ADVERTISEMENT

ಇಂದು ರಾಷ್ಟ್ರಮಟ್ಟದ ಕುಸ್ತಿ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2011, 8:50 IST
Last Updated 14 ಫೆಬ್ರುವರಿ 2011, 8:50 IST

ಶಿವಮೊಗ್ಗ: ಸೇವಾಲಾಲ್ ಗ್ರಾಮೀಣ ಕ್ರೀಡಾ ಮತ್ತು ಸಾಂಸ್ಕೃತಿಕ ಅಕಾಡೆಮಿ, ಸೇವಾಲಾಲ್ 272ನೇ ಜಯಂತ್ಯುತ್ಸವ ಮತ್ತು ಮರಿಯಮ್ಮ ಜಾತ್ರೋತ್ಸವ ಅಂಗವಾಗಿ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಯನ್ನು ಫೆ. 14 ಮತ್ತು 15ರಂದು ಹೊನ್ನಾಳಿಯ ಸೂರಗೊಂಡನಹಳ್ಳಿಯಲ್ಲಿ ಹಮ್ಮಿಕೊಂಡಿದೆ.

ಸ್ಪರ್ಧೆಯಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಪೈಲ್ವಾನರು ಪಾಲ್ಗೊಳ್ಳುವರು. ಈಗಾಗಲೇ ದೆಹಲಿ, ಪಂಜಾಬ್, ಹರಿಯಾಣ, ಮಹಾರಾಷ್ಟ್ರ, ಉತ್ತರಪ್ರದೇಶ, ಮಧ್ಯಪ್ರದೇಶಗಳಿಂದ ಪೈಲ್ವಾನರು ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಅಕಾಡೆಮಿ ಸಂಸ್ಥಾಪಕ ಆಯನೂರು ಶಿವಾನಾಯಕ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕುಸ್ತಿ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ವಿವಿಧ ಬಿರುದು ಹಾಗೂ ನಗದು ಬಹುಮಾನಗಳನ್ನು ನೀಡಲಾಗುವುದು. ಈ ಬಾರಿ ಮಹಿಳೆಯರಿಗೆ ವಿಶೇಷವಾಗಿ ಕುಸ್ತಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಅದಕ್ಕೆ ರಾಜ್ಯ ಬಂಜಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವರಾಜ್ ನಾಯ್ಕ, ಸಚಿವ ರೇಣುಕಾಚಾರ್ಯ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ. ಶ್ರೀಕಾಂತ್, ಮುಖಂಡರಾದ ಹೂವಾನಾಯ್ಕ, ಬೊಜ್ಯನಾಯ್ಕ, ಡಾ.ಬುದನಾಯಕ್ ಮತ್ತಿತತರು ಪೋಷಕರಾಗಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ಗೌರವಾಧ್ಯಕ್ಷ ಪೈಲ್ವಾನ್ ಸುರೇಶ್ ನಾಯಕ್, ಪ್ರಧಾನ ಕಾರ್ಯದರ್ಶಿ ಡಾ.ಸಿ.ಬಿ. ಬುದನಾಯಕ್,  ಡಾ.ರವೀಂದ್ರನಾಥ್, ಎಂ. ರಾಜು, ಎ.ಎಸ್. ರಾಧಾಕೃಷ್ಣ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.