ಕಾರ್ಗಲ್: ಪಟ್ಟಣದಲ್ಲಿ ಪ್ರತಿ ಭಾನುವಾರ ನಡೆಯುವ ಕೃಷಿ ಉತ್ಪನ್ನ ವಸ್ತುಗಳ ಮಾರಾಟದ ಮಳಿಗೆಗಳು ಭಾರಂಗಿ ಹೋಬಳಿ ವ್ಯಾಪ್ತಿಯ ಇಡುವಾಣಿ, ಕಾರ್ಗಲ್, ಜೋಗ, ಲಿಂಗನಮಕ್ಕಿ, ಅರಲಗೋಡು, ಕೋಗಾರ್, ಮಾವಿನಗುಂಡಿ, ಗೇರುಸೊಪ್ಪ ನಾಗರಿಕರ ಪಾಲಿಗೆ ತಲಾತಲಾಂತರಗಳಿಂದ ಸಾಗಿ ಬಂದ ಸಂತೆಯ ಹಾದಿ ಆಗಿದೆ.
ಇಂದು ಸುಮಾರುರೂ32 ಲಕ್ಷ ಯೋಜನೆಯ ವೆಚ್ಚದಲ್ಲಿ ನಿರ್ಮಾಣವಾಗಿರುವ ಇಲ್ಲಿನ ಸಂತೆ ಮಾರುಕಟ್ಟೆ ಮಳಿಗೆಗಳು ಹಲವಾರು ಅವ್ಯವಸ್ಥೆಯ ಆಗರಗಳಿಂದ ಕೂಡಿದ್ದು, ಸಂಬಂಧಪಟ್ಟ ಪಟ್ಟಣ ಪಂಚಾಯ್ತಿ ಆಡಳಿತ ವ್ಯವಸ್ಥೆ ಇತ್ತ ಗಮನಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಮಹಾತ್ಮಗಾಂಧಿ ವಿದ್ಯುದಾಗರ ನಿರ್ಮಾಣ ಕಾಲದಲ್ಲಿ ದೇಶದ ಮೂಲೆ ಮೂಲೆಗಳಿಂದ ಬಂದ ಕಾರ್ಮಿಕ ವರ್ಗದ ಅನುಕೂಲಕ್ಕಾಗಿ ಸ್ವಾತಂತ್ರ್ಯ ಪೂರ್ವದಲ್ಲಿಯೇ ಇಲ್ಲಿನ ಕೃಷಿಸಂತೆ ಆರಂಭವಾಗಿತ್ತು ಎನ್ನುವುದು ಇದರ ವೈಶಿಷ್ಟ್ಯ.
ಜೋಗದ 2ನೇ ಮೈಲಿಕಲ್ಲಿನ ಸಮೀಪ ಆರಂಭವಾದ ಹಂಗಾಮಿ ಸಂತೆ ಮಳಿಗೆಗಳು ನಂತರದ ದಿನಗಳಲ್ಲಿ ಕಾರ್ಗಲ್ ಮೀನು ಮಾರುಕಟ್ಟೆ ಸಮೀಪ ಮತ್ತು ಮುಖ್ಯ ಬಜಾರ್ನಲ್ಲಿ ನಡೆಯುತ್ತಿತ್ತು. ಸಂಚಾರ ದಟ್ಟಣೆಯ ಕಾರಣ ವಾಹನನಿಲ್ದಾಣದ ಆವರಣ, ಹಳ್ಳಿಸೊಸೈಟಿ ಆವರಣ ಮುಂದುವರಿದು ಇಲ್ಲಿನ ಶಾಲಾ ಮೈದಾನದಲ್ಲಿ ನಡೆದು ಬಂದಿತ್ತು.
ಈ ಬಗ್ಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಸೀದಿ ರಸ್ತೆಯಲ್ಲಿರೂ32 ಲಕ್ಷ ವೆಚ್ಚದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಯ ಸಹಯೋಗದೊಂದಿಗೆ ನೂತನ ಮಾರುಕಟ್ಟೆ ನಿರ್ಮಾಣವಾಗಿದೆ.
ಆದರೆ, ಮಾರುಕಟ್ಟೆಗೆ ಅಗತ್ಯವಾದ ಕುಡಿಯುವ ನೀರಿನ ವ್ಯವಸ್ಥೆ, ವಾಹನಗಳ ಪಾರ್ಕಿಂಗ್ ಸೌಕರ್ಯ, ಅಗತ್ಯವಾದ ಶೌಚಾಲಯ ವ್ಯವಸ್ಥೆಗಳು ಇಲ್ಲಿ ಇಲ್ಲವಾಗಿದೆ. ಸಂತೆಯ ದಿನದಂದು ಮಾರುಕಟ್ಟೆಯ ಮುಂಭಾಗದಲ್ಲಿರುವ ಮಸೀದಿ ರಸ್ತೆಯ ಇಕ್ಕೆಲಗಳಲ್ಲಿ ಸಣ್ಣ ಪುಟ್ಟ ವ್ಯಾಪಾರಿ ಮಳಿಗೆಗಳು ತೆರೆಯುವುದರಿಂದ ಸಂಚಾರ ವ್ಯವಸ್ಥೆಗೆ ತೀರಾ ಅಡಚಣೆಯನ್ನು ಉಂಟು ಮಾಡುತ್ತಿದೆ.ಈ ಬಗ್ಗೆ ಪಟ್ಟಣ ಪಂಚಾಯ್ತಿ ಸ್ಪಂದಿಸಲಿ ಎಂದು ಆಟೋ ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ವಿದ್ಯಾಧರ ಜೈನ್ ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.