ADVERTISEMENT

ಜನಪರ ಹೋರಾಟ ವೇದಿಕೆ ಕಿಮ್ಮನೆಗೆ ಬೆಂಬಲ: ನೆಂಪೆ ದೇವರಾಜ್‌

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2018, 9:05 IST
Last Updated 31 ಮಾರ್ಚ್ 2018, 9:05 IST
ದೇವರಾಜ್‌
ದೇವರಾಜ್‌   

ತೀರ್ಥಹಳ್ಳಿ: ಮೌಲ್ಯಾಧಾರಿತ ರಾಜಕಾರಣಕ್ಕೆ ಅಪಚಾರ ಎಸಗದಂತೆ ಕಾಪಾಡಿಕೊಂಡು ಬಂದಿರುವ ಸಜ್ಜನ ರಾಜಕಾರಣಿ ಕಿಮ್ಮನೆ ರತ್ನಾಕರ ಅವರನ್ನು ಈ ಬಾರಿಯ ಚುನಾವಣೆಯಲ್ಲಿ ಬೆಂಬಲಿಸುವುದಾಗಿ ಜನಪರ ಹೋರಾಟ ವೇದಿಕೆ ಮುಖಂಡ ನೆಂಪೆ ದೇವರಾಜ್‌ ತಿಳಿಸಿದರು.

‘ಕಡಿದಾಳು ಮಂಜಪ್ಪ, ಶಾಂತವೇರಿ ಗೋಪಾಲಗೌಡ ಅವರ ಆದರ್ಶಗಳನ್ನು ಪಾಲಿಸುತ್ತಿರುವ ಕಿಮ್ಮನೆ ರತ್ನಾಕರ ಅವರು ಅನೇಕ ಅಭಿವೃದ್ಧಿ ಕೆಲಸಗಳನ್ನು ಪಕ್ಷಪಾತ ತೋರದೆ ಕೈಗೊಂಡಿದ್ದಾರೆ. ಅಭಿವೃದ್ಧಿಯ ಕೆಲಸದಲ್ಲಿ ಅವರೆಂದೂ ಜಾತಿ, ಧರ್ಮ ನೋಡಿಲ್ಲ. ಅವರ ಸಾಮಾಜಿಕ ನ್ಯಾಯ ಪರಿಕಲ್ಪನೆಯ ಮೌಲ್ಯಾಧಾರಿತ ರಾಜಕಾರಣಕ್ಕೆ ಬೆಂಬಲವಾಗಿ ನಿಲ್ಲುವುದು ಈಗಿನ ಅತ್ಯಂತ ತುರ್ತು ಅಗತ್ಯಗಳಲ್ಲೊಂದು’ ಎಂದು ನೆಂಪೆ ದೇವರಾಜ್‌ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ತೀರ್ಥಹಳ್ಳಿಯ ಮತದಾರರ ಆಯ್ಕೆಯನ್ನು ರಾಜ್ಯದ ಜನ ಬಹಳ ಸೂಕ್ಷ್ಮವಾಗಿ ಗಮನಿಸುತ್ತ ಬಂದಿದ್ದಾರೆ. ಬುದ್ಧಿವಂತ ಮತದಾರರಿದ್ದ ಈ ಕ್ಷೇತ್ರದಲ್ಲಿ ಕಳೆದ ವಿಧಾನಸಭಾ ಚುನಾವಣೆ ನಂತರ ಇತರ ಎಲ್ಲ ಕ್ಷೇತ್ರಗಳಂತೆ ಅಕ್ರಮ ಹಣ, ಜಾತಿ ಮನಸ್ಥಿತಿ, ಬಾಹುಬಲಕ್ಕೆ ತನ್ನನ್ನು ತೆರೆದುಕೊಳ್ಳುವ ಲಕ್ಷಣಗಳು ಕಂಡು ಬರುತ್ತಿರುವುದು ಆತಂಕಕಾರಿ ಸಂಗತಿ ಎಂದು ಹೇಳಿದರು.

ADVERTISEMENT

ಶಿಕ್ಷಣ ಸಚಿವರಾಗಿ ರಾಜ್ಯದ ಗಮನ ಸೆಳೆದ ಕಿಮ್ಮನೆ, ಭ್ರಷ್ಟಾಚಾರದ ಸೋಂಕನ್ನು ಅಂಟಿಸಿಕೊಳ್ಳದ ಪ್ರಾಮಾಣಿಕ ನಡವಳಿಕೆ ಮೂಲಕ ಜನರಿಗೆ ಹತ್ತಿರವಾಗಿದ್ದಾರೆ. ಅನೇಕ ಜನಪರ ಹೋರಾಟಗಳನ್ನು ನಡೆಸಿದಾಗ ನಾವು ಕಿಮ್ಮನೆ ವಿರುದ್ಧವೇ ಹೋರಾಟ ಹಮ್ಮಿಕೊಂಡಿದ್ದಾಗಲೂ ಹೋರಾಟಗಾರರನ್ನು ಅತ್ಯಂತ ಗೌರವದಿಂದ ಕಂಡ ಉದಾಹರಣೆಗಳಿವೆ. ಹೀಗಾಗಿ ಪ್ರಗತಿಪರರು, ಬುದ್ಧಿಜೀವಿಗಳು, ವಿಚಾರವಂತರು ಕಿಮ್ಮನೆ ಅವರ ಬೆಂಬಲಕ್ಕೆ ನಿಲ್ಲಬೇಕು ಎಂದು ದೇವರಾಜ್‌ ಮನವಿ ಮಾಡಿದರು.

ದಲಿತ ಮುಖಂಡ ಹರಡವಳ್ಳಿ ಮಂಜುನಾಥ್‌ ಮಾತನಾಡಿ, ತಾಲ್ಲೂಕಿನಲ್ಲಿ ದಲಿತರ ರಕ್ಷಣೆಗೆ ನಿಂತ ಕಿಮ್ಮನೆ ರತ್ನಾಕರ ಅವರನ್ನು ಬೆಂಬಲಿಸುವ ಮೂಲಕ ಪ್ರಜಾಪ್ರಭುತ್ವದ ರಕ್ಷಣೆಗೆ ಮುಂದಾಗಬೇಕು ಎಂದರು.

ನಿಶ್ಚಲ್‌ ಜಾದೂಗಾರ್‌ ಮಾತನಾಡಿ, ‘ಕಳೆದ ಚುನಾವಣೆಯಲ್ಲಿ ಆಮ್‌ ಆದ್ಮಿ ಪಾರ್ಟಿಯಿಂದ ಸ್ಪರ್ಧಿಸಿ 2 ಸಾವಿರಕ್ಕೂ ಹೆಚ್ಚು ಮತಗಳನ್ನು ಗಳಿಸಿದ್ದೆ. ಈ ಚುನಾವಣೆಯಲ್ಲಿ ಕಿಮ್ಮನೆ ರತ್ನಾಕರ ಅವರನ್ನು ಬೆಂಬಲಿಸಲು ನಿರ್ಧರಿಸಿದ್ದೇನೆ’ ಎಂದು ಹೇಳಿದರು.

ದಲಿತ ಮುಖಂಡ ನವೀನ್‌ ಕುಮಾರ್‌, ಸಂಘಟನೆಯ ಪ್ರಮುಖರಾದ ಫಾರೂಕ್‌, ಕೊರೋಡಿ ಕೃಷ್ಣಪ್ಪ, ಹೊನ್ನಾನಿ ದೇವರಾಜ್‌, ದೇವಂಗಿ ಸುಭಾಷ್‌, ರಮೆಶ್‌ ಪೂಜಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.