ಹೊಳೆಹೊನ್ನೂರು: ಕನ್ನಡಕ್ಕೆ ಕನ್ನಡದ್ದೇ ಆದ ಒಂದು ವಿಮರ್ಶೆಯ ದಾರಿ ಬೇಕಾಗಿದೆ. ಅದು ಕಡ ತರುವ ಪರಿಭಾಷೆಯ ಮೂಲಕ ಕಟ್ಟುವಂತದ್ದಲ್ಲ. ಕನ್ನಡ ಬದುಕಿನಲ್ಲಿಯೇ ಅಂತಃಗತಗೊಂಡಿರುವ ಪ್ರಮಾಣುಗಳನ್ನು ಹುಡುಕಿ ಕಟ್ಟುವ ಕೆಲಸವಾಗಬೇಕು ಎಂದು ಲೇಖಕ ಪ್ರೊ.ಎಸ್.ಜಿ. ಸಿದ್ದರಾಮಯ್ಯ ತಿಳಿಸಿದರು.
ಪಟ್ಟಣದ ಸರ್ಕಾರ ಪ್ರಥಮದರ್ಜೆ ಕಾಲೇಜು ಆವರಣದ ಕುವೆಂಪು ಸಭಾಂಗಣದಲ್ಲಿ ಶನಿವಾರ ಹಂದರ ಸಾಹಿತ್ಯ ವೇದಿಕೆ, ಕನ್ನಡ ವಿಭಾಗ, ಯುಜಿಸಿ ನೆರವಿನಿಂದ ಹಮ್ಮಿಕೊಂಡಿದ್ದ ಶತಮಾನದ ವಾಗ್ವಾದಗಳು `ಕನ್ನಡ ವಿಮರ್ಶೆ ಕಟ್ಟುವ ಬಗೆ~ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ವಿಮರ್ಶೆಯ ಹುಡುಕಾಟ ನಿರಂತರವಾಗಿ ನಡೆಸಿಕೊಂಡು ಬಂದಂತಹ ದಿನಗಳಲ್ಲಿ ಕೆಲವು ಎಚ್ಚರದ ಪ್ರಜ್ಞೆಗಳ ಸಾಲೇ ಇದೆ. ಅದು ಸಂಶೋಧನೆಯಲ್ಲಿ ಶಂಭಾ ಜೋಷಿ, ಕುವೆಂಪು, ಡಾ.ಎಲ್. ಬಸವರಾಜು, ಪುಣೇಕರ್ ಹೀಗೆ ಸಾಲು ಬೆಳೆಯುತ್ತದೆ ಎಂದರು.
ಆದರೆ, ಇಂಥ ಧ್ವನಿಗಳನ್ನು ಅವಗ್ನೆಗೈಯುವ ಕೆಲಸ ವ್ಯವಸ್ಥಿತವಾಗಿ ಸಾಂಸ್ಕೃತಿಕ ರಾಜಕಾರಣ, ವರ್ಗ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಅಕ್ರಮಣಶೀಲವಾಗಿದೆ. ಆದ್ದರಿಂದ, ಕನ್ನಡದ ಬದುಕಿನ ಕನ್ನಡ ವಿವೇಕದ ವಿಮರ್ಶೆಯ ದಾರಿಯನ್ನು ಕಂಡು ಕೊಳ್ಳಲಾಗಿದೆ. ಅದೇರೀತಿ ಕಟ್ಟಲಾಗುತ್ತಿದೆ ಎಂದು ತಿಳಿಸಿದರು.
ಸಭೆಯಲ್ಲಿ ಚಿಂತಕ-ರಂಗತಜ್ಞ ಡಾ.ಕೆ.ವೈ. ನಾರಾಯಣ ಸ್ವಾಮಿ `ಕನ್ನಡ ವಿಮರ್ಶೆ: ಲೋಕ ಗ್ರಹಿಕೆಗಳು~ ಅಳ್ವಾವರ ಪದವಿ ಕಾಲೇಜು ಧಾರವಾಡದ ಪ್ರಾಧ್ಯಾಪಕಡಾ.ಎಂ.ಡಿ. ಒಕ್ಕುಂದ `ನಡು ಕನ್ನಡ; ವಿಮರ್ಶೆಯ ಒಳನೋಟಗಳು~ ಶಿವಮೊಗ್ಗ ಸಹ್ಯಾದ್ರಿ ಕಾಲೇಜು ಪ್ರಾಧ್ಯಾಪಕ ಡಾ.ಮೇಟಿ ಮಲ್ಲಿಕಾರ್ಜನ `ಅನ್ಯ ಪ್ರಭಾವಗಳು ಮತ್ತು ಕನ್ನಡ ವಿಮರ್ಶೆ ಕುರಿತು ಮಾತನಾಡಿದರು.
ಸಂವಾದ ಕಾರ್ಯಕ್ರಮದಲ್ಲಿ ಡಾ.ಸಬಿತಾ ಬನ್ನಾಡಿ, ಡಾ.ಶುಭಾ ಮರವಂತೆ, ಡಾ.ಎಚ್.ಟಿ. ಕೃಷ್ಣಮೂರ್ತಿ ಮುಂತಾದವರು ಭಾಗವಹಿಸಿದ್ದರು.
ವಿದ್ಯಾರ್ಥಿಗಳಾದ ಅರ್ಪಿತಾ, ಜೆ.ಆರ್. ಪ್ರೇಮಾ, ಮಂಜುನಾಥ್ ಟಿಪ್ಪಣಿಗಳನ್ನು ಮಂಡಿಸಿದರು.
ಶಿವಮೊಗ್ಗದ ವಿಚಾರವಾದಿ ಚಿಂತಕ ಡಾ. ಶ್ರೀಕಂಠ ಕೂಡಿಗೆ ಸಮಾರೋಪ ಭಾಷಣ ಮಾಡಿದರು.
ಪ್ರಭಾರ ಪ್ರಾಂಶುಪಾಲರಾದ ಡಾ.ಜಯಂತಿ ಅಧ್ಯಕ್ಷತೆವಹಿಸಿದ್ದರು.
ಕಾರ್ಯಕ್ರಮದಲ್ಲಿ ಡಾ.ಕುಂಸಿ ಉಮೇಶ್ ಪ್ರಾಸ್ತಾವಿಕ ಮಾತನಾಡಿದರು. ವಿನಯ್ ಸಂಗಡಿಗರು ಪ್ರಾರ್ಥಿದರು. ಆರ್.ಕೆ. ವಿನಯ್ ಸ್ವಾಗತಿಸಿದರು. ಲೀಲಾವತಿ ವಂದಿಸಿದರು. ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.