ADVERTISEMENT

ಮಿಶ್ರಾ ಆಯೋಗದ ವರದಿಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 8 ಜೂನ್ 2011, 7:15 IST
Last Updated 8 ಜೂನ್ 2011, 7:15 IST

ಶಿವಮೊಗ್ಗ: ರಂಗನಾಥ ಮಿಶ್ರಾ ಆಯೋಗದ ವರದಿಯು ಅಲ್ಪಸಂಖ್ಯಾತರಿಗೆ ಶಿಕ್ಷಣ ಹಾಗೂ ಕಲ್ಯಾಣ ಯೋಜನೆಗಳಲ್ಲಿ ಶೇ. 15ರಷ್ಟು ಮೀಸಲಾತಿ ನೀಡಿರುವುದನ್ನು ವಿರೋಧಿಸಿ ಜಿಲ್ಲಾ ಎಸ್‌ಸಿ ಮೋರ್ಚಾ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿತು.

ಪರಿಶಿಷ್ಟ ಜಾತಿಗೆ ದಲಿತ ಕ್ರೈಸ್ತರನ್ನು ಮತ್ತು ದಲಿತ ಮುಸ್ಲಿಂರನ್ನು ಸೇರ್ಪಡೆಗೊಳಿಸಬೇಕು ಎಂದು ವರದಿ ತಿಳಿಸಿದೆ. ಆದರೆ, ಈ ವರದಿ ಸರ್ವಸಮ್ಮತವಾದ ವರದಿ ಅಲ್ಲ. ಪರಿಶಿಷ್ಟ ಜಾತಿಗೆ ದಲಿತ ಕ್ರೈಸ್ತರನ್ನು ಮತ್ತು ದಲಿತ ಮುಸ್ಲಿಂರನ್ನು ಸೇರ್ಪಡೆಗೊಳಿಸುವುದನ್ನು ಆಯೋಗದ ಸಮಿತಿ ಸದಸ್ಯ ಕಾರ್ಯದರ್ಶಿ ಆಶಾದಾಸ್ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.

ಈಗಾಗಲೇ ಎಲ್ಲಾ ಅಲ್ಪಸಂಖ್ಯಾತರಿಗೆ ಓಬಿಸಿ ಮೀಸಲು-27ರ ಅಡಿಯಲ್ಲಿ ಶೇ. 8.4ಅನ್ನು ಮೀಸಲಿರಿಸಲಾಗಿದೆ. ಆದರೆ, ಆಯೋಗದ ಶಿಫಾರಸ್ಸಿನಂತೆ ಅದನ್ನು ಶೇ. 15ಕ್ಕೆ ಹೆಚ್ಚಿಸಿದ್ದಲ್ಲಿ ಹಿಂದುಳಿದ ವರ್ಗಗಳಿಗೆ ಉಳಿಯುವುದು ಶೇ. 12ರ ಮೀಸಲು ಮಾತ್ರ. ಇದು ಇಡೀ ದೇಶದ ಜನಸಂಖ್ಯೆಯಲ್ಲಿ ಶೇ. 52ರಷ್ಟಿರುವ ಆ ವರ್ಗಗಳಿಗೆ ಅನ್ಯಾಯವಾಗಿದೆ ಎಂದು ದೂರಿದರು.

ಧರ್ಮ ಆಧಾರಿತ ಮೀಸಲಾತಿ ನೀಡುವುದು ಸಂವಿಧಾನಕ್ಕೆ ವಿರುದ್ಧವಾಗಿದೆ. ಹಾಗಾಗಿ, ಕೇಂದ್ರ ಸರ್ಕಾರ ಮಿಶ್ರಾ ಆಯೋಗದ ವರದಿಯನ್ನು ತಿರಸ್ಕರಿಸಬೇಕು ಎಂದು ಆಗ್ರಹಿಸಿದರು.

ಅಲ್ಲದೇ, ಮತಾಂತರಗೊಂಡವರಿಗೂ ಪರಿಶಿಷ್ಟ ಸ್ಥಾನಮಾನ ನೀಡಬೇಕೆಂಬ ಬೇಡಿಕೆಯು ನ್ಯಾಯಸಮ್ಮತವಲ್ಲ. ಈ ವರದಿಯು ಪರಿಶಿಷ್ಟ ಜಾತಿ ಹಾಗೂ ಹಿಂದುಳಿದ ವರ್ಗದ ಮರಣಶಾಸನ ಅಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿ, ರಾಷ್ಟ್ರಪತಿಗೆ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಆರ್. ಲಕ್ಷ್ಮಣ್, ಪ್ರಧಾನ ಕಾರ್ಯದರ್ಶಿ ಎಸ್. ದೇವರಾಜ್ ಮಂಡೇನಕೊಪ್ಪ, ಬಿಜೆಪಿ ಮುಖಂಡರಾದ ಎಸ್. ದತ್ತಾತ್ರಿ, ಚಂದ್ರಶೇಖರ್, ನಟರಾಜ್ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.