ADVERTISEMENT

ರಾಮನಗರ: ಸುಳ್ಳು ಸುದ್ದಿ ತಂದ ಆತಂಕ

​ಪ್ರಜಾವಾಣಿ ವಾರ್ತೆ
Published 27 ಜನವರಿ 2019, 14:21 IST
Last Updated 27 ಜನವರಿ 2019, 14:21 IST
ನೀರು ಪೋಲಾಗುತ್ತಿರುವ ದೃಶ್ಯ
ನೀರು ಪೋಲಾಗುತ್ತಿರುವ ದೃಶ್ಯ   

ರಾಮನಗರ: ‘ಕನಕಪುರ ತಾಲ್ಲೂಕಿನ ಹಾರೋಹಳ್ಳಿ ಬಳಿ ಕಾವೇರಿ ನೀರು ಸರಬರಾಜು ಪೈಪ್‌ಲೈನ್‌ ಒಡೆದು ಅಪಾರ ನೀರು ಪೋಲಾಗುತ್ತಿದೆ’ ಎನ್ನುವ ವೀಡಿಯೊವೊಂದು ವಾಟ್ಸ್‌ ಆ್ಯಪ್‌ನಲ್ಲಿ ಹರಿದಾಡುತ್ತಿದ್ದು, ಈ ಸುಳ್ಳು ಸುದ್ದಿಯಿಂದಾಗಿ ಜನರು ಆತಂಕ ಪಡುವಂತಾಯಿತು.

ಪೈಪ್‌ಲೈನ್ ಒಡೆದು ನೀರು ಆಕಾಶದೆತ್ತರಕ್ಕೆ ಚಿಮ್ಮುವ ವೀಡಿಯೊ ಒಂದನ್ನು ಕೆಲವರು ಹರಿಬಿಟ್ಟಿದ್ದು, ಇದಕ್ಕೆ ಹಾರೋಹಳ್ಳಿ ಬಳಿ ನಡೆದ ಘಟನೆ ಎಂದು ಬಣ್ಣ ಹಚ್ಚಿದ್ದರು. ಆದರೆ ವಾಸ್ತವದಲ್ಲಿ ಅದು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಕೆಲವು ದಿನಗಳ ಹಿಂದೆ ‘ಮಿಶನ್ ಭಗೀರಥ’ ಎಂಬ ನೀರು ಸರಬರಾಜು ಯೋಜನೆಯ ಪೈಪ್‌ಲೈನ್ ಒಡೆದ ವೀಡಿಯೊ ಆಗಿತ್ತು.

ಈ ಸುಳ್ಳು ಸುದ್ದಿ ಹಬ್ಬುತ್ತಲೇ ಸಾಕಷ್ಟು ಜನರು ಹಾರೋಹಳ್ಳಿ ಪೊಲೀಸ್ ಠಾಣೆಗೆ, ಬೆಂಗಳೂರಿನಲ್ಲಿರುವ ಬಿಡಬ್ಲ್ಯುಎಸ್‌ಎಸ್‌ಬಿ ಕಚೇರಿಗೆ ದೂರವಾಣಿ ಕರೆ ಮಾಡಿ ವಿಚಾರಿಸಿಕೊಂಡರು. ಅಲ್ಲಿನ ಸಿಬ್ಬಂದಿ ಸಾರ್ವಜನಿಕರಿಗೆ ಉತ್ತರ ನೀಡುವಷ್ಟರಲ್ಲಿ ಸುಸ್ತಾದರು.

ADVERTISEMENT

ಮಂಡ್ಯ ಜಿಲ್ಲೆಯ ತೊರೆಕಾಡನಹಳ್ಳಿ ಬಳಿ ಕಾವೇರಿ ನದಿಯಿಂದ ನೀರನ್ನು ಎತ್ತಿ ಕನಕಪುರ ಮಾರ್ಗವಾಗಿ ಪೈಪ್‌ಲೈನ್‌ ಮೂಲಕ ಬೆಂಗಳೂರಿಗೆ ಸರಬರಾಜು ಮಾಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.