ADVERTISEMENT

ಕನಕಪುರ ಬಳಿ ಅಪಘಾತ: ಹತ್ತು ತಿಂಗಳ ಮಗು ಸೇರಿ ಮೂವರು ಸಾವು

​ಪ್ರಜಾವಾಣಿ ವಾರ್ತೆ
Published 8 ಮೇ 2022, 1:59 IST
Last Updated 8 ಮೇ 2022, 1:59 IST
   

ಕನಕಪುರ: ತಾಲ್ಲೂಕಿನ ಕೆಮ್ಮಾಳೆದೊಡ್ಡಿ ಬಳಿಯ ರಾಷ್ಟ್ರೀಯ ಹೆದ್ದಾರಿ 209ರಲ್ಲಿ ಶನಿವಾರ ಮುಂಜಾನೆ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಹತ್ತು ತಿಂಗಳ ಮಗು ಸೇರಿದಂತೆ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಉಡುಪಿ ಜಿಲ್ಲೆಯ ಸಾಲಿಗ್ರಾಮ ಸಮೀಪದ ಸಸ್ತನ್‌ ಗ್ರಾಮದ ಅಕ್ಷತಾ(27), ಅವರ ಹತ್ತು ತಿಂಗಳ‌ ಮಗು ಸುಮಂತ್ ಹಾಗೂ ಕಾರು ಚಾಲಕ ಉಮೇಶ್ (30) ಮೃತಪಟ್ಟವರು.ಅಪಘಾತದ ತೀವ್ರತೆಗೆ ಮಗುವಿನ ದೇಹ ಛಿದ್ರವಾಗಿದೆ.

ಅಕ್ಷತಾ ಅವರ ಪತಿ ಸುರೇಂದ್ರ (30) ತೀವ್ರವಾಗಿ ಗಾಯಗೊಂಡಿದ್ದು, ಇಲ್ಲಿನ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್‌ಗೆ ದಾಖಲಿಸಲಾಗಿದೆ.

ADVERTISEMENT

ಸುರೇಂದ್ರ ಅವರು ಕನಕಪುರದ ರತ್ನ ಹೋಟೆಲ್‌ನಲ್ಲಿ ಕ್ಯಾಷಿಯರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ನಿ ಅಕ್ಷತಾ ಮತ್ತು ಪುತ್ರ ಸ್ವಗ್ರಾಮದಲ್ಲಿದ್ದರು. ಅವರನ್ನು ಇಲ್ಲಿಗೆ ಕರೆದುಕೊಂಡು ಬರುವಾಗ ಈ ಅವಘಡ ಸಂಭವಿಸಿದೆ.

ಈ ಅಪಘಾತದಿಂದ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಶವಗಳನ್ನು ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಘಟನೆ ಸಂಬಂಧ ರತ್ನ ಹೋಟೆಲ್‌ ಮಾಲೀಕ ನಾಗರಾಜು ಸಾತನೂರು ಠಾಣೆಗೆ ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.