ADVERTISEMENT

ಗ್ರಾಮ ಅರಣ್ಯ ಸಮಿತಿ ಬಲಪಡಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2012, 9:20 IST
Last Updated 3 ಫೆಬ್ರುವರಿ 2012, 9:20 IST

ಹೊಸನಗರ:  ಪ್ರಾಣಿ-ಪಕ್ಷಿ ಹಾಗೂ ಸಾಮೂಹಿಕ ಪರಿಸರದ ಹಿತರಕ್ಷಣೆಗಾಗಿ ಫಲ-ಪುಷ್ಪ ಬಿಡುವ ಸಸಿಗಳನ್ನು ಹಸಿರೀಕರಣ ಯೋಜನೆಯಲ್ಲಿ ನೆಡುವಂತೆ ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಸಲಹೆ ನೀಡಿದರು.
 
ಇಲ್ಲಿನ ತಾ.ಪಂ. ಸಭಾಂಗಣದಲ್ಲಿ ಗುರುವಾರ ವಿವಿಧ ಇಲಾಖೆಗಳ ಮುಖ್ಯಸ್ಥರೊಂದಿಗೆ ನಡೆದ ಸಮಾಲೋಚನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಫಲ-ಪುಷ್ಪಗಳಿಂದ ಕೂಡಿದ ಮರಗಳು ಇಳಿಮುಖವಾದ ಕಾರಣ ಜೇನುತಳಿಗಳು ಮಾಯವಾಗುತ್ತಿದೆ. ಇದರ ಪ್ರತಿಕೂಲ ಪರಿಣಾಮ ಕೃಷಿಯ ಮೇಲೆ ಬೀಳುತ್ತಿದೆ ಎಂದರು.

ಸರ್ಕಾರದ ಬಹುತೇಕ ಇಲಾಖೆಗಳ ಯೋಜನೆಗಳು ಕೃಷಿ ಹಾಗೂ ಅರಣ್ಯಕ್ಕೆ ಹೆಚ್ಚು ಒತ್ತು ನೀಡುತ್ತಿವೆ. ಆದರೆ, ಇಲಾಖೆಗಳ ನಡುವಿನ ಸಾಮರಸ್ಯದ ಕೊರತೆಯಿಂದಾಗಿ ಅನುಷ್ಠಾನದ ಪ್ರಮಾಣ ನಿರೀಕ್ಷೆಮಟ್ಟದಲ್ಲಿ ಯಶಸ್ಸು ಕಾಣುತ್ತಿಲ್ಲ ಎಂದು ವಿಷಾದಿಸಿದರು.

ಗ್ರಾಮ ಅರಣ್ಯ ಸಮಿತಿಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಅರಣ್ಯ, ಕೃಷಿ, ತೋಟಗಾರಿಕಾ ಇಲಾಖೆಗಳು ಸೇರಿದಂತೆ ಎಲ್ಲಾ ಇಲಾಖೆಗಳ ಸಹಕಾರ, ಸಮನ್ವಯದಿಂದ ಕೆಲಸ ಮಾಡುವ ಮೂಲಕ ಪಶ್ಚಿಮಘಟ್ಟದ ರಕ್ಷಣೆಗೆ ಮುಂದಾಗಬೇಕು. ಮಲೆನಾಡಿನ ಕೃಷಿಭೂಮಿಯ ಮೇಲೆ ದುಷ್ಪರಿಣಾಮ ಬೀರುವ ಶುಂಠಿ ಕೃಷಿಯ ಸಾಧಕ-ಬಾಧಕ ಕುರಿತು ಸವಿವರವಾದ ವರದಿ ಸಿದ್ಧವಾಗಬೇಕು ಎಂದರು.

ಸಮಾಲೋಚನಾ ಸಭೆಯಲ್ಲಿ ಪಶ್ಚಿಮಘಟ್ಟ ಕಾರ್ಯಪಡೆಯ ನಿರ್ದೇಶಕ ಪ್ರೊ.ಬಿ.ಎಂ. ಕುಮಾರಸ್ವಾಮಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಸುಮಾ ಸುಬ್ರಹ್ಮಣ್ಯ, ಕಾರ್ಯ ನಿರ್ವಾಹಕ ಅಧಿಕಾರಿ ಕೆ.ಎಸ್. ಮಣಿ, ತಹಶೀಲ್ದಾರ್ ಸಾಜಿದ್ ಅಹ್ಮದ್ ಮುಲ್ಲಾ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹುಚ್ಚಯ್ಯ, ವಲಯ ಅರಣ್ಯಾಧಿಕಾರಿ ಪ್ರಕಾಶ್, ಶಿವಕುಮಾರ್ ಹಾಗೂ ತಾಲ್ಲೂಕುಮಟ್ಟದ ಅಧಿಕಾರಿಗಳು ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.