ADVERTISEMENT

ಅಧ್ಯಕ್ಷೆಯಾಗಿ ಉಣ್ಣಾಮಲೈ ದೇಸಿಂಗ್‌ ಆಯ್ಕೆ

ಬಹುಮತವಿದ್ದರೂ ಕಾಂಗ್ರೆಸ್-–ಜೆಡಿಎಸ್ ಮೈತ್ರಿಗೆ ಸಿಗದ ಅಧಿಕಾರ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 9:22 IST
Last Updated 17 ಸೆಪ್ಟೆಂಬರ್ 2013, 9:22 IST

ಶಿವಮೊಗ್ಗ:  ಶಿವಮೊಗ್ಗ ತಾಲ್ಲೂಕು ಪಂಚಾಯ್ತಿ ನೂತನ ಅಧ್ಯಕ್ಷೆಯಾಗಿ ಹಸೂಡಿ ಕ್ಷೇತ್ರದ ಬಿಜೆಪಿ ಸದಸ್ಯೆ ಉಣ್ಣಾಮಲೈ ದೇಸಿಂಗ್‌ ಆಯ್ಕೆ ಆಗಿದ್ದಾರೆ.   ತಾಲ್ಲೂಕು ಪಂಚಾಯ್ತಿಯ ಅಧ್ಯಕ್ಷೆ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದು, ಸೋಮವಾರ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಉಣ್ಣಾಮಲೈ ನಾಮಪತ್ರ ಸಲ್ಲಿಸಿದರು.

ಆದರೆ, ಕಾಂಗ್ರೆಸ್ ಮತ್ತು ಜೆಡಿಎಸ್‌ನಲ್ಲಿ ಪರಿಶಿಷ್ಟಜಾತಿ ಮಹಿಳೆ ಅಭ್ಯರ್ಥಿ ಇರದ ಕಾರಣ ಯಾರೂ ನಾಮಪತ್ರ ಸಲ್ಲಿಸಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಉಣ್ಣಾಮಲೈ ಅಧ್ಯಕ್ಷೆಯಾಗಿ ದೇಸಿಂಗ್‌ ಅವಿರೋಧವಾಗಿ ಆಯ್ಕೆಯಾದರು.

ತಾಲ್ಲೂಕು ಪಂಚಾಯ್ತಿನಲ್ಲಿ 18 ಸದಸ್ಯರ ಬಲಾಬಲವಿದ್ದು ಬಿಜೆಪಿ 8, ಕಾಂಗ್ರೆಸ್ 4 ಹಾಗೂ ಜೆಡಿಎಸ್ ಪಕ್ಷದ 6 ಸದಸ್ಯರಿದ್ದಾರೆ. ಬಹುಮತಕ್ಕೆ 9 ಸದಸ್ಯರ ಬೆಂಬಲ ಅಗತ್ಯವಿದೆ. ಆದರೆ, ಯಾವೊಂದು ಪಕ್ಷಕ್ಕೂ ಸ್ಪಷ್ಟ ಬಹುಮತ ಲಭ್ಯವಾಗದ
ಕಾರಣ ಪ್ರಥಮ ಹಂತದ ಮೀಸಲಾತಿಯ ಅವಧಿಯಲ್ಲಿ ಕಾಂಗ್ರೆಸ್–-ಜೆಡಿಎಸ್ ಪಕ್ಷಗಳು
ಮೈತ್ರಿ ಮಾಡಿಕೊಂಡು ಆಡಳಿತ ಚುಕ್ಕಾಣಿ ಹಿಡಿದಿದ್ದವು.

  ಎರಡನೇ ಹಂತಕ್ಕೆ ಸರ್ಕಾರ ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲು ನಿಗದಿ ಮಾಡಿತ್ತು. ಆದರೆ, ಈ ವರ್ಗಕ್ಕೆ ಸೇರಿದ ಸದಸ್ಯೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದಲ್ಲಿ ಇರದ ಕಾರಣ ಬಹುಮತದ ಕೊರತೆಯ ನಡುವೆಯೂ ಬಿಜೆಪಿ  ಅಧ್ಯಕ್ಷ ಸ್ಥಾನ ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

ದೇವಿಬಾಯಿ ಧರ್ಮನಾಯ್ಕ ಅವಿರೋಧವಾಗಿ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದರು. ಇತ್ತೀಚೆಗೆ ಪಕ್ಷದ ಮುಖಂಡರ ಸೂಚನೆಯಂತೆ ಅವರು ಅಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT