ಕನಕಪುರ: ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಕೊರೊನಾ ನಿಯಮವನ್ನು ಪಾಲನೆ ಮಾಡದೆ ಗುಂಪುಕಟ್ಟಿಕೊಂಡಿದ್ದ ಜನರನ್ನು ಹೊರಗಡೆ ಕಳಿಸಿದ ಪೊಲೀಸರು ಕೇಸು ದಾಖಲಿಸುವ ಎಚ್ಚರಿಕೆ ನೀಡಿದರು.
ಇಲ್ಲಿನ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಗುರುವಾರ ಬೆಳಿಗ್ಗೆ ನೂರಾರು ಸಂಖ್ಯೆಯಲ್ಲಿ ಕ್ರಯನೋಂದಣಿ ಮಾಡಿಸಲು ಬಂದಿದ್ದ ಜನರು ಕಚೇರಿ ಒಳಗೆ ಗುಂಪು ಕಟ್ಟಿಕೊಂಡಿದ್ದನ್ನು ಕಂಡು ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಸರ್ಕಲ್ ಇನ್ಸ್ಪೆಕ್ಟರ್ ಟಿ.ಟಿ.ಕೃಷ್ಣ ಮತ್ತು ಸಬ್ಇನ್ಸ್ಪೆಕ್ಟರ್ ಲಕ್ಷ್ಮಣ್ಗೌಡನೋಂದಣಿ ಕಚೇರಿಗೆ ಭೇಟಿ ನೀಡಿ, ಜನರನ್ನು ಕಚೇರಿಯಿಂದ ಹೊರ ಕಳುಹಿಸಿದರು. ಸರ್ಕಾರದ ನಿಯಮದಂತೆ ಒಬ್ಬೊಬ್ಬರಾಗಿ ನೋಂದಣಿ ಮಾಡಬೇಕು. ಒಳಗೆ ಬರುವವರಿಗೆ ಕಡ್ಡಾಯ ಸೋಂಕು ತಪಾಸಣೆ ಪತ್ರವನ್ನು ಪಡೆಯಬೇಕೆಂದು ಹೇಳಿದರು.
ಮತ್ತೆ ಜನರ ಗುಂಪು ಸೇರಿದ್ದು ಕಂಡು ಬಂದರೆ ಕಾನೂನು ಉಲ್ಲಂಘನೆಯಡಿ ಉಪನೋಂದಾವಣಾಧಿಕಾರಿ ಮೇಲೆ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿದರು.
ಸರ್ಕಾರದ ಎಡವಟ್ಟು: ಸರ್ಕಾರವು ಕೊರೊನಾ ಸೋಂಕು ನಿಯಂತ್ರಣಕ್ಕೆ ಅಗತ್ಯ ವಸ್ತುಗಳಿಗೆ ಬೆಳಿಗ್ಗೆ 6 ರಿಂದ 10 ಗಂಟೆವರೆಗೆ ಅವಕಾಶ ನೀಡಿ ಉಳಿದಂತೆ ಎಲ್ಲಾ ಸರ್ಕಾರಿ ಇಲಾಖೆಗಳ ಕಚೇರಿಯನ್ನು ಬೆಳಿಗ್ಗೆ 10 ರಿಂದ 5 ಗಂಟೆವರೆಗೆ ಅವಕಾಶ ಕೊಟ್ಟಿದೆ. ಇದರಿಂದ ಸಾರ್ವಜನಿಕರ ಓಡಾಟಕ್ಕೆ ಸರ್ಕಾರವೇಅವಕಾಶ ಕೊಟ್ಟಂತೆ ಆಗಿದೆ. ಇದರಿಂದ ಸೋಂಕು ತಡೆಗೆ ಯಾವುದೆ ಪ್ರಯೋಜವಾಗಲ್ಲ, ಇದು ಸರ್ಕಾರದ ಎಡವಟ್ಟು ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.