ADVERTISEMENT

‘ಮಹಿಳೆಯರ ಹಕ್ಕು ಕಸಿಯುವ ಮುಟ್ಟು ಆಚರಣೆ’

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2017, 9:05 IST
Last Updated 30 ಅಕ್ಟೋಬರ್ 2017, 9:05 IST

ಆನವಟ್ಟಿ: ‘ಮುಟ್ಟಿನ ದಿನಗಳಲ್ಲಿ ಮಹಿಳೆ ಅಶುದ್ಧ ಎಂಬ ಮೌಢ್ಯ ಆಚರಿಸಿ ದೂರವಿಡುವ ಮೂಲಕ ಅವರ ಸರಿಮಾನ ಬದುಕುವ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ’ ಎಂದು ಚಿಂತಕ ರಾಜಪ್ಪ ಮಾಸ್ತರ್ ವಿಷಾದಿಸಿದರು.

ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಘಟಕದ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೀವ ಕೊಡುವ ಪ್ರಕ್ರಿಯೆಗೆ ಕಾರಣವಾಗಿರುವ ಮುಟ್ಟನ್ನು ಅಶುದ್ಧ ಎಂದು ಪರಿಗಣಿಸುವುದು ಸರಿಯಲ್ಲ ಎಂದರು.

‘ಪುರುಷ ಪ್ರಧಾನ ಸಮಾಜದಲ್ಲಿ ರಾಮಯಣದಲ್ಲೂ ಸೀತೆಯನ್ನು ಪವಿತ್ರಳೇ ಎಂದು ಪರೀಕ್ಷೆಗೆ ಒಡ್ಡಿದರು. 14 ವರ್ಷ ವನವಾಸದಲ್ಲಿದ್ದ ರಾಮನನ್ನು ಶೀಲವಂತನೇ ಎಂದು ಪರೀಕ್ಷಿಸಲಿಲ್ಲ. ಮಹಾಭಾರತದಲ್ಲಿ ದ್ರೌಪದಿಯನ್ನು ಜೂಜಿನಲ್ಲಿ ಪಣಕ್ಕೆ ಇಡಲಾಯಿತು. ಇಂತಹ ಸನ್ನಿವೇಶಗಳೇ ಮಹಿಳೆ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಇಂಬು ಕೊಡುತ್ತಿವೆ’ ಎಂದು ಅವರು ಅಭಿಪ್ರಾಯಪಟ್ಟರು.

ADVERTISEMENT

‘ಬಸವಣ್ಣ, ಗಾಂಧೀಜಿ, ಅಂಬೇಡ್ಕರ್ ಅವರಂತಹ ಮಹಾನ್‌ ವ್ಯಕ್ತಿಗಳು ಮಹಿಳೆಗೆ ಸಮಾನ ಸ್ಥಾನಮಾನ ನೀಡಿದ್ದರೂ ಸಮಾಜದಲ್ಲಿ ಮೌಢ್ಯಗಳು ದೂರವಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಈಗಲೂ ಕೆಲವು ಗ್ರಾಮಗಳಲ್ಲಿ ಹಬ್ಬದ ದಿನಗಳಲ್ಲಿ ಮುಟ್ಟಾದ ಮಹಿಳೆಯರನ್ನು ಗ್ರಾಮದಿಂದಲೇ ಹೋರಗಿಡುವ ಪದ್ಧತಿ ಕಂಡುಬರುತ್ತಿವೆ. ತಮ್ಮ ಮನೆಗಳಲ್ಲಿ ಇಂತಹ ಮೌಢ್ಯಗಳನ್ನು ವಿರೋಧಿಸಲು ಪುರುಷರೇ ಮುಂದಾಬೇಕು. ಹಡೆದವಳು ಹೆಣ್ಣು. ಹೀಗಾಗಿ ತಾಯಿಯ ಋಣ ತೀರಿಸಲು ಒಂದು ಅವಕಾಶವಿದೆ’ ಎಂದು ಹೇಳಿದರು.

ಉಪನ್ಯಾಸಕಿ ಮಧು ಮಾತನಾಡಿ, ‘ಮುಟ್ಟು ಮಹಿಳೆಯ ದೇಹದಲ್ಲಾಗುವ ಸಹಜ ಕ್ರಿಯೆ. ಇದು ವೈಜ್ಞಾನಿಕ ಪ್ರಕ್ರಿಯೆ ಎಂಬುದನ್ನು ಮಹಿಳೆ ಮನಗಾಣಬೇಕು. ಮೌಢ್ಯ ಆಚರಣೆಯಿಂದ ಮಹಿಳೆ ಮನಾಸಿಕವಾಗಿ ಹೊರಬಂದು ಮುಕ್ತಳಾಗಬೇಕು’ ಎಂದು ಸಲಹೆ ನೀಡಿದರು.

ಉಪನ್ಯಾಸಕರಾದ ವಿ.ಉಮೇಶ ಸ್ವಾಗತಿಸಿದರು. ಕಾರ್ಯಕ್ರಮವನ್ನು ರಾಜಶೇಖರ್ ನಿರೂಪಿಸಿದರು. ಕುಮಾರಿ ಮೇಘನಾ ವಂದಿಸಿದರು. ಮಹಿಳಾ ಸಂಚಾಲಕಿ ಶೇಖರಮ್ಮ, ಪ್ರಾಶುಂಪಾಲ ಮನೋಹರ್, ಜಾನಾನಾಯ್ಕ್ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.