ಚನ್ನಪಟ್ಟಣ: ‘ಭಾರತೀಯ ಸಂಸ್ಕೃತಿ ಹಾಗೂ ಸಾಂಪ್ರದಾಯಿಕ ಮೌಲ್ಯಗಳು ರಾಮಾಯಣದಲ್ಲಿ ಹಾಸುಹೊಕ್ಕಾಗಿದ್ದು, ರಾಮಾಯಣದಲ್ಲಿನ ಮಾನವೀಯ ಮೌಲ್ಯಗಳು ಜಗತ್ತಿಗೆ ಎಂದೆಂದಿಗೂ ಪ್ರಸ್ತುತವಾಗಿವೆ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಅಭಿಪ್ರಾಯಪಟ್ಟರು.
ನಗರದ ಕೊಲ್ಲಾಪುರದಮ್ಮ ದೇವಸ್ಥಾನದ ಆವರಣದ ಡಾ.ರಾಜ್ ಬಯಲು ರಂಗಮಂದಿರದಲ್ಲಿ ಶ್ರೀಕೆಂಗಲ್ ಆಂಜನೇಯ ಸಾಂಸ್ಕೃತಿಕ ಕಲಾ ಟ್ರಸ್ಟ್, ಕಲಾ ಬಳಗದಿಂದ ಗುರುವಾರ ಆಯೋಜಿಸಿದ್ದ ಸಂಪೂರ್ಣ ರಾಮಾಯಣ ಪೌರಾಣಿಕ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಶ್ರೀರಾಮಚಂದ್ರ ಭಾರತೀಯ ಸಂಸ್ಕೃತಿ, ಸಭ್ಯತೆ, ಜೀವನ ಮೌಲ್ಯಗಳ ಸಾಕಾರ ರೂಪ. ರಾಮಾಯಣದಲ್ಲಿ ಬರುವ ಅನೇಕ ಪಾತ್ರಗಳು ಜೀವನದ ಶಾಶ್ವತ ಮೌಲ್ಯಗಳಾದ ಧರ್ಮ, ಅರ್ಥ, ಕಾಮವನ್ನು ತಿಳಿಸಿಕೊಡುತ್ತವೆ. ಇಂತಹ ಮೌಲ್ಯಗಳನ್ನು ಸಾರುವ ಪೌರಾಣಿಕ ನಾಟಕಗಳು ಭಾರತೀಯ ಸಂಸ್ಕೃತಿಯ ಪ್ರತಿಬಿಂಬವಾಗಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಂಗಭೂಮಿ ಕಲಾ ಪ್ರೋತ್ಸಾಹಕರಾದ ಚಿಕ್ಕ ವೆಂಕಟೇಶ್, ಸುಮತಿ ಕುಮಾರ್ ಜೈನ್, ರಂಗ ನಿರ್ದೇಶಕ ಧರ್ಮೇಂದ್ರ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಮುಖಂಡ ಕೊಳ್ಳಿಗನಹಳ್ಳಿ ರಾಮು, ಕಲಾವಿದ ಗೋಪಾಲಗೌಡ, ಕಸಾಪ ಜಿಲ್ಲಾ ಘಟಕದ ನಿಕಟಪೂರ್ವ ಅಧ್ಯಕ್ಷ ಸಿಂ.ಲಿಂ. ನಾಗರಾಜು, ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಎಲೆಕೇರಿ ರವೀಶ್, ಕಲಾವಿದರಾದ ಎಲೆಕೇರಿ ಮಂಜುನಾಥ್, ಕೂಡ್ಲೂರು ವೆಂಕಟೇಶ್, ಮಹೇಶ್ ಕುಮಾರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.