ADVERTISEMENT

ಶಿಕ್ಷಕರ ಕ್ಷೇತ್ರದ ಚುನಾವಣೆ; ಸಮಸ್ಯೆ ಬಗೆಹರಿಸಲು ವಿಫಲ: ಎ‌‌.ಪಿ.ರಂಗನಾಥ್ ಆರೋಪ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 2:25 IST
Last Updated 12 ನವೆಂಬರ್ 2025, 2:25 IST
<div class="paragraphs"><p>ಕನಕಪುರದಲ್ಲಿ ಎ.ಪಿ ರಂಗನಾಥ ಶಿಕ್ಷಕರ ಕ್ಷೇತ್ರದ ಚುನಾವಣೆ ಬಗ್ಗೆ ಮಾತನಾಡಿದರು</p></div>

ಕನಕಪುರದಲ್ಲಿ ಎ.ಪಿ ರಂಗನಾಥ ಶಿಕ್ಷಕರ ಕ್ಷೇತ್ರದ ಚುನಾವಣೆ ಬಗ್ಗೆ ಮಾತನಾಡಿದರು

   

ಕನಕಪುರ: ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾದವರು ಅಧಿಕಾರದ ಪಕ್ಷದಲ್ಲಿದ್ದರೂ ಶಿಕ್ಷಕರ ಸಮಸ್ಯೆ ಬಗೆಹರಿಸುವುದರಲ್ಲಿ ವಿಫಲರಾಗಿದ್ದಾರೆ ಎಂದು ಶಿಕ್ಷಕರ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ವಕೀಲ ಎ‌‌.ಪಿ.ರಂಗನಾಥ್ ಆರೋಪಿಸಿದರು.

ನಗರದಲ್ಲಿನ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ನಾಗರಾಜು ನಿವಾಸದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ADVERTISEMENT

ಆರು ವರ್ಷಗಳಿಗೊಮ್ಮೆ ನಡೆಯಬೇಕಿರುವ ಶಿಕ್ಷಕರ ಕ್ಷೇತ್ರದ ಚುನಾವಣೆ ಕಳೆದ ಬಾರಿ ಆಯ್ಕೆಯಾದವರಿಂದ ಪಕ್ಷ ಬದಲಾವಣೆಯಾಗಿ ಅವಧಿಗಿಂತ ಮುಂಚೆ ಚುನಾವಣೆ ನಡೆಯಿತು ಎಂದರು.

‘ಕಳೆದ ಬಾರಿ ಸ್ಪರ್ಧೆಯಲ್ಲಿ 700 ಮತಗಳ ಅಂತರದಿಂದ ಚುನಾವಣೆಯಲ್ಲಿ ಸೋಲು ಕಂಡಿದ್ದೇನೆ. ಶಿಕ್ಷಕರ ಕ್ಷೇತ್ರದಲ್ಲಿ ಹಲವು ಸಮಸ್ಯೆಗಳಿವೆ. ಗೆದ್ದಿರುವವರು ಆಡಳಿತ ಪಕ್ಷದಲ್ಲಿದ್ದರೂ ಶಿಕ್ಷಕರ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿಲ್ಲ. ಮಂತ್ರಿಯಾಗುತ್ತೇನೆ ಎಲ್ಲ ಸಮಸ್ಯೆ ಬಗೆಹರಿಸುತ್ತೇನೆ ಎಂದು ಭರವಸೆ ಕೊಟ್ಟು, ಈಗ ಎಲ್ಲವನ್ನು ಹುಸಿಗೊಳಿಸಿದ್ದಾರೆ’ ಎಂದು ದೂರಿದರು.

ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಇಂದಿನಿಂದಲೇ ತಯಾರಿ ಆರಂಭಿಸಲಾಗಿದೆ. ಪ್ರತಿ ಶಿಕ್ಷಣ ಸಂಸ್ಥೆಗೂ ಭೇಟಿ ಮಾಡಿ ಅಲ್ಲಿನ ಶಿಕ್ಷಕರ ಸಮಸ್ಯೆ ಆಲಿಸಿದ್ದೇನೆ. ಈ ಬಾರಿ ಶಿಕ್ಷಕರು ಬದಲಾವಣೆ ಬಯಸಿದ್ದಾರೆ ಎಂದರು.

ಈ ಬಾರಿ ಚುನಾವಣೆಯಲ್ಲಿ ಪದವೀಧರರು ಸೂಕ್ತ ಸಮಯದಲ್ಲಿ ನೋಂದಾಸಿಕೊಂಡು ಮತದಾನದ ಹಕ್ಕು ಪಡೆಯಬೇಕು. ತಮ್ಮ ಹಕ್ಕು ಚಲಾವಣೆ ಮಾಡಿ ಉತ್ತಮ ಆಯ್ಕೆ ಮಾಡಿದರೆ, ಸಮಸ್ಯೆ ಬಗೆಹರಿಯಲಿದೆ ಎಂದು ಭರವಸೆ ನೀಡಿದರು.

ಮುಂದಿನ ವರ್ಷದ ನವೆಂಬರ್‌ನಲ್ಲಿ ಚುನಾವಣೆ ನಡೆಯಲಿದೆ. ಮತದಾರರ ನೋಂದಣಿ ಕಾರ್ಯ ಆರಂಭವಾಗಿದೆ. ಚುನಾವಣಾ ಆಯೋಗ ನಿಜವಾದ ಶಿಕ್ಷಕರ ನೋಂದಣಿ ಕಾರ್ಯ ಆರಂಭಿಸಿದೆ. ಈಗಾಗಲೇ 22 ಸಾವಿರ ಶಿಕ್ಷಕರು ಅರ್ಜಿ ಸಲ್ಲಿಸಿದ್ದಾರೆ. ಮತ್ತೆ ನೋಂದಣಿಗೆ ಅವಕಾಶ ಇದೆ. ಚುನಾವಣಾ ಪೂರ್ವದ ಹತ್ತು ದಿನಗಳಲ್ಲಿ ನೋಂದಣಿಯಾಗಬಹದು ಎಂದರು.

ನಿವೃತ್ತ ಪ್ರಾಂಶುಪಾಲ ಪ್ರಕಾಶ್ ಮಾತನಾಡಿ, ಶಿಕ್ಷಕರ ಕ್ಷೇತ್ರದ ಪ್ರತಿನಿಧಿ ಆಯ್ಕೆ ಮಾಡುವ ಅವಕಾಶ ಸಿಕ್ಕಿದೆ. ಕಳೆದ ಬಾರಿ ಆಯ್ಕೆಯಾಗಿದ್ದ ಪ್ರತಿನಿಧಿ ಶಾಸಕನಾಗಲು ರಾಜೀನಾಮೆ ನೀಡಿ ಅಲ್ಲಿ ಸೋತು ಮತ್ತೆ ಇಲ್ಲೇ ಬಂದಿದ್ದರು. ಅವರ ಕೆಟ್ಟ ನಿರ್ಧಾರದಿಂದ ಎರಡು ಬಾರಿ ಚುನಾವಣೆ ಎದುರಿಸಬೇಕಿದೆ ಎಂದರು.

ನಗರಸಭೆ ಸದಸ್ಯ ಸ್ಟುಡಿಯೋ ಚಂದ್ರು, ಶಿಕ್ಷಕ ಅರಣ್‌ಕುಮಾರ್, ಜಗದೀಶ್, ಶೇಷಾದ್ರಿ ರಾಮು, ನಂಜುಂಡಸ್ವಾಮಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.