ADVERTISEMENT

ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯ ದೊರೆಯಲಿ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2012, 5:25 IST
Last Updated 22 ಮಾರ್ಚ್ 2012, 5:25 IST

ಶಿವಮೊಗ್ಗ: ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಬ್ಯಾಂಕಿನ ಸೌಲಭ್ಯ ದೊರೆಯುವಂತೆ ಆಗಬೇಕು. ಬ್ಯಾಂಕ್‌ಗಳು ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಎಂ.ವಿ. ವೇದಮೂರ್ತಿ ಸಲಹೆ ಮಾಡಿದರು.
ನಗರದ ಪ್ರಗತಿ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾರತ ಸರ್ಕಾರದ ಸ್ವಾಭಿಮಾನ್ ಯೋಜನೆ ಉದ್ಘಾಟಿಸಿ ಅವರು ಮಾತನಾಡಿದರು.
 
ರಾಜ್ಯದ ಸುಮಾರು ಒಟ್ಟು ಆರು ಲಕ್ಷ ಹಳ್ಳಿಗಳಲ್ಲಿ ಕೇವಲ 36 ಸಾವಿರ ಹಳ್ಳಿಗಳಲ್ಲಿ ಮಾತ್ರ ಬ್ಯಾಂಕ್ ಸೌಲಭ್ಯ ದೊರೆತಿದೆ. ಉಳಿದ ಹಳ್ಳಿಗಳಲ್ಲಿಯೂ ಬ್ಯಾಂಕ್ ಸೌಲಭ್ಯ ವಿಸ್ತರಣೆಯಾಗಬೇಕು, ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕಿಂಗ್ ಸೌಲಭ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ಗ್ರಾಮಾಂತರ ಭಾಗದಲ್ಲಿ ಪ್ರಗತಿ ಗ್ರಾಮೀಣ ಬ್ಯಾಂಕ್ ಉತ್ತಮ ಸೇವೆ ನೀಡುತ್ತಿದೆ. ಗ್ರಾಮಸ್ಥರ ಆರ್ಥಿಕ ಪ್ರಗತಿಗೆ ಪೂರಕವಾಗಿ ಕಾರ್ಯನಿರ್ವಹಣೆ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡಲಿ ಎಂದು ಅವರು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಬ್ಯಾಂಕ್ ವ್ಯವಹಾರ ಪ್ರತಿನಿಧಿಗಳಿಗೆ ಬಯೋಮೆಟ್ರಿಕ್ ಕರಯಂತ್ರ, ಸ್ಮಾರ್ಟ್‌ಕಾರ್ಡ್, ಪ್ರಗತಿ ಸುವಿಧಾ ಸಾಲ ಯೋಜನೆಯ ಫಲಾನುಭವಿಗಳಿಗೆ ಕಾರ್ಡ್ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಗತಿ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಪ್ರಬಂಧಕರಾದ ಎಂ.ಎನ್. ಪುರಾಣಿಕ್, ದೇಸಾಯಿ, ಉಪ ಮಹಾಪ್ರಬಂಧಕ ರಾಘವೇಂದ್ರ, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ನ ಪ್ರಬಂಧಕ ಎಲ್. ಸುಬ್ಬರಾವ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.