ADVERTISEMENT

ಮಾಗಡಿ | ವಿಶ್ವ ಮಣ್ಣು ದಿನಾಚರಣೆ: ಎರೆಹುಳು ಗೊಬ್ಬರ ತಯಾರಿಕೆ ತರಬೇತಿ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 2:26 IST
Last Updated 9 ಡಿಸೆಂಬರ್ 2025, 2:26 IST
ಮಾಗಡಿ ತಾಲ್ಲೂಕಿನ ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಶ್ವ ಮಣ್ಣು ದಿನದ ಅಂಗವಾಗಿ ಜಿಲ್ಲೆಯ ಆಯ್ದ 30 ರೈತರಿಗೆ ಎರೆಹುಳು ಮತ್ತು ವರ್ಮಿಬ್ಯಾಗ್ ವಿತರಣೆ ಮಾಡಲಾಯಿತು 
ಮಾಗಡಿ ತಾಲ್ಲೂಕಿನ ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಶ್ವ ಮಣ್ಣು ದಿನದ ಅಂಗವಾಗಿ ಜಿಲ್ಲೆಯ ಆಯ್ದ 30 ರೈತರಿಗೆ ಎರೆಹುಳು ಮತ್ತು ವರ್ಮಿಬ್ಯಾಗ್ ವಿತರಣೆ ಮಾಡಲಾಯಿತು    

ಮಾಗಡಿ:‌ ತಾಲ್ಲೂಕಿನ ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರ ಮತ್ತು ಎಸ್ಕಾರ್ಟ್ಸ್ ಕುಬೋಟಾ ಲಿಮಿಟೆಡ್ ಸಂಸ್ಥೆ ಸಹಯೋಗದಲ್ಲಿ ವಿಶ್ವ ಮಣ್ಣು ದಿನಾಚರಣೆ ನಡೆಯಿತು.

ಮಣ್ಣು ಪ್ರಕೃತಿಯ ಅಮೂಲ್ಯ ಕೊಡುಗೆ. ಜಗತ್ತಿನ ಜೀವ ವೈವಿಧ್ಯ ಮತ್ತು ಸುಮಾರು ಶೇ95 ಆಹಾರ ಉತ್ಪಾದನೆಗೆ ಇದೇ ಆಧಾರ. ಆರೋಗ್ಯಕರ ಮಣ್ಣು ಇಲ್ಲದೆ ಆರೋಗ್ಯಕರ ಬೆಳೆ ಸಾಧ್ಯವಿಲ್ಲ. ಪ್ರಸ್ತುತ ಭೂಮಿಯ ಸುಮಾರು ಶೇ33 ಭಾಗದ ಮಣ್ಣು ಫಲವತ್ತತೆ ಕಳೆದುಕೊಂಡಿದೆ. ಮಣ್ಣಿನ ಸವೆತ, ಮಣ್ಣಿನ ಸಂರಕ್ಷಣೆಗೆ ಕೈಜೋಡಿಸಬೇಕು. ಮಣ್ಣಿನ ಆರೋಗ್ಯದ ಬಗ್ಗೆ ಅರಿವು ಮೂಡಿಸಲು ಪ್ರತಿವರ್ಷ ವಿಶ್ವ ಮಣ್ಣು ದಿನ ಆಚರಿಸಲಾಗುತ್ತಿದೆ. ಈ ಆಚರಣೆಯು 2002ರಲ್ಲಿ ಥೈಲಾಂಡ್‌ನಲ್ಲಿ ನಡೆದ ಮಣ್ಣು ವಿಜ್ಞಾನಿಗಳ ಸಮಾವೇಶದಿಂದ ಪ್ರೇರಣೆ ಪಡೆದಿದೆ ಎಂದು ಮಣ್ಣು ವಿಜ್ಞಾನಿ ಡಿ.ಸಿ.ಪ್ರೀತು ತಿಳಿಸಿದರು.

ತರಬೇತಿಯಲ್ಲಿ ಎರೆಹುಳುಗಳ ಪ್ರಾಮುಖ್ಯತೆ, ವರ್ಮಿ-ಬ್ಯಾಗ್‌ನಲ್ಲಿ ಗೊಬ್ಬರ ತಯಾರಿಕೆ, ಜೈವಿಕ ತ್ಯಾಜ್ಯ ನಿರ್ವಹಣೆ, ತೇವಾಂಶ ಮತ್ತು ಗಾಳಿಯಾಟ ನಿಯಂತ್ರಣ, ವರ್ಮಿ-ಕಂಪೋಸ್ಟ್ ಮತ್ತು ವರ್ಮಿ-ವಾಷ್ ಬಳಕೆ ಮತ್ತು ಮಾರುಕಟ್ಟೆ ಸಾಧ್ಯತೆ ಕುರಿತು ಮಾಹಿತಿ ನೀಡಲಾಯಿತು.

ADVERTISEMENT

ಕೇಂದ್ರದ ಮುಖ್ಯಸ್ಥ ಡಾ.ಶ್ವೇತಾ ಮಾತನಾಡಿ, ‘ಮಣ್ಣು ಮತ್ತು ನೀರಿನ ಸಂರಕ್ಷಣೆ ಇಲ್ಲದಿದ್ದರೆ ಆಹಾರ ಉತ್ಪಾದನೆ ಕುಗ್ಗಿ ಆಹಾರ ಭದ್ರತೆ ತೀವ್ರ ಸ್ಥಿತಿಗೆ ಬರುತ್ತದೆ’ ಎಂದರು.

ಕೇಂದ್ರದ ಬೇಸಾಯ ಶಾಸ್ತ್ರ ವಿಜ್ಞಾನಿ ಡಾ.ಪ್ರಮೋದ್ ಜಿ., ‘ಎರೆಹುಳು ಗೊಬ್ಬರ ಮಣ್ಣಿನ ಆರೋಗ್ಯ ಸುಧಾರಿಸುವ ಉತ್ತಮ ಸಾವಯವ ವಿಧಾನ. ಇದರ ಬಳಕೆಯಿಂದ ರೈತರು ಉತ್ಪಾದನೆ ಮತ್ತು ಬೆಳೆ ಗುಣಮಟ್ಟ ಹೆಚ್ಚಿಸಬಹುದು’ ಎಂದರು. 

ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯ 30 ಮುಂದಾಳು ರೈತರಿಗೆ ತರಬೇತಿ ನೀಡಿದ ಜೊತೆಗೆ ಎರೆಹುಳು ಮತ್ತು ವರ್ಮಿ-ಬ್ಯಾಗ್‌ ವಿತರಿಸಲಾಯಿತು.

ಕೇಂದ್ರದ ವಿಜ್ಞಾನಿಗಳು ಡಾ.ಸೌಜನ್ಯ ಎಸ್., ಡಾ.ರಾಜೇಂದ್ರ ಪ್ರಸಾದ್ ಬಿ.ಎಸ್., ಡಾ.ದೀಪಾ ಪೂಜಾರಿ ಮತ್ತು ಎಸ್ಕಾರ್ಟ್ಸ್ ಕುಬೋಟಾ ಸಂಸ್ಥೆ ಪ್ರತಿನಿಧಿ ಪ್ರಶಾಂತ್ ಹಾಗೂ ಇತರ ಸಿಬ್ಬಂದಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.