ADVERTISEMENT

ನ್ಯಾಯ ಸಮ್ಮತ ಚುನಾವಣೆಗೆ ಸಹಕರಿಸಿ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2013, 9:50 IST
Last Updated 25 ಏಪ್ರಿಲ್ 2013, 9:50 IST

ಶಿಕಾರಿಪುರ: ಶಾಂತಿಯುತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಚುನಾವಣಾ ಸಿಬ್ಬಂದಿ ಸಹಕಾರ ಮುಖ್ಯ ಎಂದು ತಾಲ್ಲೂಕು ಚುನಾವಣಾಧಿಕಾರಿ ಗೋಪಾಲ್ ಅಭಿಪ್ರಾಯಪಟ್ಟರು.

ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಬುಧವಾರ ಚುನಾವಣಾ ಆಯೋಗ ಚುನಾವಣಾ ಕಾರ್ಯಕ್ಕಾಗಿ ನಿಯೋಜಿಸಿದ ಸಿಬ್ಬಂದಿಗಾಗಿ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಚುನಾವಣೆ ಶಾಂತಿಯುತವಾಗಿ ನಡೆಯುವಂತೆ ನೋಡಿಕೊಳ್ಳುವ ಹೆಚ್ಚು ಜವಬ್ದಾರಿ ಚುನಾವಣಾ ಸಿಬ್ಬಂದಿ ಮೇಲೆ ಇರುತ್ತದೆ. ಹಾಗಾಗಿ, ಚುನಾವಣೆ ಅಧಿಕಾರಿಗಳ ಕರ್ತವ್ಯ ಪ್ರಜ್ಞೆ ಇಲ್ಲಿ ಮುಖ್ಯವಾಗುತ್ತದೆ.

ಸಂಪನ್ಮೂಲ ವ್ಯಕ್ತಿ ಶಿಕ್ಷಕ ರಂಗರಾಜ್ ಚುನಾವಣಾ ಸಿಬ್ಬಂದಿಗೆ ತರಬೇತಿ ಉಪನ್ಯಾಸ ನೀಡಿದರು.ಈ ವೇಳೆ ಕೆಲ ಸಿಬ್ಬಂದಿ ಮುಸ್ಲಿಂ ಮಹಿಳೆಯರು ಬುರ್ಖಾ ತೆಗೆಯದೆ ಮತ ಹಾಕುತ್ತೇವೆ ಎಂದಾಗ ಏನು ಮಾಡಬೇಕು, ಎಂಬ ಪ್ರಶ್ನೆಗೆ ಉತ್ತರಿಸಿದ ಸಹಾಯಕ ಉಸ್ತುವಾರಿ ಚುನಾವಣಾಧಿಕಾರಿ ಧರ್ಮೋಜಿ ರಾವ್, ಬುರ್ಖಾ ತೆಗೆದು ಮತ ಹಾಕುವಂತೆ ಮನವಿ ಮಾಡಿ ಎಂದರು.

ಹಾಗೆಯೇ ಮತಗಟ್ಟೆ ಕೇಂದ್ರಗಳಾದ ಶಾಲೆಗಳಲ್ಲಿ ಚುನಾವಣೆಗೆ ಸಂಬಂಧಿಸಿದಂತಹ ಚಿಹ್ನೆಗಳನ್ನು ತೆಗೆಯಲಾಗಿದೆ. ಆದರೆ ಕೆಲವು ಶಾಲೆಗಳಲ್ಲಿ ತೆಂಗಿನ ಮರಗಳಿದ್ದು ತೆಂಗಿನಕಾಯಿ ಒಂದು ಪಕ್ಷದ ಚಿಹ್ನೆಯಾಗಿದೆ ಎಂದು ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಅಧಿಕಾರಿ ಧರ್ಮೋಜಿರಾವ್ ತೆಂಗಿನ ಮರಗಳನ್ನು ಕಡಿಯುವ ಅವಕಾಶ ನಮಗೆ ಇಲ್ಲ. ನಮಗೆ ಬೆಳಕು ನೀಡುವ ಸೂರ್ಯ ಕೂಡ ಒಬ್ಬ ಅಭ್ಯರ್ಥಿಯ ಚಿಹ್ನೆಯಾಗಿದ್ದು, ನಾವು ಸೂರ್ಯನನ್ನು ಮುಚ್ಚಲು ಸಾಧ್ಯವೇ ಎಂದರು.

ತಾಲ್ಲೂಕು ಚುನಾವಣಾ ವೀಕ್ಷಕ ಡಾ.ಸಂತೋಷ್‌ಬಾಬು, ವೀಕ್ಷಕರ ಸಂಪರ್ಕಧಿಕಾರಿ ಅಶೋಕ್ ಮೊರಬ, ರಕ್ಷಣಾ ಇಲಾಖೆಯ ಜಿಲ್ಲಾ ಚುನಾವಣಾ ವೀಕ್ಷಕ ಐಜಿಪಿ ಶ್ರೀನಿವಾಸ್‌ರೆಡ್ಡಿ, ಚುನಾವಣಾ ಅಧಿಕಾರಿಗಳಾದ ಡಿವೈಎಸ್‌ಪಿ ಮಂಜುನಾಥ್, ಜಿಲ್ಲಾ ಕೃಷಿ ಇಲಾಖೆ ಜಂಟೀ ನಿರ್ದೇಶಕ ಶಿವಮೂರ್ತಿ, ಪ್ರಕಾಶ್ ಗಣಾಚಾರಿ, ಡಾ.ಚಂದ್ರಶೇಖರ್, ಡಾ. ಪ್ರಭಾಕರ್, ಸಿದ್ದಲಿಂಗೇಶ್, ಚಂದ್ರಶೇಖರ್ ಸೂಲೆ ಪೇಟ್ಕಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದಲಿಂಗಪ್ಪ, ಪಿಎಸ್‌ಐ ಕಿರಣ್‌ಕುಮಾರ್.ಬಿ. ನಾಯಕ್, ತಿಪ್ಪೇಸ್ವಾಮಿ, ಅಪರಾಧ ವಿಭಾಗ ಪಿಎಸ್‌ಐ ಮೋಹನ್‌ಕುಮಾರ್, ಮೇಘರಾಜ್ ಉಪಸ್ಥಿತರಿದ್ದರು.

ತರಬೇತಿ ಸಂದರ್ಭದಲ್ಲಿ ಸಿಬ್ಬಂದಿಗೆ 1036 ಅಂಚೆ ಮತದಾನ ಅರ್ಜಿಗಳನ್ನು ವಿತರಿಸಲಾಯಿತು. ಸಿಬ್ಬಂದಿ ಮತದಾನ ಮಾಡಲು ಸಾಂಸ್ಕೃತಿಕ ಭವನದ ಕೊಠಡಿಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಕೆಲ ನೌಕರರು ಮತದಾನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.