ADVERTISEMENT

ಸೋಮೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ

ಶ್ರೀಮುಖಕ್ಕೆ ಪೂಜೆ ಸಲ್ಲಿಕೆಯ ನಂತರ ಚಾಲನೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2019, 14:16 IST
Last Updated 5 ಫೆಬ್ರುವರಿ 2019, 14:16 IST
ಮಾಗಡಿ ಸೋಮೇಶ್ವರ ಸ್ವಾಮಿ ಶ್ರೀಮುಖಕ್ಕೆ ತಹಶೀಲ್ದಾರ್‌ ಎನ್‌. ರಮೇಶ್‌ ಪೂಜೆ ಸಲ್ಲಿಸಿ ಜಾತ್ರೆಗೆ ಚಾಲನೆ ನೀಡಿದರು
ಮಾಗಡಿ ಸೋಮೇಶ್ವರ ಸ್ವಾಮಿ ಶ್ರೀಮುಖಕ್ಕೆ ತಹಶೀಲ್ದಾರ್‌ ಎನ್‌. ರಮೇಶ್‌ ಪೂಜೆ ಸಲ್ಲಿಸಿ ಜಾತ್ರೆಗೆ ಚಾಲನೆ ನೀಡಿದರು   

ಮಾಗಡಿ: ಪಟ್ಟಣದ ಸೋಮೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ದೇವರ ಶ್ರೀಮುಖವನ್ನು ದೇವಾಲಯದಿಂದ ಮಂಗಳವಾದ್ಯ ಸಹಿತ ತಹಶೀಲ್ದಾರ್‌ ಕಚೇರಿಗೆ ಮೆರವಣಿಗೆಯಲ್ಲಿ ತರಲಾಯಿತು.

ತಹಶೀಲ್ದಾರ್‌ ಎನ್‌. ರಮೇಶ್‌ ವಿಧ್ಯುಕ್ತವಾಗಿ ಪೂಜೆ ಸಲ್ಲಿಸಿದರು. ಆಗಮಿಕ ವಿದ್ವಾನ್‌ ಕೆ.ಎನ್‌. ಗೋಪಾಲ ದೀಕ್ಷಿತ್‌ ತಂಡದವವರು ಸೋಮೇಶ್ವರ ಸ್ವಾಮಿ ಮತ್ತು ಭ್ರಮರಾಂಬಿಕೆ ಅಮ್ಮನವರ ವಿವಾಹ ಮಹೋತ್ಸವದ ಲಗ್ನಪತ್ರಿಕೆಗೆ ಪೂಜೆ ಸಲ್ಲಿಸಿ ಓದಲಾಯಿತು.

ಭಕ್ತರ ಸಮ್ಮುಖದಲ್ಲಿ ಅಧಿಕೃತವಾಗಿ ಶ್ರೀಮುಖಕ್ಕೆ ಪೂಜೆ ಸಲ್ಲಿಸಿದ ತಹಶೀಲ್ದಾರ್‌ ಜಾತ್ರಾ ಮಹೋತ್ಸವಕ್ಕೆ ಅಂಗೀಕಾರ ನೀಡಿದರು. ಸೋಮೇಶ್ವರ ಕಾಲೊನಿ ನಾಗರಾಜು, ಮುಜರಾಯಿ ಕಚೇರಿಯಲ್ಲಿ ಕೆಂಪೇಗೌಡರ ವಂಶಜರ ಕಾಲದಿಂದ ನಡೆದು ಬಂದಿರುವ ಧಾರ್ಮಿಕ ವಿಧಿವಿಧಾನದಂತೆ ಅರ್ಚಕರಾದ ಕಿರಣ್‌ ದೀಕ್ಷಿತ್‌, ರಾಜೇಶ್‌ ದೀಕ್ಷಿತ್‌, ಅನಿಲ್‌ ಕುಮಾರ್‌ ದೀಕ್ಷಿತ್‌, ಆಗಮಿಕ ವಿದ್ವಾನ್‌ ಪ್ರವೀಣ್‌ ದೀಕ್ಷಿತ್‌ ತಂಡದವರು ವಿಧಿಬದ್ಧವಾಗಿ ಶ್ರೀಮುಖಕ್ಕೆ ಪೂಜೆ ಸಲ್ಲಿಸಿದರು.

ADVERTISEMENT

ಪೊಲೀಸ್ ಠಾಣೆಗೆ ಮೆರವಣಿಗೆಯಲ್ಲಿ ಕೊಂಡೊಯ್ದು ರಾಜಪರಂಪರೆಯಂತೆ ಪೂಜೆ ಸಲ್ಲಿಸಲಾಯಿತು. ಸರ್ಕಲ್‌ ಇನ್‌ಸ್ಪೆಕ್ಟರ್‌ ರವಿಕುಮಾರ್‌, ಸಬ್‌ ಇನ್‌ಸ್ಪೆಕ್ಟರ್‌ ಎಂ.ಆರ್‌. ನರೇಂದ್ರಬಾಬು, ಎಎಸ್‌ಐ ಮಲ್ಲೇಶಯ್ಯ ಅವರು ರಾಜದಂಡಕ್ಕೆ ವಿಧಿಬದ್ಧವಾಗಿ ಪೂಜೆ ಸಲ್ಲಿಸಿದರು.

ಹೆಡ್‌ ಕಾನ್‌ಸ್ಟೆಬಲ್‌ ಮಂಜುನಾಥ, ಕಾಂತರಾಜು, ದೇವರಾಜು, ಅರುಣ್‌, ಮಂಜುನಾಥ, ಕಾನ್‌ಸ್ಟೆಬಲ್‌ಗಳಾದ ರಾಜಣ್ಣ, ಅಪ್ಪಾಸಾಬ್‌, ನರೇಶ್‌, ಲೋಹಿತ್‌, ಕಿರಣ್‌ಕುಮಾರ್‌, ಮಹಿಳಾ ಕಾನ್‌ಸ್ಟೆಬಲ್‌ಗಳಾದ ಶೈಲಜಾ, ಶರತಿ, ನಾಗರತ್ನ ದೇವರ ಶ್ರೀಮುಖವನ್ನು ಹೆಗಲಮೇಲೆ ಹೊತ್ತು ನಡೆದು ಭಕ್ತಿ ಸಮರ್ಪಿಸಿದರು.

ಮುಖಂಡರಾದ ತಿರುಮಲೆ ರಂಗಹನುಮಯ್ಯ, ಕಲ್ಕೆರೆ ಶಿವಣ್ಣ, ಪುರಸಭೆ ಸದಸ್ಯ ಕಾಂತರಾಜು, ವಕೀಲ ತಿರುಮಲೆ ನರಸಿಂಹ ಮೂರ್ತಿ ಹಾಗೂ ಮುಜರಾಯಿ, ಕಂದಾಯ, ಪೊಲೀಸ್‌ ಇಲಾಖೆಗಳ ಸಿಬ್ಬಂದಿ ಮತ್ತು ಭಕ್ತರು ಶ್ರೀಮುಖದ ಮೆರವಣಿಗೆಯಲ್ಲಿ ಮುಖ್ಯಬೀದಿಗಳಲ್ಲಿ ಕೊಂಡೊಯ್ದರು.

ದೇವಾಲಯದಲ್ಲಿ ಅಂಕುರಾರ್ಪಣೆ ನಡೆಯಿತು. ಪ್ರಸಾದ ವಿನಿಯೋಗ ನಡೆಯಿತು. ರಾಜದಂಡ, ಛತ್ರಿ ಚಾಮರಗಳೊಂದಿಗೆ ಮೆರವಣಿಗೆ ನಡೆಯಿತು. ಮುಖ್ಯಬೀದಿಗಳಲ್ಲಿ ರಂಗೋಲಿ ಹಾಕಿ ದೇವರಿಗೆ ಪೂಜೆ ಸಲ್ಲಿಸಿದ ಭಕ್ತರು ಜಾತ್ರೆಗೆ ಸಿದ್ಧತೆ ನಡೆಸಿದ್ದಾರೆ.

ಶಾಸಕ ಎ.ಮಂಜುನಾಥ ದಂಪತಿ ಸಹಿತ ಅಲಂಕೃತ ರಥದ ಮೇಲೆ ಸೋಮೇಶ್ವರ ಸ್ವಾಮಿ ಉತ್ಸವ ಮೂರ್ತಿಯನ್ನು ಹೆಗಲ ಮೇಲೆ ಹೊತ್ತು ತಂದು ರಥದ ಮೇಲಿಟ್ಟು ಪೂಜೆ ಸಲ್ಲಿಸಿದರು.

ವಿಧಾನ ಪರಿಷತ್‌ ಸದಸ್ಯರಾದ ಎಚ್‌.ಎಂ. ರೇವಣ್ಣ, ಅ.ದೇವೇಗೌಡ, ಕಾಂಗ್ರೆಸ್‌ ಮುಖಂಡ ಎಚ್‌.ಸಿ. ಬಾಲಕೃಷ್ಣ, ಪುರಸಭೆ ಅಧ್ಯಕ್ಷ ಎಚ್‌.ಆರ್‌. ಮಂಜುನಾಥ್‌, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ. ಕೃಷ್ಣಮೂರ್ತಿ, ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್‌.ಎಂ. ಕೃಷ್ಣಮೂರ್ತಿ ಭಾಗವಹಿಸಿ ರಥವನ್ನು ಎಳೆಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.