
ರಾಮನಗರ: ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಯುವಕನೊಬ್ಬನನ್ನು ಆತನ ಹಳೆ ಸ್ನೇಹಿತರೇ ಮಾರಕಾಸ್ತ್ರಗಳಿಂದು ಹೊಡೆದು ಕೊಲೆ ಮಾಡಿರುವ ಘಟನೆ ಕಗ್ಗಲೀಪುರ ಪೊಲೀಸ್ ಠಾಣೆ ವ್ಯಾಪ್ತಿಯ ಓಬಿಚೂಡನಹಳ್ಳಿಯಲ್ಲಿ ಸೋಮವಾರ ನಡೆದಿದೆ.
ಬೆಂಗಳೂರು ದಕ್ಷಿಣ ತಾಲ್ಲೂಕಿನ ಉದಿಪಾಳ್ಯದ ಕಾರ್ತಿಕ್ (23) ಕೊಲೆಯಾದ ಯುವಕ. ಉದಿಪಾಳ್ಯದ ಆಟೊ ಭರತ್, ಶಿವು ಹಾಗೂ ಅವಿನಾಶ್ ಆರೋಪಿಗಳಾಗಿದ್ದು, ಕೃತ್ಯದ ಬಳಿಕ ತಲೆ ಮರೆಸಿಕೊಂಡಿದ್ದಾರೆ.
ಕೂಲಿ ಸೇರಿದಂತೆ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡಿದ್ದ ಮೃತ ಕಾರ್ತಿಕ್ ಮತ್ತು ಪ್ರಮುಖ ಆರೋಪಿ ಭರತ್ ಮುಂಚೆ ಸ್ನೇಹಿತರಾಗಿದ್ದರು. ನಂತರ ಇಬ್ಬರ ನಡುವೆ ಹಣದ ವಿಷಯಕ್ಕೆ ಜಗಳವಾಗಿದ್ದರಿಂದ ವೈಮನಸ್ಸು ಉಂಟಾಗಿ ದ್ವೇಷ ಸಾಧಿಸುತ್ತಿದ್ದರು. ಬೇರಾಗಿದ್ದರು. ಹಿಂದೊಮ್ಮೆ ಭರತ್ ಮೇಲೆ ಲಾಂಗ್ ಬೀಸಿದ್ದ ಕಾರ್ತಿಕ್, ಇತ್ತೀಚೆಗೆ ಭರತ್ ತಂದೆಗೆ ಕೆಟ್ಟದಾಗಿ ಬೈದಿದ್ದ.
ತನ್ನ ಕೊಲೆಗೆ ಯತ್ನಿಸಿದ್ದಲ್ಲದೆ, ತಂದೆಗೆ ಬೈದಿದ್ದ ಕಾರ್ತಿಕ್ ವಿರುದ್ಧ ಸೇಡು ತೀರಿಸಿಕೊಳ್ಳಲು ಭರತ್ ಕಾಯುತ್ತಿದ್ದ. ಸೋಮವಾರ ರಾತ್ರಿ 7.30ರ ಸುಮಾರಿಗೆ ಓಬಿಚೂಡನಹಳ್ಳಿಯಲ್ಲಿರುವ ಬಾರ್ಗೆ ಕಾರ್ತಿಕ್ ಮದ್ಯ ಸೇವಿಸಲು ಬಂದಿದ್ದ. ಅದೇ ಸಂದರ್ಭದಲ್ಲಿ ಭರತ್ ಸಹ ತನ್ನ ಸಹಚರರೊಂದಿಗೆ ಅಲ್ಲಿಗೆ ಬಂದಿದ್ದ.
ಮದ್ಯ ಸೇವಿಸುವಾಗ ಕಾರ್ತಿಕ್ನನ್ನು ಭರತ್ ಗುರಾಯಿಸಿದ್ದ ಎಂಬ ಕಾರಣಕ್ಕೆ ಇಬ್ಬರ ನಡುವೆ ಜಗಳ ಶುರುವಾಗಿತ್ತು. ಆಗ ಭರತ್ ತನ್ನ ಸಹಚರರೊಂದಿಗೆ ಸೇರಿಕೊಂಡು ಲಾಂಗ್ ಮತ್ತು ಚಾಕುವಿನಿಂದ ಕಾರ್ತಿಕ್ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿ ಕೊಲೆ ಮಾಡಿದ್ದ. ಹಲ್ಲೆಯ ತೀವ್ರತೆಗೆ ಕಾರ್ತಿಕ್ ಮುಂಗೈ ತುಂಡಾಗಿತ್ತು. ಕೃತ್ಯದ ಬಳಿಕ ಮೂವರೂ ಪರಾರಿಯಾಗಿದ್ದರು.
ವಿಷಯ ತಿಳಿದು ಸ್ಥಳಕ್ಕೆ ತೆರಳಿ ಶವವನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಘಟನೆ ಕುರಿತು ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ತಲೆ ಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.
ಮನೆಯಲ್ಲಿ ಚಿನ್ನಾಭರಣ ಕಳ್ಳತನ
ರಾಮನಗರ: ಇಲ್ಲಿನ ವಿನಾಯಕನಗರದ ಮನೆಯೊಂದರ ಬಾಗಿಲು ಮುರಿದು ಒಳ ನುಗ್ಗಿರುವ ಕಳ್ಳರು ಮನೆಯಲ್ಲಿದ್ದ ಅರ್ಧ ಕೆ.ಜಿ ಚಿನ್ನಾಭರಣ ಕದ್ದೊಯ್ದಿದ್ದಾರೆ. ಸಾಫ್ಟ್ವೇರ್ ಎಂಜಿನಿಯರ್ ನಿಖಿಲ್ ಅವರ ಮನೆಯಲ್ಲಿ ಕೃತ್ಯ ನಡೆದಿದೆ. ಕೆಲಸದ ನಿಮಿತ್ತ ನಿಖಿಲ್ ಅವರು ಹೊರ ಹೋಗಿದ್ದರು. ಈ ವೇಳೆ ಕಾರಿನಲ್ಲಿ ಬಂದಿರುವ ಕಳ್ಳರು ಮನೆ ಬೀಗ ಮುರಿದು ಬೆಡ್ ರೂಂನಲ್ಲಿದ್ದ ಚಿನ್ನಾಭರಣ ಕದ್ದಿದ್ದಾರೆ. ತಮ್ಮ ಕೃತ್ಯ ಗೊತ್ತಾಗುತ್ತದೆ ಎಂದು ಮನೆಯಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಹಾನಿಗೊಳಿಸಿ ಡಿವಿಆರ್ ಸಹ ತೆಗೆದುಕೊಂಡು ಹೋಗಿದ್ದಾರೆ. ಸಂಜೆ ಲಿಖಿತ್ ಅವರು ಮನೆಗೆ ಬಂದಾಗ ಕಳ್ಳತನವಾಗಿರುವುದು ಗೊತ್ತಾಗಿದೆ. ಸ್ಥಳಕ್ಕೆ ರಾಮನಗರ ಟೌನ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.