ADVERTISEMENT

ಅತಿಕ್ರಮಣ ವಿರುದ್ಧ ಕ್ರಮಕ್ಕೆ ನಿರ್ಣಯ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2011, 5:55 IST
Last Updated 22 ಫೆಬ್ರುವರಿ 2011, 5:55 IST

ಸೊರಬ: ಪಟ್ಟಣದ ಸ.ನಂ. 113ರಲ್ಲಿ ವಿವಿಧ ಸಂಘ-ಸಂಸ್ಥೆ ಕಟ್ಟಡಗಳಿಗಾಗಿ ಕಾಯ್ದಿರಿಸಿರುವ ಜಾಗವನ್ನು ಸಾರ್ವಜನಿಕರು ಅತಿಕ್ರಮಿಸುತ್ತಿದ್ದು, ಈ ಕುರಿತು ಶೀಘ್ರ ಕಾನೂನು ಕ್ರಮ ಜರುಗಿಸಬೇಕು ಎಂಬ ತೀರ್ಮಾನವನ್ನು ಸೋಮವಾರ ನಡೆದ ಪ.ಪಂ. ತುರ್ತುಸಭೆಯಲ್ಲಿ ತೆಗೆದುಕೊಳ್ಳಲಾಯಿತು.ಪಟ್ಟಣದ ಸರ್ವತೋಮುಖ ಅಭಿವೃದ್ಧಿಯ ದೂರದೃಷ್ಟಿ ಇಟ್ಟುಕೊಂಡು, ವಿವಿಧ ಸರ್ಕಾರಿ ಕಚೇರಿ, ಕಾಲೇಜು, ಕ್ರೀಡಾಂಗಣ ಹಾಗೂ ವಿವಿಧ ಸಂಘ-ಸಂಸ್ಥೆಗಳಿಗಾಗಿ ನಿವೇಶನ ಕಾಯ್ದಿರಿಸಲಾಗಿದೆ ಎಂದು ತಿಳಿಸಿದ ಸದಸ್ಯರು, ಈಚೆಗೆ ಕೆಲವರು ಏಕಾಏಕಿ ಜಾಗವನ್ನು ಅತಿಕ್ರಮಿಸಿಕೊಂಡಿದ್ದಾರೆ ಎಂದು ಸಭೆಯ ಗಮನಕ್ಕೆ ತಂದರು.

ಕಾಯ್ದಿರಿಸಿದ ಜಾಗಕ್ಕೆ ಯಾವುದೇ ಕಾರಣಕ್ಕೂ ಅತಿಕ್ರಮಣ ಸಲ್ಲದು ಎಂದು ಅಭಿಪ್ರಾಯಪಟ್ಟ ಸಭೆಯಲ್ಲಿ, ಕೂಡಲೇ ಸ್ಥಳಕ್ಕೆ ತೆರಳಿ, ಜಾಗವನ್ನು ತೆರವುಗೊಳಿಸಿ, ಸೂಕ್ತ ಬೇಲಿ ನಿರ್ಮಿಸಿ ರಕ್ಷಿಸಬೇಕು. ರಕ್ಷಿತ ಪ್ರದೇಶ ಎಂದು ಫಲಕ ಅಳವಡಿಸಬೇಕು ಎಂದು ತೀರ್ಮಾನಿಸಿತು.ಪ.ಪಂ. ಖಾತೆಯಲ್ಲಿ ಜಾಗ ನೋಂದಣಿ ಆಗಿರುವವರ ಪಟ್ಟಿ ಪರಿಶೀಲಿಸಬೇಕು.ಪಂಚಾಯ್ತಿ ಗಮನಕ್ಕೆ ತರದೇ ಯಾರೂ ಪಂಚಾಯ್ತಿ ಹಾಗೂ ಕಂದಾಯ ಇಲಾಖೆ ವ್ಯಾಪ್ತಿಯ ಜಾಗವನ್ನು ವಶಪಡಿಸಿಕೊಳಳ್ಳದಂತೆ ನಿರ್ಬಂಧ ಹೇರಬೇಕು ಎಂದು ನಿರ್ಧರಿಸಲಾಯಿತು.

ವಿಜಯಾ ಮಹಾಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಪ್ರಶಾಂತ್‌ಮೇಸ್ತ್ರಿ, ಮುಖ್ಯಾಧಿಕಾರಿ ನರಸಿಂಹಮೂರ್ತಿ, ಸದಸ್ಯರಾದ ಮಂಚಿ ಸೋಮಪ್ಪ, ಸಮೀವುಲ್ಲಾ, ಗೌರಮ್ಮ ಭಂಡಾರಿ, ಪದ್ಮಾವತಮ್ಮ, ಮಹೇಶ್‌ಗೌಳಿ, ಬೀಬೀ ಜುಲೇಖಾ, ಶಾಂತಾ, ಅಣ್ಣಪ್ಪ, ಶಾಸಕರ ಆಪ್ತ ಸಹಾಯಕ ಶಿವಕುಮಾರ್‌ಹಿರೇಮಠ್, ರೋಜಗಾರ್ ಯೋಜನಾಧ್ಯಕ್ಷ ರಮೇಶ್ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.