ADVERTISEMENT

ಶ್ರೀರಾಮ ಸೇನೆ ನಿಷೇಧಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2017, 6:00 IST
Last Updated 5 ಡಿಸೆಂಬರ್ 2017, 6:00 IST

ಶಿವಮೊಗ್ಗ: ಶ್ರೀರಾಮ ಸೇನೆ ಹಾಗೂ ಕೋಮುವಾದಿ ಸಂಘಟನೆಗಳನ್ನು ನಿಷೇಧಿಸಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಸದಸ್ಯರು ಸೋಮವಾರ ಪ್ರತಿಭಟಿಸಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಶ್ರೀರಾಮ ಸೇನೆ ಹಾಗೂ ಕೋಮ ವಾದಿ ಸಂಘಟನೆಗಳ ಕಾರ್ಯಕರ್ತರು ಡಿ.3ರಂದು ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುಡನ್‌ಗಿರಿಯಲ್ಲಿ ದತ್ತಮಾಲೆ ಧರಿಸಿ ಪಾದುಕೆ ದರ್ಶನ ಪಡೆದಿದ್ದಾರೆ. ಇದೇ ನೆಪದಲ್ಲಿ ಕೆಲವರು ನೂರಾರು ವರ್ಷದ ಹಳೆ ಗೋರಿಗಳನ್ನು ಅಲ್ಪಸಂಖ್ಯಾತರ ಆಸ್ತಿಗಳನ್ನು ಹಾನಿಗೊಳಿಸಿ ಅಟ್ಟಹಾಸ ಮೆರೆದಿದ್ದಾರೆ. ಈ ಮೂಲಕ ಎಲ್ಲ ಸಮುದಾಯದವರ ಮನಸ್ಸಿಗೆ ನೋವುಂಟು ಮಾಡಿದ್ದಾರೆ ಎಂದು ಹೇಳಿದರು.

ಕೆಲವು ವರ್ಷಗಳಿಂದ ದತ್ತ ಮಾಲೆಯ ನೆಪದಲ್ಲಿ ಶ್ರೀರಾಮ ಸೇನೆ ಹಾಗೂ ಕೋಮುವಾದಿ ಸಂಘಟನೆಗಳ ಜತೆಯಲ್ಲಿ ಬಿಜೆಪಿ ಸೇರಿಕೊಂಡು ಬಾಬಾಬುಡನ್‌ ಗಿರಿಯಲ್ಲಿ ಶಾಂತಿಭಂಗ ಉಂಟು ಮಾಡುತ್ತಿದೆ. ಇಂತಹ ಸಂಘಟನೆಗಳಿಂದ ಸಮಾಜದ ನೆಮ್ಮದಿ ಹಾಳಾಗುತ್ತಿದೆ. ಹಾಗಾಗಿ, ಶೀಘ್ರವೇ ಶ್ರೀರಾಮ ಸೇನೆ ಹಾಗೂ ಕೋಮುವಾದಿ ಸಂಘಟನೆಗಳನ್ನು ನಿಷೇಧಿಸಬೇಕು. ಪ್ರಮೋದ್ ಮುತಾಲಿಕ್ ಅವರನ್ನು ಬಂಧಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ADVERTISEMENT

ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಆರೀಫ್ ಉಲ್ಲಾ, ನಗರ ಘಟಕದ ಅಧ್ಯಕ್ಷ ಮೊಹಮ್ಮದ್ ನಿಹಾಲ್, ಸಯ್ಯದ್ ವಾಹಿದ್, ಮಹಮ್ಮದ್ ಆಸೀಫ್, ಮಜರ್, ಆಸೀಫ್ ಮಸೂದ್, ಶೇಖ್ ಮಹಮ್ಮದ್, ಮಹಮ್ಮದ್ ಹುಸೇನ್, ಅನ್ಸರ್ ಆಹಮ್ಮದ್,
ಹೈದರ್ ಹುಸೇನ್ ಅವರೂ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.