ಮಾಗಡಿ: ಸಹೃದಯಿಗಳ ನೆರವಿನಿಂದ ಉತ್ತಮ ಬದುಕು ಕಟ್ಟಿಕೊಳ್ಳುವ ಪ್ರಯತ್ನದಲ್ಲಿದ್ದ ಸೋಲಿಗ ಕುಟುಂಬವೊಂದರ ಕನಸನ್ನು ಕಳ್ಳರು ನುಚ್ಚುನೂರು ಮಾಡಿದ್ದಾರೆ.
ಪಟ್ಟಣದ ತಿರುಮಲೆ ಪ್ರದೇಶದಲ್ಲಿ ಕೊಳೆಗೇರಿ ನಿರ್ಮೂಲನಾ ಮಂಡಳಿಗೆ ಸೇರಿದ ಜಾಗದಲ್ಲಿ ತಾತ್ಕಾಲಿಕ ಶೆಡ್ನಲ್ಲಿ ಆಶ್ರಯ ಪಡೆದುಕೊಂಡಿದ್ದ ಈ ಕುಟುಂಬಕ್ಕೆ ದಾನಿಗಳು ನೀಡಿದ್ದ ದವಸ–ಧಾನ್ಯ, ಬಟ್ಟೆ, ಹಣ ಎಲ್ಲವನ್ನೂ ಕಳ್ಳರು ಗುರುವಾರ ರಾತ್ರಿ ದೋಚಿದ್ದಾರೆ.
ಸೋಲಿಗ ಸಮುದಾಯಕ್ಕೆ ಸೇರಿದ ಭೀಮ (ಮಂಜುನಾಥ್) ಮತ್ತವರ ಕುಟುಂಬ ಯಾವುದೇ ಆಸರೆ ಇಲ್ಲದೆ ಭಿಕ್ಷಾಟನೆ ಮಾಡಿ ಬಯಲಿನಲ್ಲೇ ಮಕ್ಕಳೊಂದಿಗೆ ವಾಸವಿರುವ ಸಂಕಷ್ಟದ ಕುರಿತು ‘ಪ್ರಜಾವಾಣಿ’ ಜೂನ್ 14ರಂದು ವರದಿ ಪ್ರಕಟಿಸಿತ್ತು. ಈ ವರದಿಗೆ ನಾಡಿನ ವಿವಿಧೆಡೆಯಿಂದ ಜನರು ಸ್ಪಂದಿಸಿದ್ದು, ವರ್ಷಕ್ಕೆ ಆಗುವಷ್ಟು ಧಾನ್ಯ ಮತ್ತಿತರ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡಿದ್ದರು.
ಘಟನೆ ಕುರಿತು ಮಾಗಡಿ ತಹಶೀಲ್ದಾರ್ ಬಿ.ಜಿ. ಶ್ರೀನಿವಾಸಪ್ರಸಾದ್ ಪ್ರತಿಕ್ರಿಯಿಸಿದ್ದು ‘ಇಂತಹ ಘಟನೆ ನಡೆದಿರುವುದು ದುರದೃಷ್ಟಕರ. ಸೋಲಿಗ ಕುಟುಂಬಕ್ಕೆ ತಾತ್ಕಾಲಿಕ ಮನೆ ಜೊತೆಗೆ ಅಗತ್ಯ ಅನುಕೂಲ ಮಾಡಿಕೊಡಲಾಗುವುದು’ ಎಂದು ಭರವಸೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.