ADVERTISEMENT

ರಸ್ತೆ ದುರಸ್ತಿಗೆ ಒತ್ತಾಯಿಸಿ ಪ್ರತಿಭಟನೆ

ಸಾಗರ: ವಿವಿಧ ಸಂಘಟನೆಗಳ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2013, 9:55 IST
Last Updated 21 ಡಿಸೆಂಬರ್ 2013, 9:55 IST
ಸಾಗರ ತಾಲ್ಲೂಕಿನ ಇಕ್ಕೇರಿಯ ವೃತ್ತದಿಂದ ಆವಿನಹಳ್ಳಿಗೆ ಹೋಗುವ ರಸ್ತೆ ಹಾಗೂ ಸಿ.ಎಲ್.ಹಳ್ಳಿ-ವರದಾಮೂಲ ಮೂಲಕ ಹೆಗ್ಗೋಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ದುರಸ್ತಿಗೊಳಿಸಬೇಕು ಎಂದು ವಿವಿಧ ಸಂಘಟನೆ ಕಾರ್ಯಕರ್ತರು  ಶುಕ್ರವಾರ ರಸ್ತೆ ತಡೆ ನಡೆಸಿದರು.
ಸಾಗರ ತಾಲ್ಲೂಕಿನ ಇಕ್ಕೇರಿಯ ವೃತ್ತದಿಂದ ಆವಿನಹಳ್ಳಿಗೆ ಹೋಗುವ ರಸ್ತೆ ಹಾಗೂ ಸಿ.ಎಲ್.ಹಳ್ಳಿ-ವರದಾಮೂಲ ಮೂಲಕ ಹೆಗ್ಗೋಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ದುರಸ್ತಿಗೊಳಿಸಬೇಕು ಎಂದು ವಿವಿಧ ಸಂಘಟನೆ ಕಾರ್ಯಕರ್ತರು ಶುಕ್ರವಾರ ರಸ್ತೆ ತಡೆ ನಡೆಸಿದರು.   

ಸಾಗರ: ಇಲ್ಲಿಗೆ ಸಮೀಪದ ಇಕ್ಕೇರಿಯ ವೃತ್ತದಿಂದ ಆವಿನಹಳ್ಳಿಗೆ ಹೋಗುವ ರಸ್ತೆ ಹಾಗೂ ಸಿ.ಎಲ್.ಹಳ್ಳಿ-ವರದಾಮೂಲ ಮೂಲಕ ಹೆಗ್ಗೋಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ದುರಸ್ತಿಗೊಳಿಸಬೇಕು ಎಂದು ವಿವಿಧ ಸಂಘಟನೆಗಳ ಪ್ರಮುಖರು ಇಕ್ಕೇರಿ ವೃತ್ತದಲ್ಲಿ ಶುಕ್ರವಾರ ರಸ್ತೆ ತಡೆ ಚಳವಳಿ ನಡೆಸಿದರು.

ಸುದರ್ಶನ ಯುವಕ ಸಂಘ, ನವೋದಯ ಯುವಕ ಸಂಘ ಹಾಗೂ ಶ್ರಿಕೃಪಾ ಯುವಕ ಮಂಡಳಿ ಸದಸ್ಯರು ಸುಮಾರು ಒಂದು ಗಂಟೆ ಕಾಲ ರಸ್ತೆ ತಡೆ ನಡೆಸಿದರು.

ಕಳೆದ 15 ವರ್ಷಗಳಿಂದ ಈ ಭಾಗದಲ್ಲಿ ರಸ್ತೆ ಡಾಂಬರೀಕರಣವಾಗದೆ ದುಸ್ಥಿತಿಯಲ್ಲಿದೆ. ರಸ್ತೆಯಲ್ಲಿ ವಾಹನಗಳು ಹಾಗೂ ಸಾರ್ವಜನಿಕರು ಸಂಚರಿಸುವುದೆ ದುಸ್ತರವಾಗಿದೆ. ರಸ್ತೆ ರಿಪೇರಿ ಮಾಡುವಂತೆ ಅನೇಕ ಬಾರಿ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.

ಸಿಗಂದೂರು ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಪ್ರವಾಸಿಗರ ವಾಹನಗಳು ಈ ಭಾಗದಲ್ಲಿ ಸಂಚರಿಸುತ್ತಿವೆ. ರಸ್ತೆ ಸರಿ ಇಲ್ಲದ ಕಾರಣ ಕೆಲವು ಅಪಘಾತಗಳು ಕೂಡ ಸಂಭವಿಸಿವೆ. ಇದನ್ನು ಗಮನಿಸಿಯಾದರೂ ತಾಲ್ಲೂಕು ಆಡಳಿತ ಎಚ್ಚೆತ್ತುಕೊಂಡು ರಸ್ತೆ ರಿಪೇರಿ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ರಸ್ತೆ, ಕುಡಿಯುವ ನೀರು, ವಿದ್ಯುತ್ ಪೂರೈಕೆಯಂತಹ ಮೂಲ ಸೌಕರ್ಯ  ಒದಗಿಸುವ ಬಗ್ಗೆ ರಾಜಕೀಯ ಪಕ್ಷಗಳ ಮುಖಂಡರ ಹೇಳಿಕೆ ಕೇವಲ ಘೋಷಣೆಯಾಗಿ ಉಳಿದಿದೆ. ಇಲ್ಲಿನ ರಸ್ತೆಯನ್ನು ಶೀಘ್ರವಾಗಿ ಡಾಂಬರು ಹಾಕದೆ ಇದ್ದಲ್ಲಿ ತೀವ್ರವಾಗಿ ಪ್ರತಿಭಟನೆ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಮಂಜುನಾಥ್ ಚಿಪ್ಳಿ, ಸೆಬಾಸ್ಟಿನ್ ಗೋಮ್ಸ, ದೇವೇಂದ್ರಪ್ಪ, ಸೋಮಶೇಖರ, ನಮೋ ಬ್ರಿಗೇಡ್‌ನ ಕೆ.ಎಲ್.ಭೋಜರಾಜ್, ಶ್ರಿಕೃಪಾ ಯುವಕ ಮಂಡಳಿಯ ವ.ಶಂ.ರಾಮಚಂದ್ರ ಭಟ್, ಶ್ರಿಕಾಂತ್ ಹೊಸೂರು, ಕರ್ನಾಟಕ ರಾಜ್ಯ ರೈತ ಸಂಘದ ಟಿ.ವಿ.ಮಲ್ಲೇಶಪ್ಪ, ರಶೀದ್‌ಸಾಬ್, ಸುರೇಶ್‌ಗೌಡ, ಸತೀಶ್, ಟೋನಿ ಡಿಸೋಜ ಇನ್ನಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.