ADVERTISEMENT

ನಿವೇಶನ ವಿತರಿಸಲು ಅರ್ಜಿ ಆಹ್ವಾನಿಸಿಲ್ಲ: ಅನಂತಶಾಸ್ತ್ರಿ

​ಪ್ರಜಾವಾಣಿ ವಾರ್ತೆ
Published 22 ಜೂನ್ 2011, 6:00 IST
Last Updated 22 ಜೂನ್ 2011, 6:00 IST

ಶಿವಮೊಗ್ಗ: ನಗರಸಭೆ, ಆಶ್ರಯ ಸೇರಿದಂತೆ ಯಾವುದೇ ನಿವೇಶನಗಳನ್ನು ವಿತರಿಸಲು ಸಾರ್ವಜನಿಕರಿಂದ ಯಾವುದೇ ಅರ್ಜಿ ಆಹ್ವಾನಿಸಿಲ್ಲ ಎಂದು ಆಶ್ರಯ ಸಮಿತಿ ಅಧ್ಯಕ್ಷ ಅನಂತಶಾಸ್ತ್ರಿ ಸ್ಪಷ್ಟಪಡಿಸಿದರು.

ಆಶ್ರಯ ಸಮಿತಿಯಿಂದ ನಗರದ ನಿವೇಶನರಹಿತರಿಗೆ ನಿವೇಶನ ನೀಡುವ ಉದ್ದೇಶದಿಂದ ಸಮೀಪದ ಅಗಸವಳ್ಳಿಯಲ್ಲಿ ಸುಮಾರು 300 ಎಕರೆ ಭೂಮಿ ಭೂಸ್ವಾಧೀನಕ್ಕೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಲ್ಲಿ ಭೂಸ್ವಾಧೀನಪಡಿಸಿಕೊಂಡು ನಿವೇಶನಗಳನ್ನು ರಚಿಸಿದ ನಂತರದಲ್ಲಿ ಅರ್ಹ ಫಲಾನುಭವಿಗಳಿಂದ ಸಾರ್ವತ್ರಿಕವಾಗಿ ಅರ್ಜಿಯನ್ನು ಆಹ್ವಾನಿಸಲಾಗುವುದು. ಈ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಳ್ಳಲು ಇನ್ನೆರಡು ತಿಂಗಳು ಬೇಕು ಎಂದರು.

ಆಶ್ರಯ ಸಮಿತಿ ವತಿಯಿಂದ ವಿತರಿಸುವ ನಿವೇಶನಗಳಿಗೆ ನಿಯಮಾವಳಿಯಲ್ಲಿ ಹಣ ಪಡೆಯುವ ಅಧಿಕಾರ ಇಲ್ಲದಿದ್ದರೂ ವಶಪಡಿಸಿಕೊಳ್ಳುವ ಬಗರ್‌ಹುಕುಂ ಜಮೀನಿಗೆ ಮಾನವೀಯತೆ ಆಧಾರದ ಮೇಲೆ ಪರಿಹಾರ ನೀಡಲು ಅರ್ಜಿದಾರರಿಂದ ಐದು ಸಾವಿರ ರೂ ವಸೂಲಿ ಮಾಡುವುದು ಅನಿವಾರ್ಯವಾಗಿದೆ ಎಂದು ಅನಂತಶಾಸ್ತ್ರಿ ಸಮರ್ಥಿಸಿಕೊಂಡರು.

ಆಶ್ರಯ ಸಮಿತಿ ಈ ವರ್ಷ ಸುಮಾರು 828 ನಿವೇಶನಗಳನ್ನು ಹಂಚಿಕೆ ಮಾಡಿದೆ. ಅವುಗಳಲ್ಲಿ 627 ನಿವೇಶನಗಳನ್ನು ಅಡಿಕೆ ಮಂಡಿಯ ಗುಮಾಸ್ತರು ಮತ್ತು ಹಮಾಲರಿಗೆ ಹಾಗೂ 221 ನಿವೇಶನಗಳನ್ನು ಸಾರ್ವಜನಿಕರಿಗೆ ಹಂಚಿಕೆ ಮಾಡಲಾಗಿದೆ ಎಂದರು.

ಹಾಗೆಯೇ, ವಿಶ್ವೇಶ್ವರಯ್ಯ ವಸತಿ ಯೋಜನೆಯಡಿಯಲ್ಲಿ ನಗರದ ಕೈಗಾರಿಕೆಗಳಲ್ಲಿ ಕಾರ್ಯನಿರ್ವಹಿಸುವ ಸುಮಾರು 5 ಸಾವಿರ ಕಾರ್ಮಿಕರಿಗೆ ಮನೆಗಳನ್ನು ನಿರ್ಮಿಸಿಕೊಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ನಗರಸಭಾಧ್ಯಕ್ಷ ಕೆ.ಎಸ್. ಗಂಗಾಧರಪ್ಪ, ಸದಸ್ಯರಾದ ರಾಜಣ್ಣ, ಗನ್ನಿ ಶಂಕರ್, ಆಯುಕ್ತ ರಮೇಶ್, ಆಶ್ರಯ ಸಮಿತಿ ಸದಸ್ಯ ಮಹಮದ್ ಖಯೂಂ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.