ADVERTISEMENT

ಈಡಿಗ ಸಮಾಜ ಒಂದಾದರೆ ದೊಡ್ಡ ಶಕ್ತಿ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2012, 6:04 IST
Last Updated 5 ಡಿಸೆಂಬರ್ 2012, 6:04 IST

ತೀರ್ಥಹಳ್ಳಿ: ರಾಜ್ಯ ರಾಜಕಾರಣದ ದಿಕ್ಕನ್ನು ಬದಲಿಸುವ ಶಕ್ತಿ ಈಡಿಗ ಸಮುದಾಯಕ್ಕಿದೆ. ಆದರೆ, ಈ ಜನಾಂಗ ಸಿದ್ಧಗೊಂಡಿಲ್ಲ. ಇಂದಿನ ಪರಿಸ್ಥಿತಿಯಲ್ಲಿ ಈಡಿಗ ಸಮುದಾಯ ಒಂದಾಗಿದ್ದರೆ ದೊಡ್ಡ ಶಕ್ತಿ ಆಗಬಲ್ಲದು ಎಂದು ರಾಜ್ಯ ಮುಜರಾಯಿ ಖಾತೆ ಸಚಿವ ಕೋಟ ಶ್ರಿನಿವಾಸ ಪೂಜಾರಿ ಅಭಿಪ್ರಾಯಪಟ್ಟರು.

ಆರ್ಯ ಈಡಿಗರ ಸಂಘ ಮಂಗಳವಾರ ತೀರ್ಥಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಬ್ರಹ್ಮ ಸೃಷ್ಟಿಸಿದ ಸಮಾಜದಲ್ಲಿ ಅಸಮಾನತೆ ಇದೆ. ಆದರೆ, ನಾರಾಯಣ ಗುರುಗಳು ಸೃಷ್ಟಿಸಿದ ಸಮಾಜದಲ್ಲಿ ಅಸಮಾನತೆ ಇಲ್ಲ. ನಾರಾಯಣ ಗುರುಗಳ ಸಮಾಜಕ್ಕೆ ಶಕ್ತಿಯಿದ್ದರೂ ಕೀಳರಿಮೆ ಏಕೆ? ಈ ಸಮಾಜಕ್ಕೆ ಸ್ವಾಭಿಮಾನದಿಂದ ತಲೆ ಎತ್ತಿ ನಿಲ್ಲುವ ಶಕ್ತಿ ಬರಬೇಕು ಎಂದರು.

ಶಿಕ್ಷಣದಿಂದ ಸಮಾಜದ ಉನ್ನತಿ ಸಾಧ್ಯ. ಕಡು ಬಡವರ ಮಕ್ಕಳೂ ಕೂಡ ಉನ್ನತ ಶಿಕ್ಷಣ ಪಡೆಯುವಂತಾಗಬೇಕು. ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆರೂ.15 ಸಾವಿರ ಕೋಟಿ ಹಣ ಮೀಸಲಿಟ್ಟ ಹೆಮ್ಮೆ ನಮ್ಮ ಸರ್ಕಾರದ್ದು. ದೇವಸ್ಥಾನಗಳ ಅಭಿವೃದ್ಧಿಗಾಗಿ ಶಿವಮೊಗ್ಗ ಜಿಲ್ಲೆಗೆರೂ.5.57 ಕೋಟಿ ಬಿಡುಗಡೆ ಮಾಡಿರುವುದಾಗಿ ಶೀನಿವಾಸ ಪೂಜಾರಿ ಹೇಳಿದರು.

ಸೋಲೂರು ಮಠದ ಆರ್ಯ ಈಡಿಗ ಮಹಾಸಂಸ್ಥಾನದ ಶ್ರೀ ರೇಣುಕಾನಂದ ಸ್ವಾಮೀಜಿ  ಸಮಾರಂಭ ಉದ್ಘಾಟಿಸಿ ಮಾತನಾಡಿ, ವಿದ್ಯೆ ಇಲ್ಲದಿದ್ದರೆ ಸನ್ಮಾರ್ಗದಲ್ಲಿ ಬದುಕಲು ಸಾಧ್ಯವಿಲ್ಲ. ಮಕ್ಕಳಿಗೆ ವಿದ್ಯೆ ಜತೆಗೆ, ಸಂಸ್ಕೃತಿ ಮಾನವೀಯ ಮೌಲ್ಯಗಳನ್ನು ಕಲಿಸಬೇಕು. ಸಾಕ್ಷರತೆಗೆ ನಾರಾಯಣ ಗುರುಗಳ ದೂರದೃಷ್ಟಿ ಕಾರಣವಾಗಿತ್ತು. ಅದೃಷ್ಟವನ್ನು ನಂಬುವ ಬದಲು ಪರಿಶ್ರಮ ನಂಬುವುದು ಒಳ್ಳೆಯದು ಎಂದು ಹೇಳಿದರು.

ಸಮಾರಂಭದಲ್ಲಿ  ಬೆಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಹಾಗೂ ಈ ಬಾರಿಯ ಕನ್ನಡ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಇ.ವಿ. ಸತ್ಯನಾರಾಯಣ, ದಾನಿಗಳಾದ ಎಚ್.ಆರ್. ಸತೀಶ್, ಸಂಘದ ಅಭಿವೃದ್ಧಿಗೆ ಶ್ರಮಿಸಿದ ಇ.ಎನ್. ಪರಮೇಶ್ವರನಾಯ್ಕ, ಆರ್.ಆರ್. ಶಿವಾನಂದ, ಎಚ್. ಪಾಂಡುರಂಗಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್. ಕೃಷ್ಣಮೂರ್ತಿ, ಜಿಲ್ಲಾ ಪಂಚಾಯ್ತಿ ಸದಸ್ಯ ಟಿ.ಎಲ್. ಸುಂದರೇಶ್, ಕಿರಿಯ ಅಭಿಯಂತರ ಬಿ. ಸುಬ್ಬಣ್ಣ, ಡಾ.ಯೋಗೇಂದ್ರ ಸೇರಿದಂತೆ ಅತಿ ಹೆಚ್ಚು ಅಂಕ ಗಳಿಸಿದ  ತಾಲ್ಲೂಕಿನ ವಿವಿಧ ಜಾತಿ ಸಮುದಾಯಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಂ.ಜಿ. ರಾಮಚಂದ್ರ  ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮಾಜಿ ಜಿ.ಪಂ. ಅಧ್ಯಕ್ಷ ಅಶೋಕಮೂರ್ತಿ, ಮಾಜಿ   ಸದಸ್ಯ ಬಿ.ಪಿ ರಾಮಚಂದ್ರ, ನಿವೃತ್ತ ಡಿವೈಎಸ್‌ಪಿ ಕೆ.ಎಸ್. ಕೃಷ್ಣಮೂರ್ತಿ,  ಪಟ್ಟಣ ಪಂಚಾಯ್ತಿ ಸದಸ್ಯ ಚಂದ್ರಶೇಖರ ಪೂಜಾರಿ ಉಪಸ್ಥಿತರಿದ್ದರು.

ಲತಾ ರಾಜ್‌ಕುಮಾರ್ ಪ್ರಾರ್ಥಿಸಿದರು. ಆರ್.ಆರ್.ಚಂದ್ರಪ್ಪ ಸ್ವಾಗತಿಸಿದರು.
ಇ.ಎಸ್. ವೆಂಕಟಸ್ವಾಮಿ ವಂದಿಸಿದರು. ರಾಜ್‌ಕುಮಾರ್, ವೀರಭದ್ರಪ್ಪ, ಜಾತಪ್ಪ ಕಾರ್ಯಕ್ರಮ ನಿರೂಪಿಸಿದರು.

ಇಂದು ಸನ್ಮಾನ
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಹಾಗೂ ಬೆಂಗಳೂರು ಪ್ರಸ್ ಕ್ಲಬ್ ಅಧ್ಯಕ್ಷ ಇ.ವಿ. ಸತ್ಯನಾರಾಯಣ ಅವರನ್ನು ಡಿ. 5ರಂದು ಇರೇಗೋಡಿನಲ್ಲಿ ಸನ್ಮಾನಿಸಲಾಗುವುದು ಎಂದು ಸನ್ಮಾನ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಗ್ರಾಮಸ್ಥರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಮಾರಂಭದ ಅಧ್ಯಕ್ಷತೆಯನ್ನು ಸನ್ಮಾನ ಸಮಿತಿ ಅಧ್ಯಕ್ಷ ಇ.ಎಲ್. ಯೋಗೇಂದ್ರ ವಹಿಸುವರು. ಅತಿಥಿಗಳಾಗಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಆರ್. ಮದನ್, ನಿವೃತ್ತ ವೈದ್ಯಾಧಿಕಾರಿ ಡಾ.ಇ.ಪಿ. ವಾಸಪ್ಪ, ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಟಿ.ಕೆ. ರಮೇಶ್‌ಶೆಟ್ಟಿ ಹಾಗೂ ಅಡ್ಡಗುಡ್ಡೆ ಮಹೇಶ್‌ನಾಯ್ಕ ಪಾಲ್ಗೊಳ್ಳುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.