ನಿಖಿಲ್ ಕುಮಾರಸ್ವಾಮಿ
– ಫೇಸ್ಬುಕ್ ಚಿತ್ರ
ರಾಮನಗರ: ‘ಧಾರವಾಡದಲ್ಲಿ ಹೊತ್ತಿಕೊಂಡಿರುವ ನಿರುದ್ಯೋಗಿ ಯುವಜನರ ಕಿಚ್ಚು ಇಡೀ ರಾಜ್ಯಕ್ಕೆ ವ್ಯಾಪಿಸುವುದರಲ್ಲಿ ಸಂಶಯವಿಲ್ಲ. ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದು ಮೂರು ವರ್ಷವಾಗುತ್ತಾ ಬಂದರೂ, ಒಂದೇ ಒಂದು ಹುದ್ದೆ ಭರ್ತಿ ಮಾಡಿಲ್ಲ. ಉದ್ಯೋಗ ಭರ್ತಿ ಮತ್ತು ಸೃಷ್ಟಿಯ ಭರವಸೆ ನೀಡಿದ್ದ ಸರ್ಕಾರದ ನಾಯಕರು ಕುರ್ಚಿ ಕಾಳಗದಲ್ಲಿ ಮುಳುಗಿದ್ದಾರೆ’ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದರು.
ತಾಲ್ಲೂಕಿನ ತೆಂಗಿನಕಲ್ಲು ಗ್ರಾಮದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಿರುದ್ಯೋಗಿಗಳಿಗೆ ಯುವನಿಧಿ ಗ್ಯಾರಂಟಿಯಡಿ ₹3 ಸಾವಿರ ಕೊಡುತ್ತಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಲಘುವಾಗಿ ಮಾತನಾಡಿದ್ದಾರೆ. ಆದರೆ, ಯುವಜನರು ಯುವನಿಧಿ ನಂಬಿಕೊಂಡಿಲ್ಲ. ಅವರಿಗೆ ಬೇಕಿರುವುದು ಸ್ವಾಭಿಮಾನದ ಬದುಕು. ಅದಕ್ಕಾಗಿ ಉದ್ಯೋಗ ಸೃಷ್ಟಿಸಿ ಕೊಟ್ಟ ಮಾತು ಉಳಿಸಿಕೊಳ್ಳಬೇಕು’ ಎಂದು ಆಗ್ರಹಿಸಿದರು.
‘ರಾಜ್ಯದಲ್ಲಿ ಖಾಲಿ ಇರುವ 2.85 ಲಕ್ಷಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಕಳೆದ ವರ್ಷವೇ ಸರ್ಕಾರ ಹೇಳಿತ್ತು. ಆದರೆ, ಇದುವರೆಗೆ ಖಾಲಿ ಹುದ್ದೆ ಭರ್ತಿ ಮಾಡದಿರುವುದು ಖಂಡನೀಯ. ಇದೇ ಕಾರಣಕ್ಕೆ ಉದ್ಯೋಗಾಕಾಂಕ್ಷಿ ಯುವಜನರು ಸರ್ಕಾರದ ವಿರುದ್ದ ರೊಚ್ಚಿಗೆದಿದ್ದಾರೆ. ಯುವಕರ ಕಿಚ್ಚು ರಾಜ್ಯಕ್ಕೆ ವ್ಯಾಪಿಸುವುದಕ್ಕೆ ಮುಂಚೆ ಎಚ್ಚೆತ್ತುಕೊಳ್ಳುಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.