ADVERTISEMENT

ಸಾಗರ: ಯಯಾತಿ ನಾಟಕ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2011, 8:25 IST
Last Updated 6 ಫೆಬ್ರುವರಿ 2011, 8:25 IST

ಸಾಗರ: ಗತ ಸಮಯದ ಪ್ರತಿಧ್ವನಿಗಳನ್ನು ವರ್ತಮಾನದ ಕಿವಿಗಳಲ್ಲಿ ಕೇಳಬೇಕು ಎಂಬ ಆಶಯ ಗಿರೀಶ್ ಕಾರ್ನಾಡರ ‘ಯಯಾತಿ’ ನಾಟಕದ ಹಿಂದೆ ಇದೆ ಎಂದು ಉಪನ್ಯಾಸಕಿ ವೃಂದಾ ಹೆಗಡೆ ಹೇಳಿದರು. ಪ್ರಜ್ಞಾರಂಗ ತಂಡ ತನ್ನ ದಶಮಾನೋತ್ಸವದ ಅಂಗವಾಗಿ ಈಚೆಗೆ ಏರ್ಪಡಿಸಿದ್ದ ‘ಯಯಾತಿ’ ನಾಟಕ ಪ್ರದರ್ಶನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಇತಿಹಾಸ, ಪುರಾಣ ಹಾಗೂ ಧರ್ಮಗ್ರಂಥಗಳನ್ನು ವರ್ತಮಾನದ ಕಿವಿಗಳಲ್ಲೇ ಕೇಳುವುದು ಸೂಕ್ತ ಎಂಬ ಧೋರಣೆಯನ್ನು ಕಾರ್ನಾಡರು ಹೊಂದಿದ್ದಾರೆ ಎಂದು ವಿಶ್ಲೇಷಿಸಿದರು

ಪ್ರತಿಯೊಂದನ್ನು ಮನುಷ್ಯ ತನ್ನ ಉಪಯೋಗಕ್ಕಾಗಿ ಬಳಸಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿರುವ ಬಗೆ, ಎಲ್ಲವನ್ನೂ ತಾನೆ ಅನುಭವಿಸಬೇಕು ಎಂಬ ಹಪಾಹಪಿತನ ಇವುಗಳ ಚಿತ್ರಣವನ್ನು ನಾಟಕದಲ್ಲಿ ಕಾಣಬಹುದು ಎಂದರು.ಯಯಾತಿ ನಾಟಕದಲ್ಲಿನ ಸ್ತ್ರೀಪಾತ್ರಗಳು ಸಶಕ್ತ ಅಥವಾ ಸ್ವತಂತ್ರ್ಯವಾದದ್ದಲ್ಲ. ಹೆಣ್ಣು ತಾನೊಂದು ಭೋಗದ ವಸ್ತು ಹಾಗೂ ಪ್ರಲೋಭನೆಯ ಪ್ರತೀಕ ಎಂಬುದನ್ನು ತಾನಾಗಿಯೆ ಒಪ್ಪಿಕೊಂಡಿದ್ದಾಳೆ ಎಂಬ ಧ್ವನಿ ನಾಟಕದಲ್ಲಿದೆ ಎಂದು ಅಭಿಪ್ರಾಯಪಟ್ಟರು.

ನಾಟಕದ ನಿರ್ದೇಶಕಿ ಎಸ್. ಮಾಲತಿ ಮಾತನಾಡಿ, ಯಯಾತಿ ನಾಟಕ ಪೌರಾಣಿಕ ಹಾಗೂ ರಾ,ಜಶಾಹಿ ವಸ್ತುವನ್ನು ಹೊಂದಿದ್ದು, ಆಧುನಿಕ ಗುಣ ಇಲ್ಲದಿರುವುದರಿಂದ ಸ್ತ್ರೀಪಾತ್ರಗಳು ಸಶಕ್ತ ಅನಿಸದೇ ಇರುವುದು ಸಹಜವಾಗಿದೆ ಎಂದು ಹೇಳಿದರು.

ಮಹಾಭಾರತದ ವಸ್ತುವನ್ನು ಆಧರಿಸಿದ್ದರೂ ಸ್ವತಂತ್ರ ಪಾತ್ರ ಸೃಷ್ಟಿಯಾಗಿರುವುದು ನಾಟಕದ ವಿಶೇಷತೆ. ಮಹಾಭಾರತದ ಕತೆಗೆ ಹಲವು ಆಯಾಮಗಳನ್ನು ನೀಡಿರುವ ಕಾರಣಕ್ಕೆ ನಾಟಕ ಪ್ರಮುಖವೆನಿಸುತ್ತದೆ ಎಂದರು.

ರಂಗಭೂಮಿ ಒಂದು ಸಮೂಹ ಕ್ರಿಯೆಯಾಗಿದ್ದು, ಸಮಾಜವನ್ನು ಕಟ್ಟುವಲ್ಲಿ, ಳ್ವೆಸಹಬಾಯನ್ನು ಪ್ರತಿಪಾದಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಕಾರಣಕ್ಕೆ ರಂಗಭೂಮಿಯನ್ನು ಬೆಳೆಸುವ ಅಗತ್ಯವಿದೆ ಎಂದು ಹೇಳಿದರು.
ನಗರಸಭೆ ಅಧ್ಯಕ್ಷ ಎಸ್.ವಿ. ಕೃಷ್ಣಮೂರ್ತಿ ನಾಟಕ ಪ್ರದರ್ಶನವನ್ನು ಉದ್ಘಾಟಿಸಿದರು. ಗೀತಾ ಸುಳ್ಯ ಸ್ವಾಗತಿಸಿದರು. ಎಚ್.ಬಿ. ರಾಘವೇಂದ್ರ ವಂದಿಸಿದರು. ಲೋಕೇಶ್ ದೊಂಬೆ ಕಾರ್ಯಕ್ರಮ ನಿರೂಪಿಸಿದರು. ನಂತರ, ಯಯಾತಿ ನಾಟಕ ಪ್ರದರ್ಶನಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.