
ರಾಮನಗರ: ಜಿಲ್ಲೆಯ ವ್ಯಾಪ್ತಿಯಲ್ಲಿರುವ ಪ್ರವಾಹ ಪೀಡಿತ ಪ್ರದೇಶಗಳನ್ನು ಗುರುತಿಸಿ, ಆ ಪ್ರದೇಶದ ಸ್ಥಳೀಯ ಯುವಕರಿಗೆ ಪ್ರವಾಹದ ಸಂದರ್ಭದಲ್ಲಿ ತಮ್ಮನ್ನು ಹಾಗೂ ಸ್ಥಳೀಯರನ್ನು ರಕ್ಷಣೆ ಮಾಡುವ ಕುರಿತು ರಾಮನಗರ ಅಗ್ನಿಶಾಮಕ ಠಾಣೆ ವತಿಯಿಂದ ಸೋಮವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ತರಬೇತಿ ನಡೆಯಿತು.
ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಕೆ.ಬಿ. ಮಂಜುನಾಥ ಮಾತನಾಡಿ, ‘ಮಳೆ ಬಂದಾಗ ಪ್ರವಾಹದಂತಹ ನೈಸರ್ಗಿಕ ವಿಕೋಪಗಳು ಸಂಭವಿಸುವುದು ಸಹಜ. ನದಿಗಳು ತುಂಬಿ ಹರಿದಾಗ, ಕೆರೆ–ಕಟ್ಟೆಗಳು ಭರ್ತಿಯಾಗಿ ಕೋಡಿ ಬಿದ್ದಾಗ ಅಥವಾ ಅಡ್ಡವಾಗಿ ನಿರ್ಮಿಸಿದ್ದ ಒಡ್ಡು ಒಡೆದು ಹೋದಾಗ ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿ ಅನಾಹುತ ಸಂಭವಿಸುತ್ತದೆ. ಅಂತಹ ಸ್ಥಿತಿಯನ್ನು ಎದುರಿಸಲು ನಾವು ಸನ್ನದ್ಧರಾಗಿರಬೇಕು’ ಎಂದು ಹೇಳಿದರು.
‘ತುರ್ತು ಸಂದರ್ಭಗಳನ್ನು ನಿಭಾಯಿಸಲು ಕೇವಲ ಅಗ್ನಿಶಾಮಕ ದಳದ ಸಿಬ್ಬಂದಿ ಜೊತೆಗೆ, ಸ್ಥಳೀಯರೂ ಕೈ ಜೋಡಿಸಿದರೆ ಪರಿಹಾರ ಕಾರ್ಯವನ್ನು ಬೇಗನೆ ಮುಗಿಸಬಹುದು. ಆ ನಿಟ್ಟಿನಲ್ಲಿ ಪ್ರವಾಹ ಸಂಭವಿಸಬಹುದಾದ ಪ್ರದೇಶಗಳ ಜನರಿಗೂ ಪ್ರವಾಹ ಸಂದರ್ಭದಲ್ಲಿ ಕೈಗೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮಗಳು, ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆಯ ಕುರಿತು ತರಬೇತಿ ಆಯೋಜಿಸಲಾಗಿದೆ. ಇದರಿಂದ ಆಸ್ತಿ ಮತ್ತು ಪ್ರಾಣಹಾನಿ ತಡೆಯಲು ನೆರವಾಗಲಿದೆ’ ಎಂದು ತಿಳಿಸಿದರು.
ಜಿಲ್ಲೆಯ ವಿವಿಧ ಭಾಗಗಳ ಪ್ರವಾಹ ಪೀಡಿತ ಸ್ಥಳಗಳಲ್ಲಿನ ಯುವಕರು–ಯುವತಿಯರು, ಗೃಹ ರಕ್ಷಕ ದಳದ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿದಂತೆ ಸುಮಾರು 250 ಮಂದಿ ತರಬೇತಿಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.