ಶಿವಮೊಗ್ಗ: ಯುವಸಮೂಹ ಕುವೆಂಪು ಅವರ ಆಶಯದಂತೆ ಸರಳ ಮದುವೆಗೆ ಹೆಚ್ಚಿನ ಒಲವು ತೋರಬೇಕು ಎಂದು ಸಾಹಿತಿ ಪ್ರೊ.ಶ್ರೀಕಂಠ ಕೂಡಿಗೆ ಕರೆ ನೀಡಿದರು.
ನಗರದ ಸಂತ ಥಾಮಸ್ ಸಮುದಾಯ ಭವನದಲ್ಲಿ ಶುಕ್ರವಾರ ನಡೆದ ಉದಯ್ ಮತ್ತು ದಿವ್ಯಾ ಅವರ ಮಂತ್ರ ಮಾಂಗಲ್ಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅನೇಕರಿಂದು ಕೇವಲ ತೋರ್ಪಡಿಕೆಗಾಗಿ ದುಂದುವೆಚ್ಚ ಮಾಡಿ ತಮ್ಮ ಮಕ್ಕಳ ಮದುವೆ ಮಾಡುತ್ತಿದ್ದಾರೆ. ಈ ರೀತಿಯ ಮದುವೆಗಳು ಪೋಷಕರನ್ನು ಸಾಲದ ಸುಳಿಗೆ ನೂಕುತ್ತವೆ. ಹಾಗಾಗಿ ಪೋಷಕರು ಹಾಗೂ ಯುವ ಸಮೂಹ ಈ ರೀತಿಯ ಮದುವೆಗಳಿಂದ ದೂರವುಳಿದು ಸರಳ ಮದುವೆಗಳಿಗೆ ಮನಸ್ಸು ಮಾಡಬೇಕು. ಈ ಹಿನ್ನಲೆಯಲ್ಲಿ ಉದಯ್ ಮತ್ತು ದಿವ್ಯ ದಂಪತಿ ಹಾಗೂ ಅವರ ಪೋಷಕರು ಅಭಿನಂದನೆಗೆ ಅರ್ಹರಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ವಧುವಿನ ತಂದೆ ಹಾಗೂ ಕರ್ನಾಟಕ ವಿಚಾರ ವೇದಿಕೆಯ ಅಧ್ಯಕ್ಷ ಆರ್.ಕುಮಾರ್ ಅವರ ‘ಅಂತಕರಣವು ಅಕ್ಷರವಾದರೇ’ ಪುಸ್ತಕವನ್ನು ಹಿರಿಯ ರೈತ ಮುಖಂಡ ಕಡಿದಾಳು ಶಾಮಣ್ಣ ಬಿಡುಗಡೆಗೊಳಿಸಿದರು.
ಪುಸ್ತಕ ಮನೆಯ ಸುಂದರ್ ‘ಅಂತಕರಣವು ಅಕ್ಷರವಾದರೇ’ ಪುಸ್ತಕದ ಕುರಿತು ಮಾತನಾಡಿ, ‘ಅಕ್ಷತೆ ಮತ್ತು ಅಕ್ಷರ ಸಂಭ್ರಮದ ಜತೆ ಜತೆಯಲ್ಲಿ ನಡೆಯುತ್ತಿರುವ ಈ ಸರಳ ಸಮಾರಂಭವು ಕುವೆಂಪು ಅವರ ಆಶಯಕ್ಕೆ ಅನುಗುಣವಾಗಿದೆ. ಒಂದೆಡೆ ಕುವೆಂಪು ಅವರ ಮಂತ್ರ ಮಾಂಗಲ್ಯದ ಅಡಿಯಲ್ಲಿ ವಿವಾಹ ನೆರವೇರಿದರೇ, ಇನ್ನೊಂದೆಡೆ ವಧುವಿನ ತಂದೆಯಾದ ಕುಮಾರ್ ಅವರು ಇದೇ ಸಂದರ್ಭದಲ್ಲಿ ಒಂದು ವೈಚಾರಿಕ ಕೃತಿ ಬಿಡುಗಡೆ ಮಾಡುತ್ತಿರುವುದು ನಿಜಕ್ಕೂ ಮಾದರಿಯಾಗಿದೆ. ಸ್ವಾತಂತ್ರ್ಯ ಬಂದೂ 7 ದಶಕಗಳ ನಂತರವೂ ಕೂಡ ಶೇ 50 ರಷ್ಟು ಜನತೆ ಅಕ್ಷರ ಸಂಪತ್ತಿನಿಂದ ವಂಚಿತರಾಗಿರುವ ಈ ಸಮಾಜದಲ್ಲಿ ಇಂದಿಗೂ ಅಕ್ಷರ ಕೂಡ ಒಂದು ದೊಡ್ಡ ಸಂಪತ್ತೆ ಆಗಿದೆ’ ಎಂದರು.
ಕನ್ನಡ ಪ್ರಾಧ್ಯಾಪಕ ಡಾ.ಕುಂಸಿ ಉಮೇಶ್ ವಧು–ವರರಿಗೆ ಮಂತ್ರಮಾಂಗಲ್ಯ ಭೋದಿಸಿದರು. ತಮಿಳುನಾಡಿನ ಸಾಮಾಜಿಕ ಕಾರ್ಯಕರ್ತ ತಿರುವುನ್ನಕ್ಕರಸು, ವಧುವಿನ ತಾಯಿ ಶಶಿಕಲಾ, ವರನ ತಾಯಿ ಭೂಮದೇವಿ ಸೇರಿದಂತೆ ಹಲವರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.