ADVERTISEMENT

ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷೆ ಶುಭಾ ಕೃಷ್ಣಮೂರ್ತಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2012, 5:45 IST
Last Updated 10 ಅಕ್ಟೋಬರ್ 2012, 5:45 IST

ಹೊಸನಗರ: ಶರಾವತಿ ಹಿನ್ನೀರಿನ ಸಂತ್ರಸ್ತರ ಹಲವು ದಶಕಗಳ ಕನಸರೂು 124 ಲಕ್ಷ ವೆಚ್ಚದ ಹೆಬ್ಬಿಗೆ ತೂಗು ಸೇತುವೆ ನಿರ್ಮಿಸಿರುವುದು ತಮ್ಮ ಅಧಿಕಾರಾವಧಿಯಲ್ಲಿನ ವಿಶಿಷ್ಟ ಮೈಲಿಗಲ್ಲು ಎಂದು ಶಿವಮೊಗ್ಗ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷೆ ಶುಭಾ ಕೃಷ್ಣಮೂರ್ತಿ ಹೇಳಿದರು.

ಮಂಗಳವಾರ ತಾಲ್ಲೂಕು ಬಿಜೆಪಿ ಘಟಕ `ಸುದ್ದಿಮನೆ~ಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಂದು ತೂಗುಸೇತುವೆ ನಿರ್ಮಾಣದಿಂದ ಸುಮಾರು 20 ಕಿ.ಮೀ. ಸುತ್ತು ಬಳಸಿ ಪ್ರಯಾಣಿಸುವುದನ್ನು ತಪ್ಪಿಸಿದ ಸಂತೃಪ್ತಿ ತಮಗೆ ಇದೆ ಎಂದರು.

ಜನರ, ಪಕ್ಷದ ಮುಖಂಡರ ಆಶೀರ್ವಾದದಿಂದ ತಾವು ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ತಮ್ಮ 20 ತಿಂಗಳ ಅಧಿಕಾರ ಅವಧಿಯಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲದೇ ಪ್ರಾಮಾಣಿಕವಾಗಿ ಅಭಿವೃದ್ಧಿ ಕಾಮಗಾರಿಗೆ ಸಹಕರಿಸಿದ ಪಕ್ಷದ ಹಿರಿ-ಕಿರಿ ಮುಖಂಡರು, ಕಾರ್ಯಕರ್ತರು ಹಾಗೂ ಅಧಿಕಾರಿಗಳನ್ನು ಅಭಿನಂದಿಸಿದರು.

 ಕುಡಿಯುವ ನೀರಿಗೆ ಹೆಚ್ಚಿಗೆ ಆದ್ಯತೆ ನೀಡಿದ್ದು, 2011-12ನೇ ಸಾಲಿನಲ್ಲಿ ವಿವಿಧ ಯೋಜನೆಯ ಅಡಿಯಲ್ಲಿ ಸುಮಾರು ರೂ 4.92 ಕೋಟಿ ಹಣ ಅದಕ್ಕಾಗಿ ವೆಚ್ಚ ಮಾಡಲಾಗಿದೆ. ಈ ಯೋಜನೆಯ ಅಡಿಯಲ್ಲಿ ನಿಟ್ಟೂರು ಹಾಗೂ ಮತ್ತಿಮನೆ ಕುಡಿಯುವ ನೀರಿಗೆ ಸುಮಾರು ರೂ 45 ಲಕ್ಷ ಅನುದಾನ ನೀಡಲಾಗಿದೆ ಎಂದರು.
 ನಕ್ಸಲ್ ಪ್ರದೇಶವಾದ ಸುಳಗೋಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕುಂಬ್ರಿಬೈಲ್ ರಸ್ತೆ ಮತ್ತು ಸೇತುವೆ ನಿರ್ಮಾಣಕ್ಕೆ ರೂ 52 ಲಕ್ಷ ಹಾಗೂ ನಕ್ಸಲ್‌ಪೀಡಿತ ಹೊಸನಗರ ಮತ್ತು ತೀರ್ಥಹಳ್ಳಿ ತಾಲ್ಲೂಕಿನಲ್ಲಿ 358 ಯುವಕ-ಯುವತಿಯರಿಗೆ ವಿವಿಧ ಕೌಶಲವೃದ್ಧಿ ತರಬೇತಿಗೆ ನೀಡಲಾಗಿದೆ ಎಂದರು.

ಹೆಬ್ಬುರಳಿ-ಮತ್ತಿಮನೆ ರಸ್ತೆಗೆ ರೂ 90 ಲಕ್ಷ, ಅರಮನೆಕೊಪ್ಪ-ಬಿಲ್ಲಸಾಗರ ರಸ್ತೆಗೆ ರೂ 50 ಲಕ್ಷ. ತಾಲ್ಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗೆ ಮಲೆನಾಡು ಅಭಿವೃದ್ಧಿ ಮಂಡಳಿಯಿಂದ ರೂ 2 ಕೋಟಿ ಹಾಗೂ ಸಂಸದರ ನಿಧಿಯಿಂದ ರೂ 1 ಕೋಟಿ ಅನುದಾನ ಕೊಡಿಸುವ ಪ್ರಯತ್ನ ಮಾಡಿದ್ದೇನೆ ಎಂದರು.
ಬಿಜೆಪಿ  ಮುಖಂಡರಾದ ನಿವಣೆ ಸೀತಾರಾಮ್ ಭಟ್, ಉಮೇಶ್ ಕಂಚುಗಾರ್, ವಾಲೆಮನೆ ಶಿವಕುಮಾರ್, ಶಶಿಕಲಾ ಅನಂತ್, ಮಲ್ಲಿಕಾರ್ಜುನ್, ಕೆ.ವಿ. ಕೃಷ್ಣಮೂರ್ತಿ ವೇದಿಕೆಯಲ್ಲಿ ಹಾಜರಿದ್ದರು.
ನಿಟ್ಟೂರು ಕೃಷ್ಣಮೂರ್ತಿ ಸ್ವಾಗತಿಸಿದರು. ಹೆಬ್ಬುರಳಿ ರಮಾಕಾಂತ್ ವಂದಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.