ADVERTISEMENT

ನೆಮ್ಮದಿಗೆ ಸಾಹಿತ್ಯ ಅಧ್ಯಯನ ಅಗತ್ಯ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2011, 6:40 IST
Last Updated 18 ಮಾರ್ಚ್ 2011, 6:40 IST
ನೆಮ್ಮದಿಗೆ ಸಾಹಿತ್ಯ ಅಧ್ಯಯನ ಅಗತ್ಯ
ನೆಮ್ಮದಿಗೆ ಸಾಹಿತ್ಯ ಅಧ್ಯಯನ ಅಗತ್ಯ   

ಭದ್ರಾವತಿ: ‘ಇಂದಿನ ಆಧುನಿಕ ತಂತ್ರಜ್ಞಾನದ ಬದುಕಿನಲ್ಲಿ ನೆಮ್ಮದಿ ಕಾಣಲು ಸಾಹಿತ್ಯ ಅಧ್ಯಯನ ಅಗತ್ಯ’ ಎಂದು ಸಾಗರ ಸಹಕಾರ ಸಂಘಗಳ ಸಹಾಯಕ ನಿಬಂಧಕ ನಾಗೇಶ್ ಎಸ್. ಡೋಂಗ್ರೆ ಹೇಳಿದರು. ಇಲ್ಲಿನ ಹಳೇನಗರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಗುರುವಾರ ಸಾಹಿತ್ಯ ವೇದಿಕೆ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಪರೀಕ್ಷೆಯ ಅಂಕಗಳಿಗೆ ಒತ್ತು ಕೊಟ್ಟು ಓದುವುದು ಸರಿಯಲ್ಲ. ಅದಕ್ಕೆ ಬದಲಾಗಿ ಅದನ್ನು ಆಸ್ವಾದಿಸುವ ಮನೋಭಾವದ ಅಧ್ಯಯನ ಮಾಡಬೇಕು ಎಂದು ಕರೆ ನೀಡಿದರು. ಕಾಲೇಜಿನ ಪ್ರಾಂಶುಪಾಲ ಡಾ.ಎಂ. ಮಾರ್ತಾಂಡಪ್ಪ ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭೆಗಳನ್ನು ಗುರುತಿಸುವ ಭಾಗವಾಗಿ ಆರಂಭವಾದ ಗೋಡೆ ಪತ್ರಿಕೆಗೆ ಎಲ್ಲರ ಸಲಹೆ-ಸೂಚನೆ ದೊರೆಯುತ್ತದೆ ಎಂದು ಆಶಿಸಿದರು.

ಪ್ರಾಸ್ತಾವಿಕ ಮಾತನಾಡಿದ ಪ್ರೊ.ಮಾರಪ್ಪ, ಪ್ರತಿಭೆಗಳ ಅನಾವರಣಕ್ಕೆ ಸಾಹಿತ್ಯ ವೇದಿಕೆ ಸಿದ್ಧವಾಗಿದೆ. ಇದರ ಮೊದಲ ಪ್ರಯತ್ನವಾಗಿ ಇಂದು ‘ಪ್ರೇರಣ’ ಗೋಡೆ ಪತ್ರಿಕೆ ಆರಂಭವಾಗಿದೆ ಎಂದರು.

ಕಾಲೇಜು ಶಿಕ್ಷಣದಲ್ಲಿ ಸ್ವಚ್ಛಂದ ಬದುಕಿಗೆ ಅವಕಾಶ ಇಲ್ಲ. ಆದರೆ, ಮುಂದಿನ ಭವಿಷ್ಯದ ಉತ್ತಮ ಬದುಕಿಗೆ ಇದರ ಅಗತ್ಯವಿದೆ. ವಿದ್ಯಾರ್ಥಿಗಳು ಇದನ್ನರಿತು ತಮ್ಮ ಓದಿನ ಜತೆಗೆ ತಮ್ಮಲ್ಲಿ ಅಡಗಿರುವ ಇನ್ನಿತರೆ ಕ್ರೀಯಾಶೀಲ ವ್ಯಕ್ತಿತ್ವವನ್ನು ಈ ಪತ್ರಿಕೆ ಮೂಲಕ ಹೊರತನ್ನಿ ಎಂದು ನುಡಿದರು.ಪೂರ್ಣಿಮಾ ಪ್ರಾರ್ಥಿಸಿದರು, ಪ್ರೊ.ಚಂದ್ರಮ್ಮ ಸ್ವಾಗತಿಸಿದರು. ಉಷಾದೇವಿ ವಂದಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.