ADVERTISEMENT

ಸುಂದರೇಶ್‌ ನೆನಪಿಗೆ ಇಂದು ಮೂರು ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2013, 9:49 IST
Last Updated 21 ಡಿಸೆಂಬರ್ 2013, 9:49 IST

ಶಿವಮೊಗ್ಗ:  ರೈತ ಮುಖಂಡ ಎನ್.ಡಿ ಸುಂದರೇಶ್ ಅವರ 21ನೇ ಸ್ಮರಣೆ ಕಾರ್ಯಕ್ರಮ`ವನ್ನು ಮೂರು ಸಂಘಟನೆಗಳು ಬೇರೆ, ಬೇರೆ ಸ್ಥಳಗಳಲ್ಲಿ ಇದೇ 21 ಮತ್ತು 22ರಂದು ಹಮ್ಮಿಕೊಂಡಿವೆ.

ಸುಂದರೇಶ್‌ ಅವರ ಪತ್ನಿ ಶೋಭಾ ಸುಂದರೇಶ್ ಅವರ ಅಧ್ಯಕ್ಷತೆಯ ಎನ್‌.ಡಿ.ಸುಂದರೇಶ್‌ ಪ್ರತಿಷ್ಠಾನ, ಸುಂದರೇಶ್‌ ಸ್ಮರಣಾರ್ಥವಾಗಿ ಡಿ.21ರಂದು ಮಧ್ಯಾಹ್ನ 1ಕ್ಕೆ ಶ್ರೀಶಾರದಾ ದೇವಿ ಅಂಧರ ವಿಕಾಸ ಶಾಲೆಯಲ್ಲಿ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಂಡಿದೆ.

ಡಿ.22ರಂದು ಬೆಳಿಗ್ಗೆ 11ಕ್ಕೆ ನಗರದ ಕಮಲಾ ನೆಹರೂ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ‘ಎನ್‌.ಡಿ.ಸುಂದರೇಶ್‌ ವ್ಯಕ್ತಿ ಮತ್ತು ವ್ಯಕ್ತಿತ್ವ’ ಕುರಿತು ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ. ಇದನ್ನು ನಗರಸಭಾ ಅಧ್ಯಕ್ಷೆ ಖುರ್ಷಿದಾ ಬಾನು ಉದ್ಘಾಟಿಸುವರು. ಅತಿಥಿಗಳಾಗಿ ಸಚಿವ ಕಿಮ್ಮನೆ ರತ್ನಾಕರ ಮತ್ತಿತರರು ಭಾಗವಹಿಸಲಿದ್ದಾರೆ.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಪ್ರೊ.ನಂಜುಂಡಸ್ವಾಮಿ ರಾಜಕೀಯೇತರ ಬಣ) ಸುಂದರೇಶ್ ನೆನಪಿಗಾಗಿ ಇದೇ 21ರಂದು ಬೆಳಿಗ್ಗೆ 11ಕ್ಕೆ ನಗರದ ಅಂಬೇಡ್ಕರ್‌ ಭವನದಲ್ಲಿ ವಿಚಾರ ಸಂಕಿರಣ ಹಮ್ಮಿಕೊಂಡಿದೆ.

ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ವಿಚಾರ ಸಂಕಿರಣ ಉದ್ಘಾಟಿಸುವರು. ಶಾಸಕ ಕೆ.ಎಸ್‌. ಪುಟ್ಟಣ್ಣಯ್ಯ ಅತಿಥಿಗಳಾಗಿ ಭಾಗವಹಿಸುವರು. ಸಂಘದ ಅಧ್ಯಕ್ಷ ಚಾಮರಸಮಾಲೀ ಪಾಟೀಲ್‌ ಅಧ್ಯಕ್ಷತೆ ವಹಿಸುವರು. ತದನಂತರ ವಿವಿಧ ವಿಷಯಗಳ ಕುರಿತಂತೆ ವಿಚಾರ ಸಂಕಿರಣ ನಡೆಯುತ್ತದೆ.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ್‌ ಬಣ) ಸುಂದರೇಶರವರ ನೆನಪಿನ ಸಭೆ ಮತ್ತು ವಿಚಾರ ಸಂಕಿರಣವನ್ನು ಇದೇ 21ರಂದು ಬೆಳಿಗ್ಗೆ 11ಕ್ಕೆ ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿ ಹಮ್ಮಿಕೊಂಡಿದೆ.

ರೈತ ಮುಖಂಡ ಕಡಿದಾಳು ಶಾಮಣ್ಣ ಕಾರ್ಯಕ್ರಮ ಉದ್ಘಾಟಿಸುವರು. ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಅಧ್ಯಕ್ಷತೆ ವಹಿಸುವರು. ತದನಂತರ ವಿಚಾರ ಸಂಕಿರಣ ಏರ್ಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.