ADVERTISEMENT

ರಸಗೊಬ್ಬರ ವಿತರಣೆ ವೇಳೆ ಗದ್ದಲ; ಚೀಲ ನಾಪತ್ತೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2011, 6:20 IST
Last Updated 15 ಸೆಪ್ಟೆಂಬರ್ 2011, 6:20 IST

ಸೊರಬ: ರಸಗೊಬ್ಬರ ಮಾರಾಟ ಕೇಂದ್ರ ಹಾಗೂ ರೈತರ ನಡುವೆ ಗೊಬ್ಬರ ಹಂಚಿಕೆ ವೇಳೆ ಗದ್ದಲ ಉಂಟಾಗಿ 7 ಚೀಲ ಗೊಬ್ಬರ ನಾಪತ್ತೆಯಾದ ಘಟನೆ ಬುಧವಾರ ನಡೆಯಿತು.

ಆನವಟ್ಟಿಯ ವ್ಯವಸಾಯೋತ್ಪನ್ನ ಮಾರುಕಟ್ಟೆ ಮೂಲಕ ಚೀಲವೊಂದಕ್ಕೆ ್ಙ 320 ರಂತೆ ಗೊಬ್ಬರ ವಿತರಣೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಕೃಷಿ ಇಲಾಖೆ ಆದೇಶದ ಪ್ರಕಾರ ್ಙ 310 ಗಿಂತ ಹೆಚ್ಚು ತೆಗೆದುಕೊಳ್ಳುವಂತಿಲ್ಲ ಎಂದು ರಾಜ್ಯ ರೈತಸಂಘದ ಘಟಕ ಹಾಗೂ ರೈತರು ಆಕ್ಷೇಪ ವ್ಯಕ್ತಪಡಿಸಿದರು.

ಗೊಬ್ಬರ ತರಿಸಿಕೊಳ್ಳಲು ್ಙ 317ಕ್ಕೂ ಹೆಚ್ಚು ವೆಚ್ಚ ತಗಲುತ್ತಿದೆ ಎಂದು ವಿವರಿಸಿದ ಸಂಘದ ಅಧ್ಯಕ್ಷ ರಾಜೇಂದ್ರನಾಯ್ಕ, ಸಂಘಕ್ಕೆ ನಷ್ಟವಾಗದಂತೆ, ರೈತರಿಗೆ ಹೊರೆ ಆಗದಂತೆ ನೋಡಿಕೊಳ್ಳಲು ದರ ನಿಗದಿಪಡಿಸಿದ್ದಾಗಿ ಸ್ಪಷ್ಟಪಡಿಸಿದರು.

ಈ ಮೊದಲು ನಷ್ಟದಿಂದ ಮುಚ್ಚಿಹೋಗಿದ್ದ ಸಂಘವನ್ನು ರೈತರಿಗಾಗಿ ಪುನಶ್ಚೇತನ ಮಾಡಿ ಆರಂಭಿಸಲಾಗಿದೆ. ಪುನಃ ನಷ್ಟವಾದರೆ ಅದರ ಅಸ್ತಿತ್ವಕ್ಕೆ ಧಕ್ಕೆ ಉಂಟಾಗುತ್ತದೆ. ಲಾಭಾಂಶವಿದ್ದರೆ ಸಂಘ ಹಾಗೂ ರೈತರು ಇಬ್ಬರಿಗೂ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು.

ನಂತರ ಮಾಜಿ ಜಿ.ಪಂ. ಸದಸ್ಯ ಎ.ಎಲ್. ಅರವಿಂದ್ ಉಪಸ್ಥಿತಿಯಲ್ಲಿ ಮಾತುಕತೆ ನಡೆದು 315ಕ್ಕೆ ದರ ನಿಗದಿಪಡಿಸಿ ವಿತರಣೆಗೆ ಚಾಲನೆ ನೀಡಲಾಯಿತು.

ಆದರೆ, ಈ ಗದ್ದಲದ ನಡುವೆ ಸಂಘದ ಗೋದಾಮಿನಲ್ಲಿದ್ದ 7 ಚೀಲ ಗೊಬ್ಬರ ಕಾಣೆಯಾಗಿತ್ತು.
ಸಂಘದ ನಿರ್ದೇಶಕರಾದ ರಾಮಣ್ಣ, ಚನ್ನಕೇಶವ, ಜಯಲಿಂಗಪ್ಪ, ರೈತ ಸಂಘದ ಬಿ.ವಿ. ಗೌಡ, ಡಿ. ಶಿವಣ್ಣ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.