ಬೆಂಗಳೂರು:ಶ್ರಮ ವಹಿಸಿದವರಿಗೆ ಮಾತ್ರ ಅನ್ನದ ಹಕ್ಕು ಮತ್ತು ಅನ್ನಕ್ಕಾಗಿ ಶ್ರಮ ಎಂಬ ವಾದಗಳ ನಡುವೆ ಎಲ್ಲರಿಗೂ ಶ್ರಮ, ಆಹಾರ ಹಾಗೂ ಜೀವಿಸುವ ಹಕ್ಕು ಸಮಾನವಾಗಿವೆ ಎಂದು ಪಂಡಿತ್ ದೀನದಯಾಳ್ ಉಪಾಧ್ಯಾಯರು ಪ್ರತಿಪಾದಿಸಿದ್ದರು ಎಂದುರಾಜ್ಯಸಭೆಯ ಬಿಜೆಪಿ ಸದಸ್ಯ ಸುಧಾಂಶು ತ್ರಿವೇದಿ ಹೇಳಿದರು.
ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜನ್ಮದಿನೋತ್ಸವದ ಅಂಗವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಜಯನಗರ ಘಟಕದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉಪಾಧ್ಯಾಯರು ದೇಶಕ್ಕೆ ಹೊಸತನ್ನು ಕೊಡುಗೆಯಾಗಿ ನೀಡದಿದ್ದರೂ ಇರುವ ನೈಜ ವಿಚಾರಗಳನ್ನೇ ಮನಮುಟ್ಟುವಂತೆ ತಿಳಿಸಿದ್ದಾರೆ' ಎಂದರು.
'ಕಮ್ಯುನಿಸ್ಟ್ ಹಾಗೂ ಬಂಡವಾಳಶಾಹಿ ಸರ್ಕಾರಗಳ ನಡುವೆ ಒಂದೇ ವಿಚಾರದಲ್ಲಿ ವ್ಯತ್ಯಾಸಗಳಿವೆ. ಜನರಿಗೆ ರೊಟ್ಟಿ ನೀಡುತ್ತೇವೆ. ಆದರೆ, ಅವರ ಏಳಿಗೆಗೆ ಅವಕಾಶ ನೀಡುವುದಿಲ್ಲ' ಎಂದು ಕಮ್ಯುನಿಸ್ಟ್ ಸರ್ಕಾರ ಹೇಳಿದರೆ, ಜನರ ಏಳಿಗೆಗೆ ಅವಕಾಶ ನೀಡುತ್ತೇವೆ. ಆದರೆ, ಅವರ ಹಸಿವು ನೀಗಿಸುವ ರೊಟ್ಟಿ ಸಿಗುವುದು ಅನುಮಾನ ಎನ್ನುವುದು ಬಂಡವಾಳಶಾಹಿ ಸರ್ಕಾರದ ನಿಲುವು' ಎಂದು ಅವರು ಹೇಳಿದರು.
'ನಾನೇ ಬಲಶಾಲಿಯಾಗಿರಬೇಕು. ಇದಕ್ಕಾಗಿ ಇತರರನ್ನು ನಾಶ ಮಾಡಲು ಸಿದ್ಧ ಎಂದು ರಾಷ್ಟ್ರಗಳ ನಡುವೆ ಇರುವ ಮನೋಭಾವವೇ ಸಮಾಜದ ವಿವಿಧ ಹಂತಗಳಲ್ಲಿನ ಜನರಲ್ಲಿದೆ. ಇದು ಕುಟುಂಬದ ಮಟ್ಟದಲ್ಲೂ ಇದ್ದು,ನಾನು ಮತ್ತು ನನ್ನದು ಎಂಬ ಭಾವನೆ ಸದಸ್ಯರ ಒಡಕುಗಳಿಗೆ ಕಾರಣವಾಗುತ್ತಿವೆ' ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.