ಸೊರಬ: ನಮಗೆ ಎಂತಹ ಅಭಿವೃದ್ಧಿ ಬೇಕು, ನಮ್ಮ ಜೀವನಶೈಲಿ ಹೇಗೆ ಇರಬೇಕು ಎನ್ನುವುದು ನಮ್ಮ ನಿರ್ಧಾರ ಆಗಿರಬೇಕೇ ಹೊರತು, ಸರ್ಕಾರ ಅಥವಾ ಬಂಡವಾಳಶಾಹಿಗಳ ತೀರ್ಮಾನ ಆಗಿರಬಾರದು ಎಂದು ಧಾರವಾಡದ ಸಮಾಜ ಪರಿವರ್ತನಾ ಸಮಾಜ ತಂಡದ ಶಹನಾಜ್ ಫೌಜುದಾರ್ಹೇಳಿದರು.
ಸೋಮವಾರ ಆನವಟ್ಟಿಯಲ್ಲಿ ಅಕ್ರಮ ಗಣಿಗಾರಿಕೆ ಅನ್ಯಾಯದ ಭೂ ಸ್ವಾಧೀನ ಮತ್ತು ಭ್ರಷ್ಟಾಚಾರದ ವಿರುದ್ಧ, ಪಶ್ಚಿಮ ಘಟ್ಟ ಹಾಗೂ ರಾಜ್ಯದ ವಿವಿಧ ಪ್ರದೇಶಗಳಿಂದ ಕಪ್ಪತ್ತಗುಡ್ಡದವರೆಗೆ ಸತ್ಯಶೋಧನಾ ಸಂಸ್ಥೆ ಇನ್ನಿತರ ಸಂಘಟನೆಗಳ ವತಿಯಿಂದ ಗ್ರಾಮ ಗಣರಾಜ್ಯ ವೇದಿಕೆ ಹಮ್ಮಿಕೊಂಡಿರುವ ಜನ ಜಾಗೃತಿ ಜಾಥಾದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ನಮ್ಮ ನೈಸರ್ಗಿಕ ಸಂಪನ್ಮೂಲಗಳನ್ನು ಬೃಹತ್ ಸಂಸ್ಥೆಗಳಿಗೆ ಧಾರೆ ಎರೆದುಕೊಟ್ಟು, ಲೂಟಿ ಹೊಡೆಯಲು ಅವಕಾಶ ಮಾಡಿಕೊಡುತ್ತಿದ್ದು, ಅವುಗಳ ಅಸ್ತಿತ್ವ ಉಳಿಸಲು ಎಲ್ಲರೂ ಹೋರಾಟ ಹಮ್ಮಿಕೊಳ್ಳುವ ಅಗತ್ಯವಿದೆ. ಆಯಾ ಗ್ರಾಮ ಪಂಚಾಯ್ತಿಗಳು ಠರಾವು ಮೂಲಕ ಇಂತಹ ಕೃತ್ಯಕ್ಕೆ ಕಡಿವಾಣ ಹಾಕಬೇಕು ಎಂದು ಅವರು ಕರೆ ನೀಡಿದರು.
ಗಣಿಗಾರಿಕೆ ದುಷ್ಪರಿಣಾಮ ಕುರಿತು ತಂಡದ ಡಿ.ಜಿ. ಚಿಕ್ಕೇರಿ ಮಾತನಾಡಿ, ಗಣಿಗಾರಿಕೆ ಇದ್ದಲ್ಲಿ ಬಡತನ ಕಟ್ಟಿಟ್ಟ ಬುತ್ತಿ ಇದ್ದಂತೆ ಎಂದರು. ರಾಜ್ಯ ರೈತ ಸಂಘ, ವಿಶ್ವಭಾರತಿ ಟ್ರಸ್ಟ್, ಇನ್ನಿತರ ಸಂಘಟನೆಗಳು ಬೆಂಬಲ ಸೂಚಿಸಿದವು.
ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಕೆ. ಮಂಜುನಾಥಗೌಡ, ವೀರಭದ್ರಗೌಡ, ವಿಶ್ವನಾಥ್ ಅದರಂತೆ, ಗುಡ್ಡಪ್ಪ ದೀಪಾಳಿ, ಭೈರಪ್ಪ ನಿಸರಾಣಿ, ಸರೋಜ ಹವಳದ್, ಸಿ.ವಿ. ಶೆಟ್ಟಿ, ತು.ಗು. ನಾಗರಾಜ್, ಪ್ರೊ.ಎಂ. ನಾರಾಯಣಪ್ಪ, ಸಂಜಯ್ಡೋಂಗ್ರೆ, ಶ್ರೀಧರಾಚಾರ್ ಇತರರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.