ADVERTISEMENT

ಬಿಲ್ವಪತ್ರೆ ಮರ ನೋಡಲು ಭಕ್ತಸಾಗರ

ಮಂಚಿ ಗ್ರಾಮದಲ್ಲಿ ಹನುಮಂತಸ್ವಾಮಿ ವೈಭವದ ಬ್ರಹ್ಮ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2018, 10:56 IST
Last Updated 27 ಮಾರ್ಚ್ 2018, 10:56 IST
ಸೊರಬ ತಾಲ್ಲೂಕಿನ ಪುರಾಣ ಪ್ರಸಿದ್ಧ ಮಂಚಿ ಗ್ರಾಮದಲ್ಲಿ ಹನುಮಂತಸ್ವಾಮಿ ಬ್ರಹ್ಮ ರಥೋತ್ಸವದಲ್ಲಿ ಸೋಮವಾರ ಬೇರು ಸಮೇತ ಕಿತ್ತು ತಂದ ಬಿಲ್ವಪತ್ರೆ ಮರಗಳಿಗೆ ಪೂಜೆ ಸಲ್ಲಿಸಲಾಯಿತು
ಸೊರಬ ತಾಲ್ಲೂಕಿನ ಪುರಾಣ ಪ್ರಸಿದ್ಧ ಮಂಚಿ ಗ್ರಾಮದಲ್ಲಿ ಹನುಮಂತಸ್ವಾಮಿ ಬ್ರಹ್ಮ ರಥೋತ್ಸವದಲ್ಲಿ ಸೋಮವಾರ ಬೇರು ಸಮೇತ ಕಿತ್ತು ತಂದ ಬಿಲ್ವಪತ್ರೆ ಮರಗಳಿಗೆ ಪೂಜೆ ಸಲ್ಲಿಸಲಾಯಿತು   

ಸೊರಬ: ತಾಲ್ಲೂಕಿನ ಪುರಾಣ ಪ್ರಸಿದ್ಧ ಮಂಚಿ ಗ್ರಾಮದ ಹನುಮಂತಸ್ವಾಮಿ ಬ್ರಹ್ಮ ರಥೋತ್ಸವವು ಪ್ರತಿ ವರ್ಷದಂತೆ ಬೇರು ಸಹಿತ ಬಿಲ್ವಪತ್ರೆ ಮರ ತರುವ ಮೂಲಕ ವಿಜೃಂಭಣೆಯಿಂದ ಜರುಗಿತು.

ತಾಲ್ಲೂಕಿನ ಮಂಚಿ ಗ್ರಾಮದಲ್ಲಿ ನಡೆಯುವ ಹನುಮಂತ ದೇವರ ಜಾತ್ರೆಗೆ ವಿಶಿಷ್ಟತೆಯಿದ್ದು, ರಾಮನವಮಿಯ ಮರುದಿವಸವಾದ ಸೋಮವಾರ ಬಿಲ್ವಪತ್ರೆ ಮರವನ್ನು ಬೇರುಸಹಿತ ಕಿತ್ತು ತಂದು ಪೂಜಿಸಲಾಗುತ್ತದೆ. ಅದರಂತೆ ಸೋಮವಾರ ಧಾರ್ಮಿಕ ವಿಧಿವಿಧಾನಗಳು ನಡೆದವು.

ಸಂಪ್ರದಾಯದಂತೆ ಗ್ರಾಮದ ಗಂಗಾಮತಸ್ಥ ಸಮುದಾಯಕ್ಕೆ ಸೇರಿದ ಹನುಮಂತಸ್ವಾಮಿಯ ಆರು ಮಂದಿ ಭಕ್ತರು ಮಧ್ಯಾಹ್ನ ಕಾಡಿಗೆ ತೆರಳಿದ್ದರು. ಸಂಜೆ 5ರ ಸುಮಾರಿಗೆ ಬಿಲ್ವಪತ್ರೆ ಮರವನ್ನು ತಂದಾಗ ಭಕ್ತರ ಜಯಘೋಷ ಮುಗಿಲುಮುಟ್ಟಿತು. ಜಾತ್ರಾ ಮಹೋತ್ಸವದಲ್ಲಿ ಬಿಲ್ವಪತ್ರೆ ಮರ ತರುವ ಪವಾಡ ಪ್ರಸಿದ್ಧವಾಗಿದ್ದು, ಇದನ್ನು ನೋಡಲು ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಬಂದಿದ್ದರು.

ADVERTISEMENT

ಮರವನ್ನು ತಂದ ದಿಕ್ಕು ಹಾಗೂ ಮರದ ಸ್ವರೂಪವನ್ನು ನೋಡಿ ವರ್ಷದ ಮಳೆಗಾಲವನ್ನು ನಿರ್ಧರಿಸಲಾಗುತ್ತದೆ. ಅದರಂತೆ, ಈ ಬಾರಿ ಕಿತ್ತುತಂದ ಮರಗಳು ಚಿಗುರಿನಿಂದ ಕೂಡಿದ್ದು, ಹೆಚ್ಚು ಮಳೆ ಬೀಳಬಹುದು ಎಂಬ ಮಾತು ಕೇಳಿಬಂತು.

ಡೊಳ್ಳು ಕುಣಿತ, ಭಜನೆ ಸೇರಿದಂತೆ ಜನಪದ ಕಲಾತಂಡಗಳು ಜಾತ್ರೆಗೆ ಮೆರುಗು ನೀಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.