ADVERTISEMENT

ಉತ್ಪಾದನೆ ಆರಂಭಕ್ಕೆ ಮುಖಂಡರ ಆಗ್ರಹ

51ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2013, 5:45 IST
Last Updated 3 ಡಿಸೆಂಬರ್ 2013, 5:45 IST

ಭದ್ರಾವತಿ: ‘ಕಳೆದ ಎಂಟು ತಿಂಗಳಿನಿಂದ ವಿಐಎಸ್‌ಎಲ್‌ನಲ್ಲಿ ಸ್ಥಗಿತ ಗೊಂಡಿರುವ ಉತ್ಪಾದನೆ ಕೂಡಲೇ ಆರಂಭಿಸಬೇಕು’ ಎಂದು ಸಿಐಟಿಯು ಮುಖಂಡ ಗುರುಪ್ರಸಾದ್‌ ಬ್ಯಾನರ್ಜಿ ಆಗ್ರಹಿಸಿದರು.

ಇಲ್ಲಿನ ವಿಐಎಸ್‌ಎಲ್‌ ಕಾರ್ಖಾನೆ ಮುಂಭಾಗದಲ್ಲಿ ಕಳೆದ 51 ದಿನದಿಂದ ನಡೆಯುತ್ತಿರುವ ಖಾಸಗೀಕರಣ ಹಾಗೂ ಸಹಭಾಗಿತ್ವ ವಿರುದ್ಧ ಧರಣಿ ಸ್ಥಳದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಉತ್ಪಾದನೆ ಸ್ಥಗಿತ ಮಾಡುವ ಮೂಲಕ ಇಲ್ಲಿನ ಆಡಳಿತ ಗುತ್ತಿಗೆ ಕಾರ್ಮಿಕರನ್ನು ನಿರ್ಲಕ್ಷ್ಯ ಮಾಡುತ್ತಿದೆ. ಇದಕ್ಕೆ ಅವಕಾಶ ನೀಡದ ರೀತಿಯಲ್ಲಿ ಕೂಡಲೇ ಉತ್ಪಾದನೆ ಆರಂಭಿಸಬೇಕು ಎಂಬ ಒತ್ತಾಯವನ್ನು ಅಧಿಕಾರಿಗಳ ಮುಂದೆ ಮಂಡಿಸಿದ್ದೇವೆ ಎಂದು ಘೋಷಿಸಿದರು.

ಸೇಲಂ ಪ್ಲಾಂಟ್ ಕಾರ್ಮಿಕ ಮುಖಂಡ ಹಾಗೂ ಸ್ಟೀಲ್ ವರ್ಕರ್ಸ್ ಫೆಡರೇಷನ್ ಮುಖಂಡ ಪನ್ನೀರಸೆಲ್ವಂ ಮಾತನಾಡಿ, ಸೈಲ್‌ ಮಲತಾಯಿ ಧೋರಣೆ ಅನುಸರಿಸಿರುವುದು ಸರಿಯಲ್ಲ’ ಎಂದು ಕಿಡಿಕಾರಿದರು.

ಈ ತಿಂಗಳ 9 ಮತ್ತು 10ರಂದು ನಮ್ಮ ತಂಡ ಸೈಲ್ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸಲಿದೆ. ಅಲ್ಲಿ ವಿಐಎಸ್‌ಎಲ್‌ ಕಾರ್ಖಾನೆ ಖಾಸಗೀಕರಣ ಹಾಗೂ ಸಹಭಾಗಿತ್ವ ಯೋಜನೆಗೆ ಸೇರ್ಪಡೆ ಮಾಡಬಾರದು ಎಂದು ಒತ್ತಾಯಿಸಿ ಕಾರ್ಖಾನೆ ಉಳಿಸುತ್ತೇವೆ ಎಂದು ಘೋಷಿಸಿದರು.

ಸಭೆಯಲ್ಲಿ ಸಿಐಟಿಯು ಮುಖಂಡರಾದ ಅಲೆಗ್ಸಾಂಡರ್, ಕಾಳಿಸಂಗರ್,  ಇಲ್ಲಿನ ಕಾರ್ಮಿಕ ಸಂಘದ ಪದಾಧಿಕಾರಿಗಳಾದ ಜೆ.ಎನ್‌. ಚಂದ್ರಹಾಸ, ಎಸ್.ಸಿ.ಓ. ಶ್ರೀನಿವಾಸ್, ಹೊನ್ನಯ್ಯ, ಶ್ರೀಧರ್, ರೇವಣ್ಣ, ರಂಗೇಗೌಡ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.