ರಾಮನಗರ: ಸಮಾಜದಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದ್ದು, ಅವರು ಸಾಮಾಜಿಕ ಸಂಬಂಧಗಳ ಕೊಂಡಿಯನ್ನು ವಿಸ್ತರಿಸಬೇಕು ಎಂದು ಬೆಂಗಳೂರು ವಿಶ್ವವಿದ್ಯಾಲಯದ ರಾಮನಗರ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಿ. ಡೊಮಿನಿಕ್ ಅಭಿಪ್ರಾಯಪಟ್ಟರು.
ನಗರದ ಸ್ನಾತಕೋತ್ತರ ಕೇಂದ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಿಕ್ಷಕರು ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಅರಿತು ಅದಕ್ಕೆ ಅನುಗುಣವಾಗಿ ರೂಪಿಸಬೇಕು. ಶೋಷಿತ ಸಮುದಾಯಗಳು ಇಂದು ಅಕ್ಷರ ವಂಚಿತ ಸಮುದಾಯಗಳಾಗಿ ಕಾಣಿಸುತ್ತಿದ್ದರೂ ಪಾರಂಪರಿಕವಾಗಿ ಅವರಲ್ಲಿ ಸಾಂಪ್ರದಾಯಿಕವಲ್ಲದ ಶಿಕ್ಷಣದ ಅರಿವು ಸುದೀರ್ಘ ಕಾಲದಿಂದಲು ಅಂತರ್ಗತವಾಗಿದ್ದು, ಅದು ಇಂದು ಮುನ್ನೆಲೆಗೆ ಬರಬೇಕಾಗಿದೆ. ಈ ದಿಕ್ಕಿನಲ್ಲಿ ಶಿಕ್ಷಕರು ಚಿಂತಿಸಿ ಕಾರ್ಯೋನ್ಮುಖರಾಗಬೇಕಾಗಿದೆ ಎಂದರು.
ಶಿಕ್ಷಣ, ಲಿಂಗ ಅಸಮಾನತೆ, ಶೋಷಣೆ ಮುಕ್ತ ಸಮಾಜದ ನಿರ್ಮಾಣಕ್ಕೆ ದಾರಿದೀಪವಾಗುತ್ತದೆ ಎಂಬುದನ್ನು ಆಧುನಿಕ ಭಾರತದ ಇತಿಹಾಸದಲ್ಲಿ ಮೊದಲಿಗೆ ಶಿಕ್ಷಕರಾಗಿ ಜ್ಯೋತಿ ಬಾಪುಲೆ, ಸಾವಿತ್ರಿಬಾಯಿ ಪುಲೆ ಮತ್ತು ಫಾತಿಮಾಶೇಖ್ ನಿರ್ವಹಿಸಿದ ಕಾರ್ಯಗಳು ಇಂದಿನ ಶಿಕ್ಷಕರಿಗೆ ಆದರ್ಶವಾಗಬೇಕಾಗಿದೆ ಎಂದರು.
ರಾಜ್ಯಶಾಸ್ತ್ರ ಉಪನ್ಯಾಸಕ ರಂಗಸ್ವಾಮಿ ಮಾತನಾಡಿ, ರಾಷ್ಟ್ರಪತಿ ಕೆ.ಆರ್. ನಾರಾಯಣ್ ಅವರ ಬದುಕಿಗೆ ಪ್ರೇರಣೆಯಾದ ಶಿಕ್ಷಕಿಯ ಪಾತ್ರವನ್ನು ತಿಳಿಸಿದರು.
ಅರ್ಥಶಾಸ್ತ್ರ ಉಪನ್ಯಾಸಕಿ ಎಂ. ಶ್ವೇತಾ, ಕನ್ನಡ ವಿಭಾಗದ ಲಕ್ಷ್ಮಿನಾರಾಯಣಸ್ವಾಮಿ, ವಿದ್ಯಾರ್ಥಿಗಳಾದ ಮಹೇಶ್, ರಾಜು, ಜ್ಯೋತಿ, ಮಾನಸಾ, ಯಶಸ್ವಿನಿ ಮಾತನಾಡಿದರು.
ಇತಿಹಾಸ ವಿಭಾಗದ ರವಿಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ವಿಭಾಗದ ಉಪನ್ಯಾಸಕ ಎಸ್.ಎಂ. ಗೋಪಿ ಸ್ವಾಗತಿಸಿದರು. ಗ್ರಾಮೀಣಾಭಿವೃದ್ಧಿ ವಿಭಾಗದ ಉಪನ್ಯಾಸಕ ಎಂ.ಪಿ. ಶ್ರೀರಂಗನಾಥ್
ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.