ಕನಕಪುರ: ಚಿಕ್ಕತಿರುಪತಿಯಂದೇ ಪ್ರಸಿದ್ಧಿಯಾಗಿರುವ ಇಲ್ಲಿನ ಕಲ್ಲಹಳ್ಳಿ ಶ್ರೀನಿವಾಸ ದೇವಾಲಯದಲ್ಲಿ ವೆಂಕಟೇಶ್ವರಸ್ವಾಮಿ ಮೂರ್ತಿಗೆ ಲಕ್ಷ್ಮಿ ಅಮ್ಮನವರ ಅಲಂಕಾರವನ್ನು ವಿಶೇಷವಾಗಿ ಮಾಡಲಾಗಿದೆ.
ಸುಮಾರು 25 ವರ್ಷಗಳ ಹಿಂದೆ ಅರ್ಚಕರಿಗೆ ಪೂಜೆ ಮಾಡುವ ಸಂದರ್ಭದಲ್ಲಿ ವೆಂಕಟೇಶ್ವರಸ್ವಾಮಿ ಮೂರ್ತಿಯಿಂದ ಲಕ್ಷ್ಮಿ ಅಮ್ಮನವರ ದರ್ಶನವಾದಂತೆ ಅನುಭವವಾಗಿದ್ದರಿಂದ ಅಲ್ಲಿಂದ ಪ್ರತಿವರ್ಷ ಆಷಾಡ ಮಾಸಕ್ಕೂ ಮುನ್ನ ವೆಂಕಟೇಶ್ವರ ಮೂರ್ತಿಗೆ ಲಕ್ಷ್ಮಿ ಅಮ್ಮನವರ ಅಲಂಕಾರ ಮಾಡಿ ಅಮವಾಸ್ಯೆ ದಿವಸಕ್ಕೆ ಮುಕ್ತಾಯ ಮಾಡಲಾಗುತ್ತದೆ.
ಈ ವರ್ಷವು ಜೂನ್ 23 ರಂದು ಶ್ರೀನಿವಾಸಸ್ವಾಮಿಯ ಮೂರ್ತಿಗೆ ಅಮ್ಮನವರ ಅಲಂಕಾರ ಮಾಡಿ ಚಿನ್ನಾಭರಣವನ್ನು ತೊಡಿಸಿ ಪ್ರತಿದಿನ ವಿಶೇಷವಾಗಿ ವಿವಿಧ ಹೂಗಳಿಂದ ಅಲಂಕಾರ ಮಾಡಿ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಜೂನ್ 28 ಮಂಗಳವಾರಕ್ಕೆ ಅಮ್ಮನವರ ಅಲಂಕಾರ ಮುಕ್ತಾಯವಾಗುತ್ತದೆ.
ಕಲ್ಲಹಳ್ಳಿ ದೇವಾಲಯದಲ್ಲಿ ಅಮ್ಮನವರ ಅಲಂಕಾರ ಮಾಡುತ್ತಿರುವುದರಿಂದ ಸುತ್ತಮುತ್ತಲ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಬಂದು ಪೂಜಾ ಕಾರ್ಯದಲ್ಲಿ ಪಾಲ್ಗೊಂಡು ಅಮ್ಮನವರ ದರ್ಶನ ಪಡೆಯುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.