ADVERTISEMENT

ಪತ್ನಿ ಆತ್ಮಹತ್ಯೆಗೆ ಯತ್ನ: ಪತಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2019, 16:37 IST
Last Updated 20 ಜನವರಿ 2019, 16:37 IST

ಕನಕಪುರ: ಪತ್ನಿ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದರಿಂದ ಹೆದರಿದ ಪತಿ, ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ತೇರಿನದೊಡ್ಡಿ ಗ್ರಾಮದಲ್ಲಿ ಭಾನುವಾರ ನಡೆದಿದೆ.

ಕೃಷ್ಣ (35) ಆತ್ಮಹತ್ಯೆಗೆ ಮಾಡಿಕೊಂಡವರು. ಪತ್ನಿ ಪಾರ್ವತಿ (30)ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಆರು ವರ್ಷದ ಪುತ್ರಿ, ನಾಲ್ಕು ವರ್ಷದ ಪುತ್ರ ಇದ್ದಾರೆ.

ನೇಮ್‌ ಬೋರ್ಡ್‌ ಬರೆಯುವ ಕೆಲಸ ಮಾಡುತ್ತಿದ್ದ ಕೃಷ್ಣ, 8ವರ್ಷಗಳ ಹಿಂದೆ ವಿವಾಹವಾಗಿ ಗ್ರಾಮದಲ್ಲೇ ವಾಸವಿದ್ದರು. ಪತ್ನಿಯನ್ನು ಸದಾ ಅನುಮಾನಿಸುತ್ತಿದ್ದ ಕೃಷ್ಣ, ತಾನು ಹೊರಗೆ ಹೋಗಬೇಕೆಂದರೆ ಮಕ್ಕಳು ಹಾಗೂ ಪತ್ನಿಯನ್ನು ಮನೆಯಲ್ಲಿ ಕೂಡಿಹಾಕಿ ಬೀಗ ಹಾಕುತ್ತಿದ್ದ ಎನ್ನಲಾಗಿದೆ.

ADVERTISEMENT

ಪತಿಯ ಈ ಗುಣದಿಂದ ಬೇಸರಗೊಂಡ ಪಾರ್ವತಿ ಜ.15ರಂದುಗಂಡನ ಕಿರುಕುಳದಿಂದ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಪತ್ರ ಬರೆದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಈ ವೇಳೆ ಮನೆಯಲ್ಲಿದ್ದ ಮಕ್ಕಳು ಬೆಂಕಿ ಮೇಲೆ ನೀರು ಹಾಕಿ ನಂದಿಸಿದ್ದಾರೆ. ಅಷ್ಟರಲ್ಲಾಗಲೇ ಶೇಕಡ 80ರಷ್ಟು ಸುಟ್ಟುಹೋಗಿದ್ದ ಪಾರ್ವತಿ ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರ ಗಾಯಗಳಾಗಿರುವುದಾಗಿ ವೈದ್ಯರು ತಿಳಿಸಿದ್ದು ಈ ಸಂಬಂಧ ಕೃಷ್ಣನ ಮೇಲೆ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಪತ್ನಿ ಆತ್ಮಹತ್ಯೆಗೆ ಯತ್ನಿಸಿದ ನಂತರ ಗ್ರಾಮದಿಂದ ಕಣ್ಮರೆಯಾಗಿದ್ದ ಕೃಷ್ಣ ಭಾನುವಾರ ಗ್ರಾಮದ ಹೊರ ವಲಯದ ಮರವೊಂದರಲ್ಲಿ ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.