ADVERTISEMENT

ಓದಿನತ್ತ ಗಮನಕೊಡಲು ಕಿವಿಮಾತು

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2012, 8:25 IST
Last Updated 18 ಅಕ್ಟೋಬರ್ 2012, 8:25 IST

ಶಿವಮೊಗ್ಗ: ವಿದ್ಯಾರ್ಥಿಗಳು ಓದಿನತ್ತ ಗಮನ ಕೊಡಬೇಕು ಎಂದು ಚಲನಚಿತ್ರ ನಿರ್ದೇಶಕ ಹಾಗೂ ನಟ ಪ್ರೇಮ್ ಹೇಳಿದರು.ನಗರದ ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಬುಧವಾರ ವಿದ್ಯಾರ್ಥಿ ಸಾಂಸ್ಕೃತಿಕ ಸಂಘದ ಸಮಾರಂಭ ಉದ್ಘಾಟಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಓದಿನತ್ತ ಹೆಚ್ಚಿನ ಗಮನ ನೀಡಿ ನಂತರ ಇತರ ಚಟುವಟಿಕೆಗಳಲ್ಲಿ ತೊಡಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿ, `ಪ್ರೀತಿ ಏಕೆ ಭೂಮಿ ಮೇಲೆ ಇದೆ~ ಚಿತ್ರಗೀತೆ ಹಾಡಿ, ರಂಜಿಸಿದರು.
ವಿಜ್ಞಾನಿ ಮಂಜುನಾಥ್ ಕಿಣಿ ಮಾತನಾಡಿ, ವ್ಯಕ್ತಿ ತಾನು ಪಡೆದ ವಿದ್ಯೆಗೆ ತಕ್ಕ ವರ್ತನೆ ರೂಢಿಸಿಕೊಳ್ಳಬೇಕು; ನಾವು ಮಾಡುವ ಪ್ರತಿ ಕೆಲಸ ನಮ್ಮ ಆತ್ಮಸಾಕ್ಷಿ ಒಪ್ಪುವಂತಿರಬೇಕು ಎಂದರು.

ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಬಹಳ ಪ್ರಾಮುಖ್ಯವಾದುದು; ಉತ್ತಮ ಗುರಿಯನ್ನು ಇಟ್ಟಕೊಂಡು ಆತ್ಮವಿಶ್ವಾಸದಿಂದ ಮುಂದುವರಿದರೆ ಯಾವುದೇ ಕಾರ್ಯವನ್ನು ಸಾಧಿಸಲು ಸಾಧ್ಯವಾಗುತ್ತದೆ. ಸತ್ಯ ಮತ್ತು ಪ್ರಾಮಾಣಿಕತೆಯಿಂದ ವ್ಯಕ್ತಿ ಬದುಕಬೇಕು ಎಂದು ಅವರು ಹೇಳಿದರು. 

 ಭದ್ರಾವತಿ ಆಕಾಶವಾಣಿ ಮುಖ್ಯಸ್ಥ ಡಾ.ಎನ್. ಸುಧೀಂದ್ರ ಮಾತನಾಡಿ, ದೃಶ್ಯ ಮಾಧ್ಯಮಗಳು ಇತರ ಮಾಧ್ಯಮಗಳಿಗಿಂತ ಪ್ರಭಾವಿ ಆಗುತ್ತಿವೆ. ಚಲನಚಿತ್ರಗಳು ವಿದ್ಯಾರ್ಥಿಗಳ ಮೇಲೆ ಬಹುಬೇಗ ಪ್ರಭಾವ ಬೀರುತ್ತಿವೆ. ಚಿತ್ರ ನಿರ್ದೇಶಕರು ಉತ್ತಮವಾದ ಅಂಶಗಳನ್ನು ಚಿತ್ರಗಳಲ್ಲಿ ತೋರಿಸಬೇಕು. ಕಾಲೇಜುಗಳಲ್ಲಿ `ಯುವ ಬಾನುಲಿ ಉತ್ಸವ~ವನ್ನು ಶೀಘ್ರದಲ್ಲಿ ಆಚರಿಸಿ, ಆಕಾಶವಾಣಿಯಲ್ಲಿ ಬಿತ್ತರಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಎಸ್.ಪಿ. ದಿನೇಶ್, ವಿದ್ಯಾರ್ಥಿ ಸಾಂಸ್ಕೃತಿಕ ಸಂಘದ ಸಂಚಾಲಕ ಪ್ರೊ.ಚಂದ್ರಮೌಳಿ, ಪ್ರೇರಣಾ ಫೌಂಡೇಷನ್ ಕಾರ್ಯದರ್ಶಿ ವೆಂಕಟೇಶ್‌ಗೌಡ ಉಪಸ್ಥಿತರಿದ್ದರು. ಪ್ರಾಂಶುಪಾಲ ಡಾ.ಬಿ.ಎಸ್. ಮಹಾದೇವಯ್ಯ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.