ADVERTISEMENT

ರಾಜಕಾರಣಕ್ಕೆ ಧರ್ಮ ಬಳಕೆ ಸರಿಯಲ್ಲ: ಧಾರ್ಮಿಕ ಮುಖಂಡರ ದುಂಡುಮೇಜಿನ ಸಭೆ

ನಗರದಲ್ಲಿ ನಡೆದ ಧಾರ್ಮಿಕ ಮುಖಂಡರ ದುಂಡುಮೇಜಿನ ಸಭೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2022, 19:53 IST
Last Updated 23 ಜೂನ್ 2022, 19:53 IST
ನಗರದಲ್ಲಿ ಕರ್ನಾಟಕ ಧಾರ್ಮಿಕ ಸೌಹಾರ್ದ ವೇದಿಕೆ ವತಿಯಿಂದ ಸೋಮವಾರ ನಡೆದ ದುಂಡುಮೇಜಿನ ಸಭೆಯಲ್ಲಿ ದೆಹಲಿ ಧಾರ್ಮಿಕ್‌ ಜನ್‌ ಮೋರ್ಚದ ಸಂಚಾಲಕ ಡಾ.ಮಹಮ್ಮದ್‌ ಸಲೀಂ ಮಾತನಾಡಿದರು. ಮಹಮ್ಮದ್ ಕುಂಞಿ, ಮೌಲಾನಾ ಇಫ್ತಿಕಾರ್ ಖಾಸಿಂ ಮೊದಲಾದವರು ಹಾಜರಿದ್ದರು
ನಗರದಲ್ಲಿ ಕರ್ನಾಟಕ ಧಾರ್ಮಿಕ ಸೌಹಾರ್ದ ವೇದಿಕೆ ವತಿಯಿಂದ ಸೋಮವಾರ ನಡೆದ ದುಂಡುಮೇಜಿನ ಸಭೆಯಲ್ಲಿ ದೆಹಲಿ ಧಾರ್ಮಿಕ್‌ ಜನ್‌ ಮೋರ್ಚದ ಸಂಚಾಲಕ ಡಾ.ಮಹಮ್ಮದ್‌ ಸಲೀಂ ಮಾತನಾಡಿದರು. ಮಹಮ್ಮದ್ ಕುಂಞಿ, ಮೌಲಾನಾ ಇಫ್ತಿಕಾರ್ ಖಾಸಿಂ ಮೊದಲಾದವರು ಹಾಜರಿದ್ದರು   

ಬೆಂಗಳೂರು: ‘ಧರ್ಮಗಳು ಹೃದಯಗಳನ್ನು ಬೆಸೆಯುವ ಪಾಠ ಕಲಿಸುತ್ತದೆ. ಆದರೆ, ಇಂದು ಧರ್ಮಗಳ ನಡುವೆ ಸಂಶಯದ ಗೋಡೆಗಳು ನಿರ್ಮಾಣಗೊಂಡಿವೆ’ ಎಂದು ದೆಹಲಿ ಧಾರ್ಮಿಕ್‌ ಜನ್‌ ಮೋರ್ಚಾದ ಸಂಚಾಲಕ ಡಾ.ಮಹಮ್ಮದ್‌ ಸಲೀಂ ಆತಂಕ ವ್ಯಕ್ತಪಡಿಸಿದರು.

ನಗರದಲ್ಲಿ ಕರ್ನಾಟಕ ಧಾರ್ಮಿಕ ಸೌಹಾರ್ದ ವೇದಿಕೆ ವತಿಯಿಂದ ನಡೆದ ದುಂಡುಮೇಜಿನ ಸಭೆಯಲ್ಲಿ ಅವರು ಮಾತನಾಡಿದರು.

‘ಇದು ಧರ್ಮ ಪ್ರಧಾನ ದೇಶವಾಗಿದೆ. ಇಲ್ಲಿರುವಷ್ಟು ಧರ್ಮಗಳು ಜಗತ್ತಿನ ಬೇರೆ ಯಾವ ದೇಶದಲ್ಲೂ ಇಲ್ಲ. ಎಲ್ಲ ಧರ್ಮಗಳನ್ನೂ ಸಮಾನವಾಗಿ ಕಾಣಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಕೆಲವು ಶಕ್ತಿಗಳು ಧರ್ಮದ ವೇಷವನ್ನು ಧರಿಸಿಕೊಂಡು ಅಧರ್ಮವನ್ನು ಪ್ರಚಾರ ಮಾಡುತ್ತಿರುವುದು ದುರಂತ ಎಂದು ಹೇಳಿದರು.

ವಿವಿಧ ಧರ್ಮಗಳ ಧಾರ್ಮಿಕ ಮುಖಂಡರ ನಡುವೆ ಉತ್ತಮ ವಾತಾವರಣ ಬೆಳೆಯಬೇಕಾಗಿರುವುದು ಈ ಕಾಲದ ಬೇಡಿಕೆ ಆಗಿದೆ ಎಂದು ನುಡಿದರು.

‘ಜನರ ನಡುವೆ ಘರ್ಷಣೆಗೆ ಕಾರಣ ಧರ್ಮವಲ್ಲ. ಧರ್ಮಗಳು ಹೃದಯಗಳನ್ನು ಬೆಸೆಯುವ ಪಾಠ ಕಲಿಸುತ್ತದೆ. ನಮ್ಮ ಅಭಿಪ್ರಾಯ, ಆಚರಣೆಗಳು ಭಿನ್ನ ಆಗಿರಬಹುದು. ಆದರೆ, ಸೌಹಾರ್ದ ವಾತಾವರಣ ನಿರ್ಮಾಣ ಆಗಬೇಕು. ಪರಸ್ಪರ ಗೌರವದ ಭಾವನೆ ಮೂಡಬೇಕು’ ಎಂದು ಪ್ರತಿಪಾದಿಸಿದರು.

ರಾಜಕಾರಣಕ್ಕಾಗಿ ಧರ್ಮದ ಬಳಕೆಯನ್ನು ತಡೆಯಬೇಕಾದ ಅಗತ್ಯ ಇದೆ. ಎಲ್ಲ ಮನುಷ್ಯರನ್ನೂ ಸಮಾನರಾಗಿ ಕಾಣಬೇಕಾಗಿದೆ ಎಂದು ಹೇಳಿದರು.

ಕರ್ನಾಟಕ ಧಾರ್ಮಿಕ ಸೌಹಾರ್ದ ವೇದಿಕೆಯ ಸಂಚಾಲಕ ಮುಹಮ್ಮದ್ ಕುಂಞಿ ಪ್ರಾಸ್ತಾವಿಕ ಮಾತನಾಡಿ, ‘ರಾಜ್ಯ ಹಾಗೂ ರಾಷ್ಟ್ರದಲ್ಲಿ ಮನಸ್ಸು ಕದಡಿದ ವಾತಾವರಣ ಇದೆ. ಸೌಹಾರ್ದ ನೆಲೆಸುವುದು ಅಗತ್ಯವಾಗಿದೆ’ ಎಂದರು

ಆರ್ಯ ಸಮಾಜದ ವನಪ್ರಸ್ಥಿ ಸ್ವಾಮೀಜಿ, ಸ್ವಾಮಿ ದಿವ್ಯ ಜ್ಞಾನಾನಂದ, ಸಿಖ್ ಧರ್ಮಗುರು ಜಸ್ಬೀರ್ ಸಿಂಗ್, ಮೌಲಾನಾ ಇಫ್ತಿಕಾರ್ ಖಾಸಿಂ, ವಹೀದುದ್ದೀನ್ ಖಾನ್ ಉಮರಿ, ಮಹಮ್ಮದ್ ಸಾದ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.