ADVERTISEMENT

ಕನಕಪುರ| ನರೇಗಾ ಯೋಜನೆಯಡಿ ಕೆಲಸ

​ಪ್ರಜಾವಾಣಿ ವಾರ್ತೆ
Published 1 ಮೇ 2020, 9:10 IST
Last Updated 1 ಮೇ 2020, 9:10 IST
ತಿಗಳರ ಹೊಸಳ್ಳಿ ಗ್ರಾಮದ ಕೆರೆಯಲ್ಲಿ ಹೂಳು ತೆಗೆಯುತ್ತಿರುವ ನರೇಗಾ ಕಾರ್ಮಿಕರು
ತಿಗಳರ ಹೊಸಳ್ಳಿ ಗ್ರಾಮದ ಕೆರೆಯಲ್ಲಿ ಹೂಳು ತೆಗೆಯುತ್ತಿರುವ ನರೇಗಾ ಕಾರ್ಮಿಕರು   

ಕನಕಪುರ: ಲಾಕ್‌ಡೌನ್‌ ಸಮಯದಲ್ಲಿ ಕೂಲಿ ಕಾರ್ಮಿಕರಿಗೆ ನರೇಗಾ ಯೋಜನೆಯಡಿ ಕೆರೆ, ಕಲ್ಯಾಣಿ, ಗೋಕಟ್ಟೆ ಅಭಿವೃದ್ಧಿ ಕಾಮಗಾರಿ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಮೋಹನ್‌ಕುಮಾರ್‌ ಹೇಳಿದರು.

ಇಲ್ಲಿನ ಟಿ.ಬೇಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ₹7.10ಲಕ್ಷ ವೆಚ್ಚದಲ್ಲಿ ನಡೆಸುತ್ತಿರುವ ಕೆರೆ ಅಭಿ
ವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಕಾಮಗಾರಿ ಮಾಡುವ ಸಮಯದಲ್ಲಿ ಕಾರ್ಮಿಕರು ಅಂತರ ಕಾಯ್ದುಕೊಳ್ಳಬೇಕು. ಇದಕ್ಕಾಗಿ 3 ಮೀಟರ್‌ ಅಂತರದಲ್ಲಿ ಕೆಲಸ ಮಾಡುವಂತೆ ನೋಡಿ ಕೊಳ್ಳಲಾಗಿದೆ ಎಂದರು.

ADVERTISEMENT

ತಾಲ್ಲೂಕಿನಲ್ಲಿ ಒಟ್ಟು 65 ಸಾವಿರ ಜಾಬ್‌ ಕಾರ್ಡ್‌ಗಳಿವೆ. 1.40 ಲಕ್ಷ ಕೂಲಿ ಕಾರ್ಮಿಕರಿದ್ದಾರೆ. ಕೂಲಿ ಕಲ್ಪಿಸಲು ತಾಲ್ಲೂಕಿನ 43 ಗ್ರಾಮ ಪಂಚಾಯಿತಿಗಳಿಂದ 667 ಕಾಮಗಾರಿ ಮಾಡಲಾಗುತ್ತಿದೆ. ಅದರಲ್ಲಿ 125 ಕಾಮಗಾರಿಗಳಿಗೆ ಪೂರ್ಣಗೊಂಡಿವೆ. ಉಳಿದವುಗಳನ್ನು ಮೇ ಅಂತ್ಯದೊಳಗೆ ಮುಕ್ತಾಯ ಮಾಡಲಾಗುವುದು ಎಂದು ತಿಳಿಸಿದರು.

ಸಮುದಾಯ ಕಾಮಗಾರಿಗಳ ಜತೆಗೆ ವೈಯಕ್ತಿಕ ಕಾಮಗಾರಿಗಳನ್ನು ರೈತರು ತಮ್ಮ ಜಮೀನುಗಳಲ್ಲಿ ಮಾಡಬ
ಹುದಾಗಿದೆ. ಭೂಮಿ ಸಮತಟ್ಟು, ಬದುನಿರ್ಮಾಣ, ಕೃಷಿ ಹೊಂಡ, ದನದ ಕೊಟ್ಟಿಗೆ ನಿರ್ಮಾಣ ಮಾಡಿಕೊಳ್ಳಬಹುದು.

‘ಗ್ರಾಮ ಪಂಚಾಯಿತಿ ಜತೆಗೆ ಕೃಷಿ, ತೋಟಗಾರಿಕೆ, ಅರಣ್ಯ, ರೇಷ್ಮೆ ಇಲಾಖೆ ಹಾಗೂ ಪಂಚಾಯತ್‌ ರಾಜ್‌ ಇಲಾಖೆಯಿಂದಲೂ ಕೆಲಸ ಮಾಡಬಹುದಾಗಿದೆ. ಮಳೆ ನೀರು ಸದ್ಬಳಕೆ ಮಾಡಿಕೊಳ್ಳಲು ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಳೆ ನೀರು ಸಂಗ್ರಹ ಮಾಡಲಾಗುವುದು. ಪಂಚಾಯಿತಿ ಕಟ್ಟಡ ಅಥವಾ ಶಾಲಾ ಕಟ್ಟಡದಲ್ಲಿ ಮಳೆ ನೀರು ಸಂಗ್ರಹ ಮಾಡಲು ಅವಕಾಶ ಕಲ್ಪಿಸಲಾಗಿದೆ’ ಎಂದು ಹೇಳಿದರು.

ಪಿಆರ್‌ಡಿ ತಾಂತ್ರಿಕ ಸಂಯೋಜಕ ಮಹದೇವಸ್ವಾಮಿ, ತಾಂತ್ರಿಕ ಸಹಾಯಕ ಸಿ.ಎಸ್‌.ನಿಂಗರಾಜು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಂಗೇಗೌಡ, ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಮ್ಮ, ಸದಸ್ಯ ಮಹದೇವಯ್ಯ, ಕರವಸೂಲಿಗಾರ ರಾಮಚಂದ್ರ, ಸಿಬ್ಬಂದಿ ಕುಮಾರ, ಸುದರ್ಶನ, ಉಮೇಶ್‌ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.