎಂದರು. 

ಈ ವಿಚಾರದಲ್ಲಿ ಮೌನ ತಾಳಿರುವ ಶಾಸಕ ಬಾಲಕೃಷ್ಣ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು. ಸರ್ಕಾರದ ಭಾಗವಾಗಿರುವ ಶಾಸಕ ಬಾಲೃಷ್ಣ ಅವರು ಈ ವಿಚಾರದಲ್ಲಿ ಗಟ್ಟಿಯಾಗಿ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದರು. 

ಸೋಲೂರು ಹೋಬಳಿಯನ್ನು ನೆಲಮಂಗಲಕ್ಕೆ ಸೇರಿಸಬೇಕು ಎಂಬುದು ದೊಡ್ಡ ತಪ್ಪು. ಅಲ್ಲದೆ, ಶಾಸಕ ಶ್ರೀನಿವಾಸ್, ಮಂಚನಬೆಲೆ ಜಲಾಶಯಕ್ಕೆ ವಿಷ ಕೊಡುವ ಕೆಲಸವನ್ನೂ ಮಾಡುತ್ತಿದ್ದಾರೆ. ವಿರೋಧದ ನಡುವೆಯೂ ವೃಷಭಾವತಿ ಕಲುಷಿತ ನೀರನ್ನು ಶುದ್ಧೀಕರಿಸಿ, ನೆಲಮಂಗಲ ಕೆರೆಗಳಿಗೆ ತುಂಬಿಸುತ್ತಿದ್ದಾರೆ. ನೆಲಮಂಗಲ ಕೆರೆಗಳು ತುಂಬಿದರೆ ಅರ್ಕಾವತಿ ಮೂಲಕ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಕಲುಷಿತ ನೀರು ಸೇರುತ್ತದೆ. ಆ ನಂತರ ಮಂಚನಬೆಲೆ ಜಲಾಶಯಕ್ಕೂ ಇದೇ ನೀರು ಸೇರಲಿದೆ ಎಂದರು. 

ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಸುರೇಶ್ ಮಾತನಾಡಿ, ‘ಸೋಲೂರು ಹೋಬಳಿ ಮಾಗಡಿ ತಾಲ್ಲೂಕಿನಲ್ಲಿ ಉಳಿಯಬೇಕಾದರೆ ಸೋಲೂರು ಹೋಬಳಿಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಕ್ಕೆ ಆಕ್ಷೇಪಣೆ ಅರ್ಜಿ ಸಲ್ಲಿಸಬೇಕು’ ಎಂದು ಹೇಳಿದರು. 

ಕಲ್ಯಾಗೇಟ್ ವಿನಾಯಕ ದೇವಸ್ಥಾನದಿಂದ ತಾಲ್ಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಮಾಡಲಾಯಿತು. ನಂತರ ತಹಶೀಲ್ದಾರ್ ಪ್ರಭಾಕರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಹೊಸಪಾಳ್ಯ ಲೋಕೇಶ್, ಗೋವಿಂದರಾಜು, ರವಿಕುಮಾರ್, ಬುಡನ್ ಸಾಬ್, ಶ್ರೀಪತಿಹಳ್ಳಿ ರಾಜಣ್ಣ, ಮಹಾಂತೇಶ್, ಪಾಪಣ್ಣ, ಅನಿಲ ವಕೀಲಾ ಚೇತನ್, ಗೋವಿಂದರಾಜು, ಚಂದ್ರೇಗೌಡ, ಜುಟ್ಟನಹಳ್ಳಿ ದಿನೇಶ್, ಬಾಳೇನಹಳ್ಳಿ ಶಿವಣ್ಣ ಭಾಗವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.