ಚನ್ನಪಟ್ಟಣ: ‘ಎಸ್ಸೆಸ್ಸೆಲ್ಸಿಪರೀಕ್ಷೆಯು ವಿದ್ಯಾರ್ಥಿಗಳಿಗೆ ಸವಾಲಾಗಿದ್ದು, ಈ ಸವಾಲನ್ನು ಸಮರ್ಥವಾಗಿ ಎದುರಿಸಬೇಕು’ ಎಂದು ಉಪಪ್ರಾಂಶುಪಾಲ ವೀರಭದ್ರಯ್ಯ ಕಿವಿಮಾತು ಹೇಳಿದರು.
ಪಟ್ಟಣದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಶನಿವಾರ ಆದಿತ್ಯ ಬಿರ್ಲಾ ಹಾಗೂ ಜನ ಕಲ್ಯಾಣ ಟ್ರಸ್ಟ್ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜ್ಞಾನಾರ್ಜನ್ ಶೈಕ್ಷಣಿಕ ಯೋಜನೆಯಡಿಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿನಿಯರಿಗೆ ಪರೀಕ್ಷಾ ಉಪಯೋಗಿ ಪುಸ್ತಕಗಳನ್ನು ಉಚಿತವಾಗಿ ವಿತರಣೆ ಮಾಡಿ ಮಾತನಾಡಿದರು.
ಸರ್ಕಾರಿ ಶಾಲೆಯ ಎಸ್.ಎಸ್.ಎಲ್.ಸಿ .ವಿದ್ಯಾರ್ಥಿನಿಯರ ಭವಿಷ್ಯವನ್ನು ಉಜ್ವಲಗೊಳಿಸಲು, ಆದಿತ್ಯ ಬಿರ್ಲಾ ಹಾಗೂ ಜನ ಕಲ್ಯಾಣ ಟ್ರಸ್ಟ್, ಜ್ಞಾನಾರ್ಜನ್ ಶೈಕ್ಷಣಿಕ ಯೋಜನೆಯಡಿ ಮುಂದಾಗಿರುವುದು ಪ್ರಶಂಸನೀಯ. ವಿದ್ಯಾರ್ಥಿನಿಯರಿಗೆ ಪರೀಕ್ಷೆಯನ್ನು ಯಾವ ರೀತಿ ಎದುರಿಸಬೇಕು ಎಂಬುದರ ಬಗ್ಗೆ ಧೈರ್ಯ ತುಂಬುವುದರ ಜೊತೆಗೆ, ವಿಶೇಷ ತರಗತಿಗಳನ್ನು ತೆಗೆದುಕೊಂಡು ವಿದ್ಯಾರ್ಥಿಗಳನ್ನು ತಯಾರು ಮಾಡುತ್ತಿರುವುದು ಸ್ವಾಗತಾರ್ಹ. ಮುಖ್ಯ ಪರೀಕ್ಷೆಗಳು ಕೆಲವೇ ತಿಂಗಳುಗಳಿದ್ದು, ವಿದ್ಯಾರ್ಥಿಗಳು ಒಂದು ನಿಮಿಷವನ್ನು ವ್ಯರ್ಥ ಮಾಡದೆ ವ್ಯಾಸಂಗದತ್ತ ಗಮನ ಹರಿಸಬೇಕು. ಮೊಬೈಲ್, ಟಿವಿಯಿಂದ ದೂರವಿರಬೇಕು ಎಂದರು
ಅಸಿರ ಚಿತ್ರಕಲಾ ಇನ್ಸ್ಟಿಟ್ಯೂಟ್ ಕಾರ್ಯದರ್ಶಿ ರಮೇಶ್ ಅಕ್ಕೂರು ಮಾತನಾಡಿ, ವಿದ್ಯಾರ್ಥಿನಿಯರು ಯಾವುದೇ ಅನ್ಯ ವಿಷಯಗಳತ್ತ ಮನಸ್ಸು ಹರಿಯಬಿಡದೆ ವಿದ್ಯಾಭ್ಯಾಸದ ಕಡೆ ಗಮನ ನೀಡಬೇಕು. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕೇವಲ ಉತ್ತೀರ್ಣರಾದರೆ ಸಾಲದು. ಉನ್ನತ ಮಟ್ಟದಲ್ಲಿ ಉತ್ತೀರ್ಣರಾಗಿ ಶಾಲೆಗೆ, ಪೋಷಕರಿಗೆ ಕೀರ್ತಿ ತರಬೇಕು ಎಂದು ತಿಳಿಸಿದರು.
ಶಾಲೆಯ ಸಹಶಿಕ್ಷಕ ಲಕ್ಷ್ಮಣಗೌಡ ಮಾತನಾಡಿ, ವಿದ್ಯಾರ್ತಿನಿಯರು ಈ ರೀತಿಯ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಈ ಬಾರಿಯ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ಸ್ಥಾನ ಗಳಿಸಿ ಕೀರ್ತಿ ತರಬೇಕು ಎಂದರು.
ತರಬೇತಿ ಉಪನ್ಯಾಸಕರಾದ ಶ್ರೀನಿವಾಸ್, ರಾಜೇಶ್, ಕಾವ್ಯಶ್ರೀ, ಶಾಲೆಯ ಶಿಕ್ಷಕರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.